ಪ್ರವಾಹ ಸಂತ್ರಸ್ತರಿಂದ ಶಾಸಕಿ ರೂಪಾಲಿ ನಾಯ್ಕ್‌ಗೆ ಘೆರಾವ್

Public TV
1 Min Read

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮಲ್ಲಾಪುರದಲ್ಲಿ ಸಂತ್ರಸ್ತರಿಗೆ ಕಾಳಜಿ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆ ಮಾಡದಿರುವುದಕ್ಕೆ ಮಲ್ಲಾಪುರದ ಗಾಂಧಿ ನಗರ ಬಡಾವಣೆಯ ಪ್ರವಾಹ ಸಂತ್ರಸ್ತರು ಕಾರವಾರ-ಅಂಕೋಲ ಶಾಸಕಿ ರೂಪಾಲಿ ನಾಯ್ಕ್‌ಗೆ ಘೆರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕಾಳಜಿ ಕೇಂದ್ರದಲ್ಲಿ 80ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದು, ಬಹುತೇಕರು ಮನೆಯ ಯಾವ ವಸ್ತುವೂ ಇಲ್ಲದೇ ನಿರಾಶ್ರಿತರಾಗಿದ್ದಾರೆ. ಇವರಿಗೆ ಮೂಲಭೂತ ಅಗತ್ಯ ವಸ್ತುಗಳಾಗಲಿ, ಕುಡಿಯುವ ನೀರನ್ನೂ ವ್ಯವಸ್ಥೆ ಮಾಡಿಲ್ಲ. ಕಳೆದ ಎರಡು ವರ್ಷದಿಂದ ಈ ಭಾಗದ ಜನರು ಕದ್ರಾ ಜಲಾಶಯದಿಂದ ನೀರು ಬಿಟ್ಟಾಗಲೆಲ್ಲಾ ಮನೆ ಕಳೆದುಕೊಳ್ಳುತಿದ್ದು, ಈ ಹಿಂದೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಶಾಸಕರಿಗೆ ಮನವಿ ಮಾಡಿದ್ದರು.

ಇಂದು ಶಾಸಕಿ ರೂಪಾಲಿ ನಾಯ್ಕ್‌ ಸ್ಥಳಕ್ಕೆ ಆಮಿಸಿದ್ದು, ಈ ವೇಳೆ ಸಂತ್ರಸ್ತರು ತಮ್ಮ ಅಹವಾಲನ್ನು ಸಲ್ಲಿಸಿದ್ದಲ್ಲದೆ, ಕಾಳಜಿ ಕೇಂದ್ರದಲ್ಲಿನ ಅವ್ಯವಸ್ಥೆ ಹಾಗೂ ಕುಡಿಯುವ ನೀರು ಇರದ ಬಗ್ಗೆ ಪ್ರತಿಭಟನೆ ರೂಪದಲ್ಲಿ ಘೇರಾವ್ ಹಾಕಿದ್ದಾರೆ. ಈ ವೇಳೆ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ್‌, ನೀವು ಹೊರಗಿನಿಂದ ಬಂದವರು ನಿಮಗೆ ಪುನರ್ವಸತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಂತ್ರಸ್ಥರು, ನಾವು ತಂದೆಯ ಕಾಲದಿಂದ ಇದೇ ಗ್ರಾಮದಲ್ಲಿ ಇದ್ದು, ಕಂದಾಯ ಕಟ್ಟುತಿದ್ದೇವೆ. ಮತದಾರರ ಪಟ್ಟಿಯಲ್ಲೂ ನಮ್ಮ ಹೆಸರಿದೆ. ಹೀಗಿರುವಾಗ ನಾವು ಹೊರಗಿನವರಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಈ ವೇಳೆ ಪೊಲೀಸರ ಮಧ್ಯ ಪ್ರವೇಶ ದಿಂದ ಗಲಾಟೆ ತಿಳಿಗೊಂಡಿತು.

Share This Article
Leave a Comment

Leave a Reply

Your email address will not be published. Required fields are marked *