ಪೊಲೀಸ್ ಶ್ವಾನ ಸಾವು-ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ

Public TV
1 Min Read

-ಎರಡು ಬಾರಿ ಐಪಿಎಲ್ ಬಂದೋಬಸ್ತ್ ನಲ್ಲಿ ಭಾಗಿ

ಚಿಕ್ಕಮಗಳೂರು: ರಾಜ್ಯ ಮಟ್ಟದ ಶ್ವಾನ ಸ್ಪರ್ಧೆಯಲ್ಲಿ ಭಾಗವಹಿಸಿ, ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಸಿಎಂ ಭದ್ರತೆಯಲ್ಲೂ ಭಾಗಿಯಾಗಿದ್ದ ಜಿಲ್ಲೆಯ ಪೊಲೀಸ್ ಡಾಗ್ ಸಾವನ್ನಪ್ಪಿದೆ. 12 ವರ್ಷದ ಹನಿ ಮೃತ ಪೊಲೀಸ್ ಶ್ವಾನ.

ವಯೋಸಹಜವಾಗಿ ಸಾವನ್ನಪ್ಪಿರೋ ಹನಿ ಆರೋಗ್ಯ ಸಮಸ್ಯೆಯಿಂದ ಕಳೆದೊಂದು ವಾರದಿಂದ ಅನ್ನ-ಆಹಾರ ಬಿಟ್ಟಿತ್ತು. ತೀವ್ರ ಅಸ್ವಸ್ಥಗೊಂಡಿದ್ದ ಹನಿ ಇಂದು ಬೆಳಗ್ಗೆ ನಿಧನ ಹೊಂದಿದೆ. ಸ್ಫೋಟಕ ಪ್ರಕರಣ ಸೇರಿದಂತೆ ಹಲವು ಕೇಸ್ ಪತ್ತೆ ಹಚ್ಚುವಲ್ಲಿ ಹನಿ ಸಾಕ್ಷಿಯಾಗಿತ್ತು. ಹನಿ ಹೆಚ್ಚಾಗಿ ಸ್ಫೋಟಕಗಳನ್ನ ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತವಾಗಿತ್ತು. ಭದ್ರತೆಗೆಂದು ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಹನಿ ಸಂಚರಿಸಿದೆ. ಅಷ್ಟೆ ಅಲ್ಲದೆ, ಎಡಪಂಥೀಯ ಉಗ್ರಗಾಮಿಗಳ ವಿರುದ್ಧದ ಕಾರ್ಯಚರಣೆಯಲ್ಲೂ ಭಾಗಿಯಾಗಿದೆ.

ಎರಡು ಬಾರಿ ಬೆಂಗಳೂರಿನಲ್ಲಿ ನಡೆದು ಐಪಿಎಲ್ ಪಂದ್ಯಾವಳಿಯ ಭದ್ರತೆಯಲ್ಲೂ ಭಾಗಿಯಾಗಿತ್ತು. ವಲಯ ಮಟ್ಟದ ಕ್ರೀಡಾಕೂಟದಲ್ಲಿ ಎರಡು ಬಾರಿ ಚಿನ್ನದ ಪದಕ ಗಳಿಸಿದ್ರೆ, ಒಂದು ಬಾರಿ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆಲ್ಲೋದರ ಜೊತೆ ಅಖಿಲ ಭಾರತ ರಾಜ್ಯ ಮಟ್ಟದ ಪೊಲೀಸ್ ಕರ್ತವ್ಯ ಕೂಟಕ್ಕೆ ಆಯ್ಕೆಯಾಗಿತ್ತು.

ಇಂದು ಬೆಳಗ್ಗೆ ಸಾವನ್ನಪ್ಪಿದ ಹನಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ನಗರದ ರಾಮನಹಳ್ಳಿಯಲ್ಲಿರುವ ಜಿಲ್ಲಾ ರಿಸರ್ವ್ ಪೊಲೀಸ್ ಗ್ರೌಂಡ್‍ನಲ್ಲಿ ಪೊಲೀಸ್ ಡಾಗ್ ಹನಿಯ ಅಂತಿಮ ದರ್ಶನದ ಬಳಿಕ ಅಂತ್ಯ ಸಂಸ್ಕಾರ ನಡೆದಿದೆ. ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಹನಿಗೆ ಎಸ್.ಪಿ. ಹರೀಶ್ ಪಾಂಡೆ, ಎ.ಎಸ್.ಪಿ. ಶೃತಿ ಸೇರಿದಂತೆ ಸಿಬ್ಬಂದಿ ಅಂತಿಮ ದರ್ಶನ ಪಡೆದಿದ್ದಾರೆ. ರಾಮನಹಳ್ಳಿಯ ಡಿ.ಆರ್.ಗ್ರೌಂಡ್‍ನಲ್ಲಿ ಮೃತ ಹನಿಯ ಅಂತ್ಯಕ್ರಿಯೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *