ಪುನೀತ್, ಜೇಮ್ಸ್ ತಂಡದಿಂದ ಸರ್ಕಾರಿ ಶಾಲೆಗೆ 1 ಲಕ್ಷ ದೇಣಿಗೆ

Public TV
1 Min Read

ಕೊಪ್ಪಳ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಜೇಮ್ಸ್ ಚಿತ್ರತಂಡ ಸರ್ಕಾರಿ ಶಾಲೆಗೆ 1 ಲಕ್ಷ ದೇಣಿಗೆ ನೀಡಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪೂರ ಸರ್ಕಾರಿ ಶಾಲೆಗೆ ಜೇಮ್ಸ್ ಚಿತ್ರತಂಡ ಒಂದು ಲಕ್ಷ ಹಣ ದೇಣಿಗೆ ನೀಡಿದೆ. ಸರ್ಕಾರಿ ಶಾಲೆಯ ಮೂಲಭೂತ ಸೌಕರ್ಯಗಳ ಹೆಚ್ಚಿಸಲು ಹಾಗೂ ಸರ್ಕಾರಿ ಶಾಲೆಗಳ ಉತ್ತೇಜನಕ್ಕಾಗಿ ಈ ದೇಣಿಗೆ ನೀಡಲಾಗಿದೆ. ಸರ್ಕಾರಿ ಶಾಲೆಗೆ ಒಂದು ಲಕ್ಷ ಹಣ ನೀಡಿದ್ದಕ್ಕೆ ಗ್ರಾಮಸ್ಥರು, ಶಾಲಾ ಸಿಬ್ಬಂದಿ ಜೇಮ್ಸ್ ಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಹಿಂದೆ ಕೊಪ್ಪಳದಿಲ್ಲಿ ಜೇಮ್ಸ್ ಚಿತ್ರೀಕರಣ ನಡೆಯುತ್ತಿರುವುದನ್ನು ಅರಿತ ಪೊಲೀಸರು ಕೊರೊನಾ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಪುನೀತ್ ಅವರನ್ನು ಆಹ್ವಾನಿಸಿದ್ದರು. ಸಿನಿಮಾ ಶೂಟಿಂಗ್ ಮಧ್ಯೆ ಇದು ಕೂಡ ನನ್ನ ಕರ್ತವ್ಯ ಎಂದು ಅಷ್ಟೇ ಖುಷಿಯಿಂದ ಅಪ್ಪು ಕಾರ್ಯಕ್ರಮದಲ್ಲಿ ಹಾಜರಾಗಿ ಜನರಿಗೆ ಕೊರೊನಾ ಬಗ್ಗೆ ತಿಳಿ ಹೇಳಿದ್ದರು. ಕೊರೊನಾದಿಂದ ಸುರಕ್ಷಿತರಾಗಿರಿ, ಸ್ವಾಸ್ಥ್ಯ ಕಾಪಾಡಿಕೊಳ್ಳಿ, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದರು.

ಯುವರತ್ನ ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಲಾಕ್‍ಡೌನ್ ವೇಳೆ ಬಿಡುವು ಪಡೆದಿದ್ದರು. ಯುವರತ್ನ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ ಎನ್ನಲಾಗಿದ್ದು, ಹೀಗಾಗಿಯೇ ಜೇಮ್ಸ್ ಸಿನಿಮಾದ ಚಿತ್ರೀಕರಣದತ್ತ ಮುಖ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *