ಪೈಲಟ್‌ ಸಮಸ್ಯೆ ಬಗೆ ಹರಿಸಲು 3 ಮಂದಿಯ ಸಮಿತಿ ನೇಮಿಸಿದ ಕಾಂಗ್ರೆಸ್‌ ಹೈಕಮಾಂಡ್‌

Public TV
1 Min Read

– ದಿಢೀರ್‌ ರಾಹುಲ್‌ ಗಾಂಧಿಯನ್ನು ಭೇಟಿಯಾದ ಪೈಲಟ್‌
– ಬಂಡಾಯದ ಬಳಿಕ ಮೊದಲ ಭೇಟಿ

ನವದೆಹಲಿ: ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾಕ್ಕೆ ಭಾರೀ ಟ್ವಿಸ್ಟ್‌ ಸಿಕ್ಕಿದ್ದು ಕಾಂಗ್ರೆಸ್‌ ರೆಬೆಲ್‌ ನಾಯಕ ಸಚಿನ್‌ ಪೈಲಟ್‌ ಇಂದು ದೆಹಲಿಯಲ್ಲಿ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರನ್ನು ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ತನ್ನ ಆಪ್ತ ಶಾಸಕರ ಜೊತೆ ಕಾಂಗ್ರೆಸ್‌ ಪಕ್ಷಕ್ಕೆ ಸಚಿನ್‌ ಪೈಲಟ್‌ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿಯನ್ನು ಬೆನ್ನಲ್ಲೇ ಇಂದು ಈ ಮಹತ್ವದ ಬೆಳವಣಿಗೆ ನಡೆದಿದೆ. ಜುಲೈ ಮೊದಲ ವಾರದಿಂದ ರಾಜಸ್ಥಾನದಲ್ಲಿ ಹೈಡ್ರಾಮಾ ನಡೆಯುತ್ತಿದ್ದು ಇದೇ ಮೊದಲ ಬಾರಿ ಪೈಲಟ್‌ ಅವರು ಹೈಕಮಾಂಡ್‌ ಜೊತೆ ಸರ್ಕಾರದ ಬಗ್ಗೆ ಇರುವ ಅಸಮಾಧಾನವನ್ನು ಹೇಳಿಕೊಂಡಿದ್ದಾರೆ .

ಪೈಲಟ್‌ ಅವರ ಜೊತೆ ಮಾತನಾಡಿದ ರಾಹುಲ್‌ ಗಾಂಧಿ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದ್ದಾರೆ. ಈ ವೇಳೆ ನಾನು ಕಾಂಗ್ರೆಸ್‌ ತೊರೆಯುವುದಿಲ್ಲ ಎಂದು ಸಚಿನ್‌ ಪೈಲಟ್‌  ತಿಳಿಸಿದ್ದಾರೆ.

ಭೇಟಿಯ ಬಳಿಕ ರಾಜಸ್ಥಾನ ಕಾಂಗ್ರೆಸ್‌ ಉಸ್ತುವಾರಿಯಾಗಿರುವ ವೇಣುಗೋಪಾಲ್‌ ಅವರು, ಸಚಿನ್‌ ಪೈಲಟ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿಯವನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್‌ ಪಕ್ಷ ಮತ್ತು ರಾಜಸ್ಥಾನ ಸರ್ಕಾರದ ಪರವಾಗಿ ಸಚಿನ್‌ ಪೈಲಟ್‌ ಕೆಲಸ ಮಾಡುತ್ತಾರೆ. ಈ ಸಭೆಯ ಬಳಿಕ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸಚಿನ್‌ ಪೈಲಟ್‌ ಅವರ ಸಮಸ್ಯೆಗೆ ಸಂಬಂಧಿಸಿದಂತೆ 3 ಮಂದಿ ನಾಯಕರ ಸಮಿತಿಯನ್ನು ನೇಮಕ ಮಾಡಿದೆ ಎಂದು ಹೇಳಿದ್ದಾರೆ.

ರಾಜಸ್ಥಾನ ಅಧಿವೇಶನಕ್ಕೆ ಕೇವಲ 4 ದಿನಗಳು ಬಾಕಿ ಇರುವಂತೆ ಈ ಪ್ರಮುಖ ಬೆಳವಣಿಗೆ ನಡೆದಿದ್ದು ಗೆಹ್ಲೋಟ್‌ ಸರ್ಕಾರಕ್ಕೆ ಇದ್ದ ಸಮಸ್ಯೆ ಮೇಲ್ನೋಟಕ್ಕೆ ಪರಿಹಾರವಾದಂತೆ ಕಾಣುತ್ತಿದೆ.

ಗೆಹ್ಲೋಟ್‌ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್ ಬಂಡಾಯ ಎದ್ದ ಬಳಿಕ ಅವರನ್ನು ಆ ಸ್ಥಾನದಿಂದ ಇಳಿಸಲಾಗಿತ್ತು. ಅಷ್ಟೇ ಅಲ್ಲದೇ ರಾಜಸ್ಥಾನ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನದಿಂದಲೂ ತೆಗೆದುಹಾಕಲಾಗಿತ್ತು. ಇದಾದ ಬಳಿಕ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿತ 18 ಶಾಸಕರ ಬಣ ರೆಸಾರ್ಟ್ ಸೇರಿಕೊಂಡಿತ್ತು.

Share This Article
Leave a Comment

Leave a Reply

Your email address will not be published. Required fields are marked *