ಪ್ರೀತಿಗೆ ಪೋಷಕರ ವಿರೋಧ- ಪ್ರೇಮಿಗಳು ನೇಣಿಗೆ ಶರಣು

Public TV
1 Min Read

ಯಾದಗಿರಿ: ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಜಿಲ್ಲೆಯ ವಡಗೇರಾ ತಾಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಶರಣಬಸವ (23), ಶೇಖಮ್ಮ (19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಬೆಂಗಳೂರಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಶರಣಬಸವ ಸಂಕ್ರಾಂತಿ ಹಬ್ಬಕ್ಕೆ ಯಾದಗಿರಿಗೆ ಬಂದಿದ್ದ. ಶೇಖಮ್ಮ ಊರಲ್ಲೇ ಕಾಲೇಜಿಗೆ ಹೋಗುತ್ತಿದ್ದಳು. ಇಬ್ಬರ ಮಧ್ಯೆ ಸುಮಾರು ಎರಡು ವರ್ಷದಿಂದ ಪ್ರೀತಿ ಇತ್ತು. ಆದರೆ ಶರಣಬಸವನ ತಂದೆ ಮೈಲಾರಪ್ಪ ಪ್ರೀತಿ ಪ್ರೇಮ ಸರಿಯಲ್ಲ, ಜೀವನದ ಕಡೆ ಗಮನ ಕೊಡು ಎಂದು ಬುದ್ಧಿ ಹೇಳಿದ್ದಾರೆ. ಹೀಗಾಗಿ ಶರಣಬಸವ ಸುಮ್ಮನಾಗಿದ್ದ.

ಇದೀಗ ಬೆಂಗಳೂರಿಂದ ಊರಿಗೆ ಬಂದಿದ್ದ ಶರಣಬಸವ ಶೇಖಮ್ಮಳನ್ನು ಭೇಟಿಯಾಗಲು ಮುಂದಾಗಿದ್ದ. ನಿನ್ನೆ ರಾತ್ರಿ ಗುಂಡಗುರ್ತಿ ಗ್ರಾಮದ ದೊಡ್ಡಪ್ಪನ ಮನೆಯಲ್ಲಿ ಭೇಟಿಯಾಗುವುದಾಗಿ ಪ್ಲಾನ್ ಮಾಡಿದ್ದ. ಅದರಂತೆ ರಾತ್ರಿ ಅಲ್ಲೇ ಭೇಟಿಯಾಗಿ, ಮದುವೆ ವಿಚಾರಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರ ಬಗ್ಗೆ ಇಬ್ಬರೂ ಮಾತನಾಡಿಕೊಂಡಿದ್ದಾರೆ. ಬಳಿಕ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಶಹಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಮೃತ ಕುಟುಂಬಸ್ಥರ ಅಕ್ರಂದನ ಮುಗಿಲು ಮಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *