ಪೆಂಟಕೋಸ್ತ್, ಸೆವೆನ್ತ್ ಡೇ ಎಡ್ವೆಂಟಿಸ್ಟ್ ಕ್ರೈಸ್ತರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ: ಶೋಭಾ ಕರಂದ್ಲಾಜೆ

Public TV
1 Min Read

ಉಡುಪಿ: ನನ್ನ ಹೇಳಿಕೆಯನ್ನು ಯಾರು ತಪ್ಪು ಗ್ರಹಿಕೆ ಮಾಡಬೇಡಿ. ಕೊರೊನಾ ವಿಚಾರದಲ್ಲಿ ಮುಖ್ಯವಾಹಿನಿಯಲ್ಲಿರುವ ಚರ್ಚ್ ಗಳು ದಾರಿ ತಪ್ಪಿಸುತ್ತಿಲ್ಲ. ಪೆಂಟಕೋಸ್ತ್ ಮತ್ತು ಸೆವೆನ್ತ್ ಡೇ ಎಡ್ವೆಂಟಿಸ್ಟ್ ಗಳು ದಾರಿ ತಪ್ಪಿಸುತ್ತಿದ್ದಾರೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಉಡುಪಿ ಜಿಲ್ಲೆ ಕುಂದಾಪುರದಲ್ಲಿ ಮಾತನಾಡಿದ ಅವರು, ಲಸಿಕೆ ಬೇಡ, ಏಸು ಕಾಪಾಡುತ್ತಾನೆ ಎಂದು ಹೇಳಿ ಕೆಲ ಗುಂಪಿನ ಕ್ರೈಸ್ತ ಧರ್ಮಗುರುಗಳು ಜನಗಳ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ನಾನು ನನ್ನ ನಿಲುವಿನಲ್ಲಿ ಸ್ಪಷ್ಟ ಇದ್ದೇನೆ ಎಂದು ಹೇಳಿದರು.

ಕ್ರಿಶ್ಚಿಯನ್ ಮತದ ಒಂದು ಗುಂಪು ಕೊರೊನಾ ಲಸಿಕೆಯನ್ನು ವಿರೋಧಿಸುತ್ತಿದೆ. ಆಲ್ದೂರು, ಮೂಡಿಗೆರೆಯ ಕೆಲಭಾಗದಲ್ಲಿ ವಿರೋಧಿಸಲಾಗುತ್ತಿದೆ. ಈ ಗುಂಪು ಸೌತ್ ಇಂಡಿಯನ್ ಚರ್ಚಿಗೆ ಸೇರಿದವರು ಅಲ್ಲ. ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟಂಟ್ ಬಗ್ಗೆ ನಾನು ಹೇಳುತ್ತಿಲ್ಲ. ಹೊಸದಾಗಿ ಮತಾಂತರ ಆರಂಭಿಸಿರುವ ಗುಂಪಿನಿಂದ ಅಪಪ್ರಚಾರ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಪರಿಶಿಷ್ಟ ಜಾತಿ ಪಂಗಡವನ್ನು ಆಮಿಷ ಒಡ್ಡಿ ಮತಾಂತರ ಮಾಡುತ್ತಿದ್ದಾರೆ. ಹೊಸ ಈ ಗುಂಪಿನ ಧರ್ಮಗುರುಗಳು ಲಸಿಕೆ ಪಡೆಯದಂತೆ ಸಲಹೆ ಕೊಡುತ್ತಿದ್ದಾರೆ. ಏಸು ನಿಮ್ಮನ್ನು ಗುಣಪಡಿಸುತ್ತಾನೆ ಎನ್ನುತ್ತಾರೆ. ಲಸಿಕೆ ತೆಗೆದುಕೊಳ್ಳಬೇಡಿ ಎಂದು ದಾರಿತಪ್ಪಿಸುತ್ತಿದ್ದಾರೆ ಇದು ಸರಿಯಲ್ಲ ಎಂದರು.

ನಾನು ವಿವಾದಕ್ಕಾಗಿ ಮಾತನಾಡುತ್ತಿಲ್ಲ. ಜನರು ಜಾಗೃತಿಯಾಗಬೇಕು ಎಂದು ಮಾತನಾಡುತ್ತಿದ್ದೇನೆ. ಅನುಮಾನ ಇದ್ದರೆ ಹೋಗಿ ಅಲ್ಲಿ ಪರಿಶೀಲಿಸಿ ಎಂದು ವಿಪಕ್ಷಗಳಿಗೆ ವಿರೋಧಿಸುವವರಿಗೆ ಸವಾಲು ಎಸೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *