ಪೇಜಾವರ ವಿಶ್ವೇಶತೀರ್ಥರ ಶಿಷ್ಯೆ ತಪೋವನಿ ಮಾತಾಜಿ ಇನ್ನಿಲ್ಲ

Public TV
1 Min Read

ಉಡುಪಿ/ಹರಿದ್ವಾರ: ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಂದ ಮಂತ್ರೋಪದೇಶ ಪಡೆದು ಸುಭದ್ರಾ ಎಂದು ಹೆಸರಿಸಲ್ಪಟ್ಟು, ಅಧ್ಯಾತ್ಮದ ಪಥದಲ್ಲಿ ಉನ್ನತ ಸಾಧನೆ ಮಾಡಿದ್ದ ತಪೋವನಿ ಮಾತಾಜಿ ಸುಭದ್ರಾ ಗುರುವಾರ ಹರಿದ್ವಾರದ ರಾಮಕೃಷ್ಣ ಆಶ್ರಮದ ಆಸ್ಪತ್ರೆಯಲ್ಲಿ ಅಸುನೀಗಿದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಮೂಲತಃ ಉಡುಪಿಯ ಪಂದುಬೆಟ್ಟಿನವರಾಗಿದ್ದು, ಎಳವೆಯಲ್ಲಿಯೇ ಆಧ್ಯಾತ್ಮದತ್ತ ಆಕರ್ಷಿತರಾಗಿದ್ದರು. ಕಳೆದ ಸುಮಾರು 60 ವರ್ಷಗಳ ಹಿಂದೆ ಹಿಮಾಲಯ ಸೇರಿ, ಪ್ರತಿಕೂಲ ವಾತಾವರಣದಲ್ಲೂ ನಿರಂತರ 9 ವರ್ಷ ಕಾಲ ತಪಸ್ಸನ್ನಾಚರಿಸಿದ್ದರು. ಅವರ ಆ ಸಾಧನೆಯಿಂದಲೇ ಹಿಮಾಲಯ ಪ್ರದೇಶದಲ್ಲಿ ತಪೋವನಿ ಮಾ ಎಂದೇ ಪ್ರಸಿದ್ಧರಾಗಿದ್ದರು.

ಹಿಮಾಲಯದ ಪ್ರದೇಶದಲ್ಲೇ ಆಶ್ರಮವೊಂದನ್ನು ತೆರೆದು ಸಾಧುಗಳು, ಯಾತ್ರಿಗಳಿಗೆ ಊಟೋಪಚಾರ, ಆರೋಗ್ಯ ಸೇವೆ ನಡೆಸುತ್ತಿದ್ದರು. ಅನಾರೋಗ್ಯಕ್ಕೊಳಗಾದ ಬಳಿಕ ಹರಿದ್ವಾರದ ಆಚಾರ್ಯ ಬಾಲಕೃಷ್ಣ ವಿಶೇಷ ಮುತುವರ್ಜಿಯಲ್ಲಿ ಸ್ಥಳೀಯ ರಾಮಕೃಷ್ಣ ಆಶ್ರಮ ಆಸ್ಪತ್ರೆಯಲ್ಲಿ ಕಳೆದ ಕೆಲವು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಅವರ ಆಧ್ಯಾತ್ಮ ಸಾಧನೆ ಕುರಿತು ಹಿಂದಿಯಲ್ಲಿ ಪುಸ್ತಕವೊಂದು ಪ್ರಕಟವಾಗಿದೆ. ಅದರ ಕನ್ನಡ ಅನುವಾದವನ್ನು ಪ್ರೊ. ಭಾಸ್ಕರ ಮಯ್ಯ ಮಾಡಿದ್ದು, ಅದನ್ನು ಈಚೆಗೆ ಹರಿದ್ವಾರ ಭೇಟಿ ಸಂದರ್ಭದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮತ್ತು ಆಚಾರ್ಯ ಬಾಲಕೃಷ್ಣ ಅವರು ಮಾತಾಜಿ ಸಮ್ಮುಖದಲ್ಲಿ ಅನಾವರಣಗೊಳಿಸಿದ್ದರು. ಅದಕ್ಕಾಗಿ ವಾಸುದೇವ ಭಟ್ ಪೆರಂಪಳ್ಳಿ ಶ್ರಮಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *