ಬಸ್ಸಿನಲ್ಲಿ ನೇತಾಡ್ಕೊಂಡು ಶಾಲಾ-ಕಾಲೇಜು ತೆರಳ್ತಿರೋ ವಿದ್ಯಾರ್ಥಿಗಳು

Public TV
1 Min Read

– ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಕಂಗಾಲು

ಹಾಸನ: ಕೊರೊನಾ ಸಂಕಷ್ಟದ ನಡುವೆ ಇತ್ತೀಚೆಗಷ್ಟೇ ಶಾಲಾ-ಕಾಲೇಜುಗಳು ಆರಂಭವಾಗಿದ್ದರು ಕೂಡ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ನಿತ್ಯ ಪರದಾಡುತ್ತಿರುವ ಘಟನೆ ಹಾಸನದಲ್ಲಿ ನಡೆದಿದೆ.

ಪ್ರಾಣದ ಹಂಗು ತೊರೆದು ವಿದ್ಯಾರ್ಥಿಗಳು ಬಸ್ಸಿನ ಡೋರ್‍ನಲ್ಲಿ ನೇತಾಡುತ್ತಾ ಪ್ರಯಾಣಿಸಬೇಕಾದ ದೃಶ್ಯ ಹಾಸನದಲ್ಲಿ ಕಂಡು ಬರುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಬರೀ ವಿದ್ಯಾರ್ಥಿಗಳೇ ಬಸ್ಸಿಗೆ ಹತ್ತುತ್ತಾರೆ ಎಂದು ಕೆಲವು ಚಾಲಕ, ನಿರ್ವಾಹಕರು ಬಸ್ ನಿಲ್ಲಿಸದೇ ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅರಕಲಗೂಡು ತಾಲೂಕಿನ, ಸಂತೆಮರೂರು ಗ್ರಾಮದಲ್ಲಿ ಸಾರಿಗೆ ಬಸ್ ತಡೆದು ವಿದ್ಯಾರ್ಥಿಗಳಿಗಳು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಬಸ್ ಡ್ರೈವರ್, ಕಂಡಕ್ಟರ್ ಹಾಗೂ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಕಾಲೇಜು ಆರಂಭಗೊಂಡು ತಿಂಗಳು ಕಳೆಯುತ್ತಾ ಬಂದರು ಕೂಡಾ ಸರಿಯಾದ ಬಸ್ ಸೇವೆ ಕಲ್ಪಿಸಿಲ್ಲ. ಇದರಿಂದ ತರಗತಿಗೆ ತೆರಳಲು ಆಗುತ್ತಿಲ್ಲ. ದಿನ ನಿತ್ಯ 40 ರೂ. ಕೊಟ್ಟು ಆಟೋದಲ್ಲಿ ಹೋಗಿ ಬರುವ ಸಂಕಷ್ಟ ಪರಿಸ್ಥಿತಿ ಎದುರಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.

ಕೊರೊನಾ ಸಂಕಷ್ಟ ಕಾಲದಲ್ಲಿ ಕೇವಲ ಶಾಲಾ-ಕಾಲೇಜು ಆರಂಭಿಸಿದ್ರೆ ಮಾತ್ರ ಸಾಲದು, ಸರಿಯಾದ ಬಸ್ ವ್ಯವಸ್ಥೆ ಕಲ್ಪಿಸಲು ಸಂಬಂಧ ಪಟ್ಟ ಸಚಿವರ ಜೊತೆ ಶಿಕ್ಷಣ ಸಚಿವರು ಚರ್ಚಿಸಬೇಕಾಗಿದೆ ಎಂದು ಸಾರ್ವಜನಿಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *