ಪ್ರಿಯಾಂಕಾ ಗಾಂಧಿ ಬಳಿ ಕ್ಷಮೆ ಕೇಳಿದ ಯುಪಿ ಪೊಲೀಸ್

Public TV
2 Min Read

-ಪ್ರಿಯಾಂಕಾರ ಬೆಲ್ಚಿ ಘಟನೆ ಎಂದು ವಿಶ್ಲೇಷಣೆ
-ಏನಿದು 1977ರ ಬೆಲ್ಚಿ ಘಟನೆ?

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬಳಿ ಉತ್ತರ ಪ್ರದೇಶ ಪೊಲೀಸರು ಕ್ಷಮೆ ಕೇಳಿದ್ದಾರೆ. ಹತ್ರಾಸ್ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿಯಾಗಲು ತೆರಳುತ್ತಿದ್ದ ವೇಳೆ ಯುಪಿ ಪೊಲೀಸರು ಮತ್ತು ಕಾಂಗ್ರೆಸ್ ನಾಯಕರು ನಡುವೆ ಸಂಘರ್ಷವೇ ಉಂಟಾಗಿತ್ತು.

ಈ ಹಿನ್ನೆಲೆ ಯುಪಿ ಪೊಲೀಸರು ಇಬ್ಬರು ನಾಯಕರ ಬಳಿ ಕ್ಷಮೆ ಕೋರಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಲಾಗಿದೆ ಎಂದು ಹೇಳಿದ್ದಾರೆ. ಸೆಪ್ಟೆಂಬರ್ 30ರಂದು ಪೊಲೀಸರು ನಡುವೆ ನಡೆದ ಗಲಾಟೆಯಲ್ಲಿ ರಾಹುಲ್ ಗಾಂಧಿ ಕೆಳಗೆ ಬಿದ್ದಿದ್ದರು. ಅಕ್ಟೋಬರ್ 3ರಂದು ನಡೆದ ಸಂಘರ್ಷದಲ್ಲಿ ಪುರುಷ ಪೊಲೀಸ್ ಅಧಿಕಾರಿಯೋರ್ವ ಪ್ರಿಯಾಂಕಾ ಗಾಂಧಿಯವರ ಕುರ್ತಾ ಹಿಡಿದಿದ್ದರು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪೊಲೀಸರ ನಡೆಯನ್ನ ಖಂಡಿಸಿದ್ದರು.

ಶಿವಸೇನೆಯ ಸಂಸದ ಸಂಜಯ್ ರಾವತ್ ವೈರಲ್ ಆಗಿದ್ದ ಫೋಟೋ ಟ್ವೀಟ್ ಮಾಡಿಕೊಂಡು, ಯೋಗಿ ಜೀ ನಿಮ್ಮ ರಾಜ್ಯದಲ್ಲಿ ಮಹಿಳಾ ಪೊಲೀಸರು ಇಲ್ಲವಾ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದರು. ಹತ್ರಾಸ್ ಕುಟುಂಬಸ್ಥರನ್ನು ಭೇಟಿಯಾದ ವೇಳೆ ಸಂತ್ರಸ್ತೆಯ ತಾಯಿಯನ್ನ ಅಪ್ಪಿಕೊಂಡು ಪ್ರಿಯಾಂಕಾ ಸಮಾಧಾನ ಹೇಳಿರುವ ಫೋಟೋ ಸಹ ವೈರಲ್ ಆಗಿತ್ತು. ಇನ್ನು ಹಲವು ಕಾಂಗ್ರೆಸ್ ಹಿರಿಯ ನಾಯಕರು ಮತ್ತು ರಾಜಕೀಯ ವಿಶ್ಲೇಷಕರು 1977ರ ಘಟನೆಯನ್ನು ಹೋಲಿಸುತ್ತಿದ್ದಾರೆ.

1977ರಲ್ಲಿ ಇಂದಿರಾ ಗಾಂಧಿ ಅವರು ವಿರೋಧ ಪಕ್ಷದಲ್ಲಿದ್ದಾಗ ಬಿಹಾರದ ಬೆಲ್ಚಿಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಇಂತಹವುದೇ ಘಟನೆಗಳು ನಡೆದಿದ್ದವು. ಆ ಭೇಟಿಯ ಬಳಿಕ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿತ್ತು. ಕಾಂಗ್ರೆಸ್ ಹಿರಿಯ ನಾಯಕ ಓಮನ್ ಚಾಂಡಿ, ಇದು ಪ್ರಿಯಾಂಕಾ ಗಾಂಧಿಯವರ ಬೆಲ್ಚಿ ಘಟನೆ ಎಂದು ಕರೆದಿದ್ದಾರೆ.

ಏನಿದು ಬೆಲ್ಚಿ ಘಟನೆ?
ಬಿಹಾರದ ಬೆಲ್ಚಿಯಲ್ಲಿ 10 ದಲಿತರು ಮೇಲ್ಜಾತಿಯ ಶ್ರೀಮಂತರಿಂದ ಕೊಲೆಯಾಗಿದ್ದರು. ರೈಲು, ಜೀಪ್, ಟ್ರ್ಯಾಕ್ಟರ್ ಮತ್ತು ಆನೆ ಮೇಲೆ ಸವಾರಿ ನಡೆಸಿ ಇಂದಿರಾ ಗಾಂಧಿ ಬೆಲ್ಚಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಪರಿಣಾಮ 1980ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು ಎಂದು ವಿಶ್ಲೇಷಕರು ವಿಶ್ಲೇಷಣೆ ಮಾಡುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *