ಲಕ್ನೋ: ಎರಡು ದಿನಗಳ ಹಿಂದೆ ಇಬ್ಬರು ದಲಿತ ಅಪ್ರಾಪ್ತ ಬಾಲಕಿಯರ ಮೃತದೇಹವು ಬಟ್ಟೆ ಹರಿದುಕೊಂಡು ಹಾಗೂ ಶಾಲಿನಿಂದ ಕುತ್ತಿಗೆ ಬಿಗಿದು ಸಂಶಾಯಸ್ಪದವಾಗಿ ಉತ್ತರ ಪ್ರದೇಶದ ಉನ್ನಾವೋದಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಇದೀಗ ಬಾಲಕಿಯರ ಕುಟುಂಬ ಗಂಭೀರ ಆರೋಪ ಮಾಡಿದೆ.
ಹೊಲದಿಂದ ಬಾಲಕಿಯರ ಮೃತದೇಹಗಳನ್ನು ತೆಗೆಯುವಾಗ ಅವರ ದೇಹವನ್ನು ಶಾಲಿನಿಂದ ಸುತ್ತಲಾಗಿತ್ತು. ಅಲ್ಲದೆ ಬಾಲಕಿಯರು ಧರಿಸಿದ್ದ ಬಟ್ಟೆಗಳು ಹರಿದ ಸ್ಥಿತಿಯಲ್ಲಿದ್ದವು ಎಂದು ಆರೋಪಿಸಿದ್ದಾರೆ. ಇಬ್ಬರು ಸಾವನ್ನಪ್ಪಿದ್ದರೆ ಒಬ್ಬಾಕೆಯ ಸ್ಥಿತಿ ಗಂಭೀರವಾಗಿದ್ದು, ಕಾನ್ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಮ್ಮ ಮಕ್ಕಳ ಶವದಲ್ಲಿ ಬಟ್ಟೆ ಹರಿದು ಶಾಲಿನಿಂದ ಕುತ್ತಿಗೆಯ ಭಾಗಕ್ಕೆ ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಇದು ಸಂಶಯಾಸ್ಪದವಾಗಿದೆ ಎಂದು ಬಾಲಕಿಯ ತಾಯಿಯೊಬ್ಬರು ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. ಇತ್ತ ಉತ್ತರ ಪ್ರದೇಶದ ಡಿ.ಜಿ.ಪಿ ಹೆಚ್.ಸಿ ಅವಸ್ಥಿ, ಬಾಲಕಿಯರ ದೇಹದಲ್ಲಿ ಯಾವುದೇ ರೀತಿಯ ಬಾಹ್ಯ ಗಾಯಗಳು ಕಂಡು ಬಂದಿಲ್ಲ. ಹಾಗಾಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸರು ಘಟನಾ ಸ್ಥಳ ಪರಿಶೀಲನೆ ನಡೆಸಿ ಐಪಿಸಿ ಸೆಕ್ಷನ್ ಪ್ರಕಾರ ಕೊಲೆ ಮತ್ತು ಸಾಕ್ಷಿ ನಾಶದ ಕುರಿತು ಬಾಲಕಿಯ ತಂದೆ ಮಾಡಿರುವ ಆರೋಪದ ಮೆರೆಗೆ ಕೇಸ್ ದಾಖಲಿಸಿಕೊಂಡಿದ್ದಾರೆ. ಮೂವರು ಬಾಲಕಿಯರ ಪೈಕಿ ಗಂಭೀರ ಸ್ಥಿತಿಯಲ್ಲಿರುವ ಬಾಲಕಿಯು 10 ನೇ ತರಗತಿವರೆಗೆ ವಾಸಂಗ ಮಾಡಿದ್ದು, ಇದೀಗ ಚಿಂತಾಜನಕ ಸ್ಥಿತಿಯಲ್ಲಿದ್ದರು ಆಕೆಯನ್ನು 6 ಜನ ವೈದ್ಯರ ತಂಡವೊಂದು ಆರೋಗ್ಯ ಗಮನಿಸುತ್ತಿದೆ.
ಮೃತಪಟ್ಟ ಬಾಲಕಿಯರಲ್ಲಿ ಒಬ್ಬಾಕೆ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಲಿಕೆಯಲ್ಲಿ ಬಹಳ ಮುಂದಿದ್ದಳಂತೆ. ಆದರೆ ಇದೀಗ ಈ ಅಸಹಜ ಸಾವಿನಿಂದಾಗಿ ಬಡ ಕುಟುಂಬ ವರ್ಗ ಚಿಂತೆಗೊಳಗಾಗಿದೆ.