ಪ್ರಜಾಪ್ರಭುತ್ವಕ್ಕಾಗಿ ಮಾತನಾಡಿ: ರಾಜಸ್ಥಾನದ ರಾಜಕೀಯ ಬಿಕ್ಕಟ್ಟಿನ ಕುರಿತು ರಾಹುಲ್ ಗಾಂಧಿ ಅಭಿಯಾನ

Public TV
2 Min Read

ನವದೆಹಲಿ: ರಾಜಸ್ಥಾನದ ರಾಜಕೀಯ ಬೆಳವಣಿಗೆ ಕುರಿತು ರಾಹುಲ್ ಗಾಂಧಿ ಮೌನ ಮುರಿದಿದ್ದು, ಸ್ಪೀಕ್‍ಅಪ್ ಫಾರ್ ಡೆಮಾಕ್ರಸಿ ಎಂಬ ಅಭಿಯಾನದ ಮೂಲಕ ಜನರನ್ನು ಸಜ್ಜುಗೊಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಈ ಕುರಿತು ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಅವರು, ರಾಜಸ್ಥಾನದಲ್ಲಿ ರಾಜಕೀಯದ ಬೆಳವಣಿಗೆ ಕುರಿತು ಬಿಜೆಪಿ ವಿರುದ್ಧ ಜನರನ್ನು ಸಜ್ಜುಗೊಳಿಸಲು ಮುಂದಾಗಿದ್ದಾರೆ. ಹ್ಯಾಶ್ ಟ್ಯಾಗ್‍ನೊಂದಿಗೆ ಸ್ಪೀಕ್‍ಅಪ್ ಫಾರ್ ಡೆಮಾಕ್ರಸಿ ಎಂಬ ಅಭಿಯಾನ ಪ್ರಾರಂಭಿಸಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವಕ್ಕಾಗಿ ಒಗ್ಗಟ್ಟಾಗಿ, ಧ್ವನಿ ಎತ್ತಿ  ಎಂದು ಕರೆ ನೀಡಿದ್ದಾರೆ.

ರಾಜಸ್ಥಾನದ ಬಿಕ್ಕಟ್ಟಿನ ಕುರಿತು ಸೋಮವಾರ ದೇಶಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಮುಂದಾಗಿದ್ದು, ಅಶೋಕ್ ಗೆಹ್ಲೋಟ್ ಸರ್ಕಾರ ಅಸ್ಥಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಹೀಗಾಗಿ ರಾಷ್ಟ್ರಪತಿ ಭವನದ ಮುಂಭಾಗ ಪ್ರತಿಭಟನೆ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದ್ದು, ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ.

ಇಡೀ ದೇಶ ಕೊರೊನಾ ವಿರುದ್ಧ ಹೋರಾಡುತ್ತಿರುವಾಗ ಬಿಜೆಪಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡುತ್ತಿದೆ. ಮಧ್ಯ ಪ್ರದೇಶದಲ್ಲಿ ಸಹ ಬಿಜೆಪಿ ಇದೇ ರೀತಿ ಮಾಡಿದೆ. ಹೀಗಾಗಿ ಶೀಘ್ರವೇ ವಿಧಾನಸಭೆ ಅಧಿವೇಶನ ಕರೆಯಬೇಕು ಎಂದು ಕಾಂಗ್ರೆಸ್ ವಿಡಿಯೋದಲ್ಲಿ ಆಗ್ರಹಿಸಿದೆ.

ವಿಧಾನಸಭೆ ಅಧಿವೇಶನ ಆರಂಭಿಸುವ ಪ್ರಸ್ತಾಪವನ್ನು ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ ತಿರಸ್ಕರಿಸಿದ್ದಾರೆ. ಎರಡನೇ ಮನವಿಯನ್ನು ಸಲ್ಲಿಸಲಾಗಿದ್ದು, ಇದನ್ನು ಪರಿಶೀಲಿಸುತ್ತಿದ್ದಾರೆ.

ಹಲವು ಶಾಸಕರ ಬೆಂಬಲದೊಂದಿಗೆ ರಾಜಸ್ಥಾನ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ರೆಬೆಲ್ ಆಗಿದ್ದು, ಅಸಮಾಧಾನಿತ ಶಾಸಕರನ್ನು ಅನರ್ಹಗೊಳಿಸಿ, ಬಹುಮತದ ಸಂಖ್ಯೆಯನ್ನು ಕಡಿಮೆ ಮಾಡಲು ಕಾಂಗ್ರೆಸ್‍ಗೆ ಸಾಧ್ಯವಾಗುತ್ತಿಲ್ಲ.

ಇತ್ತ ಕಾಂಗ್ರೆಸ್ ಸ್ಪೀಕರ್ ನೀಡಿದ್ದ ಅನರ್ಹತೆಯ ನೋಟಿಸ್‍ಗೆ ಹೈ ಕೋರ್ಟ್ ತಾತ್ಕಲಿಕ ರಿಲೀಫ್ ನೀಡಿದೆ. ಬಂಡಾಯ ಶಾಸಕರು ಸಲ್ಲಿಸಿದ್ದ ಅರ್ಜಿ ಸ್ವೀಕರಿಸಿದ್ದ ಕೋರ್ಟ್, ತೀರ್ಪನ್ನು ಶುಕ್ರವಾರದ ವರೆಗೂ ಕಾಯ್ದಿರಿಸಿ ಅಲ್ಲಿವರೆಗೆ ಶಾಸಕರ ವಿರುದ್ಧ ಯಾವುದೇ ರೀತಿಯ ಕ್ರಮಕೈಗೊಳ್ಳಬಾರದು ಎಂದು ಹೇಳಿದೆ. ಪರಿಣಾಮ ಸಚಿನ್ ಪೈಲಟ್ ಬಣಕ್ಕೆ ತಾತ್ಕಲಿಕ ರಿಲೀಫ್ ಲಭಿಸಿದೆ.

Share This Article
Leave a Comment

Leave a Reply

Your email address will not be published. Required fields are marked *