ಪೊಲೀಸ್ ಠಾಣೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಮೊಬೈಲ್ ಕಳ್ಳ

Public TV
1 Min Read

– ಪೊಲೀಸ್ ಠಾಣೆಯಲ್ಲಿ ರಾದ್ಧಾಂತ, ಮನೆಗೆ ಕಳುಹಿಸಿದ ಪೊಲೀಸರು
– ಮರಳಿ ಬಂದು ಠಾಣೆಯಲ್ಲೇ ಬೆಂಕಿ ಹಚ್ಚಿಕೊಂಡ

ಹೈದರಾಬಾದ್: ಮೊಬೈಲ್ ಕದ್ದ ಆರೋಪಿ ಪೊಲೀಸ್ ಠಾಣೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಬೆಂಕಿಹಚ್ಚಿಕೊಂಡಿರುವ ಘಟನೆ ನಡೆದಿದೆ.

ಹೈದರಾಬಾದ್‍ನ ಚಂದ್ರಯಂಗುತ್ತ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತಕ್ಷಣವೇ ಬೆಂಕಿ ನಂದಿಸಿದ್ದು, ಆರೋಪಿಯನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಶೇ.10ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ನರೇಶ್ ಗೌಡ ಮೊಬೈಲ್ ಕಳೆದಿರುವ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಅದೇ ದಿನ ಸಂಜೆ ಸ್ಥಳೀಯರು ಮೊಬೈಲ್ ಕದ್ದ ಆರೋಪಿಗಳಲ್ಲಿ ಒಬ್ಬನಾದ ಮೊಹಮ್ಮದ್ ಶಬ್ಬಿರ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ನರೇಶ್ ಗೌಡರ ಮೊಬೈಲ್ ಕದ್ದ ಆರೋಪಿಗಳ ಪೈಕಿ ಈತನೂ ಹೌದು ಎಂದು ತಿಳಿಸಿದ್ದಾರೆ.

ಈ ಕುರಿತು ಚಂದ್ರಯಂಗುತ್ತ ಪೊಲೀಸ್ ಇನ್ಸ್ ಪೆಕ್ಟರ್ ರುದ್ರ ಭಾಸ್ಕರ್ ಮಾಹಿತಿ ನೀಡಿದ್ದು, ದೈಹಿಕ ಪರೀಕ್ಷೆ ನಡೆಸಿದಾಗ ಆರೋಪಿ ಬಳಿ ಪೊಲೀಸರಿಗೆ ಸಂತ್ರಸ್ತನ ಮೊಬೈಲ್ ಸಿಕ್ಕಿಲ್ಲ. ನಂತರ ಆರೋಪಿ ಶಬ್ಬಿರ್ ಕೂಗಲು ಪ್ರಾರಂಭಿಸಿದ್ದಾನೆ. ಈ ಮೂಲಕ ಪೊಲೀಸ್ ಠಾಣೆಯಲ್ಲಿ ರಾದ್ಧಾಂತ ಮಾಡಿದ್ದಾನೆ. ಹೀಗೆ ಕೂಗಾಡುವುದನ್ನು ತಾಳಲಾರದೆ ಪೊಲೀಸರು ಆರೋಪಿಯನ್ನು ಮನೆಗೆ ಕಳುಹಿಸಿದ್ದರು. ಕೆಲವೇ ಸಮಯದ ಬಳಿಕ ಮರಳಿ ಪೊಲೀಸ್ ಠಾಣೆಗೆ ಆರೋಪಿ ಬಂದಿದ್ದಾನೆ. ಆಗ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ನಂತರ ಪೊಲೀಸರು ಬೆಂಕಿ ನಂದಿಸಿ ಒಸ್ಮಾನಿಯಾ ಜನರಲ್ ಆ ಸ್ಪತ್ರೆಗೆ ಸೇರಿಸಿದ್ದಾರೆ.

ಈ ವೇಳೆ ಅಡಿಷನಲ್ ಇನ್ಸ್ ಪೆಕ್ಟರ್ ಕೆ.ಎನ್.ಪ್ರಸಾದ್ ವರ್ಮಾ ಹಾಗೂ ಕ್ರೈಂ ಪೊಲೀಸ್ ಕಾನ್‍ಸ್ಟೇಬಲ್‍ಗೂ ಸುಟ್ಟ ಗಾಯಗಳಾಗಿವೆ. ಶಬ್ಬಿರ್ ವಿರುದ್ಧ ಅವರು ದೂರು ನೀಡಿದ್ದರು. ವಿವಿಧ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಒಟ್ಟು 8 ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *