ಬಳ್ಳಾರಿಯ ಗಡಿಭಾಗದ ಮದ್ಯದಂಗಡಿಗಳು ಬಂದ್ – ಆನಂದ್ ಸಿಂಗ್

Public TV
1 Min Read

ಬಳ್ಳಾರಿ: ಜಿಲ್ಲೆಯ ಗಡಿಭಾಗದ ಮದ್ಯದಂಗಡಿಗಳನ್ನ ಬಂದ್ ಮಾಡುವಂತೆ ನಾನು ಜಿಲ್ಲಾಧಿಕಾರಿಗೆ ಆದೇಶ ಕೊಟ್ಟಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಆನಂದ್ ಸಿಂಗ್, ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ನನ್ನ ವಿರೋಧ ಇಲ್ಲ. ಆದರೆ ನಮ್ಮ ಬಳ್ಳಾರಿ ಜಿಲ್ಲೆಗೆ ಆಂಧ್ರ ಪ್ರದೇಶದಿಂದ ಮದ್ಯ ಖರೀದಿಗೆ ಬರುತ್ತಿದ್ದಾರೆ. ಆಂಧ್ರ ಪ್ರದೇಶದಲ್ಲಿ ಮದ್ಯದ ಮೇಲಿನ ಅಬಕಾರಿ ಸುಂಕ ಹೆಚ್ಚಾದ ಕಾರಣ ಬಳ್ಳಾರಿ ಗಡಿ ಭಾಗಕ್ಕೆ ರಹದಾರಿ ಮೂಲಕ ಬರುತ್ತಿದ್ದಾರೆ ಎಂದರು.

ಎಲ್ಲಾ ಕಡೆ ಚೆಕ್ ಪೋಸ್ಟ್‌ಗಳಿವೆ. ಆದರೂ ಅಲ್ಲಿನ ಜನರು ಇಲ್ಲಿಗೆ ಬಂದು ಮದ್ಯ ಖರೀದಿ ಮಾಡಿಕೊಂಡು ಹೋಗುತ್ತಾರೆ. ಅಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನೇ ಒಂದು ರೀತಿ ದಂಧೆ ಮಾಡಿಕೊಂಡಿದ್ದಾರೆ. ಹೀಗಾಗಿ ನಾನು ಬಳ್ಳಾರಿ ಜಿಲ್ಲೆಯ ಗಡಿ ಭಾಗದ ಮದ್ಯದ ಅಂಗಡಿಗಳನ್ನು ಬಂದ್ ಮಾಡಲು ಡಿಸಿಗೆ ಆದೇಶ ನೀಡಿದ್ದೇನೆ ಎಂದು ಆನಂದ್ ಸಿಂಗ್ ಹೇಳಿದರು.

ನಗರದ ಶಾಸಕರು ಇಡೀ ಜಿಲ್ಲೆಯಲ್ಲಿ ಮದ್ಯ ಬಂದ್ ಮಾಡಬೇಕು ಎಂದು ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಮದ್ಯ ಬಂದ್ ಮಾಡುವ ಯೋಚನೆ ಇದೆ. ಈ ಬಗ್ಗೆ ಶಾಸಕರು ಸಹ ಸಲಹೆ ನೀಡಿದ್ದು, ಅದರ ಬಗ್ಗೆ ನಾವು ಚರ್ಚೆ ನಡೆಸುತ್ತಿದ್ದೇವೆ. ಸದ್ಯಕ್ಕೆ ತಾತ್ಕಾಲಿಕವಾಗಿ ಬಳ್ಳಾರಿ ಜಿಲ್ಲೆಯ ಗಡಿಭಾಗದ ಮದ್ಯ ಬಂದ್ ಮಾಡುವಂತೆ ಆದೇಶ ಹೊರಡಿಸಿದ್ದೇನೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *