ಪಿಪಿಇ ಕಿಟ್ ಧರಿಸಿಕೊಂಡ ಬ್ಲಾಕ್ ಫಂಗಸ್ ರೋಗಿಗಳ ಆರೋಗ್ಯ ವಿಚಾರಿಸಿದ ಡಿಸಿ ರೋಹಿಣಿ ಸಿಂಧೂರಿ

Public TV
3 Min Read

– ಜಿಲ್ಲಾಧಿಕಾರಿಗಳ ಎದುರು ಕಣ್ಣೀರಿಟ್ಟ ಕೊರೊನಾ ರೋಗಿಯ ಸಂಬಂಧಿ
– ಮೈಸೂರಿನಲ್ಲಿ 21 ಬ್ಲಾಕ್ ಫಂಗಸ್ ಪ್ರಕರಣ

ಮೈಸೂರು : ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿನ ಬ್ಲಾಕ್ ಫಂಗಸ್ ರೋಗಿಗಳ ಚಿಕಿತ್ಸೆಯ ವಾರ್ಡ್ ಗೆ ಇಂದು ಡಿಸಿ ರೋಹಿಣಿ ಸಿಂಧೂರಿ ಪಿಪಿಇ ಕಿಟ್ ಹಾಕಿಕೊಂಡು ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು.

ನಂತರ ಮಾತನಾಡಿದ ಅವರು ಮೈಸೂರಿನಲ್ಲಿ 21 ಬ್ಲಾಕ್ ಫಂಗಸ್ ಪ್ರಕರಣ ಇದೆ. ಕೆ.ಆರ್.ಆಸ್ಪತ್ರೆಯಲ್ಲಿ 17, ಜೆಎಸ್‍ಎಸ್ ಆಸ್ಪತ್ರೆಯಲ್ಲಿ 3, ಅಪೋಲೋದಲ್ಲಿ 1 ಪ್ರಕರಣ ಇದ್ದು ಬ್ಲಾಕ್ ಫಂಗಸ್‍ನಿಂದ ಒಬ್ಬರು ಇದುವರೆಗೆ ಮೃತಪಟ್ಟಿದ್ದಾರೆ. ಈಗಾಗಲೇ ಬ್ಲಾಕ್ ಫಂಗಸ್ ಇದ್ದವರಿಗೆ ಚಿಕಿತ್ಸೆ ಕೊಡುತ್ತಿದ್ದೇವೆ. ಆದರೆ ರೋಗದ ಲಕ್ಷಣ ಇದ್ದವರು ಆದಷ್ಟು ಬೇಗನೆ ಆಸ್ಪತ್ರೆಗೆ ಬರುತ್ತಿಲ್ಲ.ಒಂದೇ ಕಡೆ ಮೂಗು ಸೋರುವಿಕೆ, ತಲೆ ವಿಪರೀತ ನೋವು. ಇದೆಲ್ಲವು ಬ್ಲಾಕ್ ಫಂಗಸ್ ಲಕ್ಷಣಗಳು ಆಗಿದೆ ಎಂದು ವಿವರಿಸಿದ ಅವರು, ಈಗ ಕೆ.ಆರ್ ಆಸ್ಪತ್ರೆಯಲ್ಲಿರುವ ಎಲ್ಲಾ ರೋಗಿಗಳು ಕ್ಷೇಮವಾಗಿದ್ದಾರೆ.

ರೋಗಿಗಳು ಸಂಪೂರ್ಣ ಗುಣಮುಖವಾಗಲು ಬರೋಬ್ಬರಿ ಮೂರು ವಾರವೇ ಬೇಕು. ಧ್ಯಾನ ಹಾಗೂ ಸರ್ಜರಿಯೇ ಇದಕ್ಕೆ ಮದ್ದು. ಮೊದಲ ಹಂತದಲ್ಲಿದ್ದರೆ ಅದನ್ನ ಔಷಧೀಯಲ್ಲೇ ಗುಣಪಡಿಸಬಹುದು. ಆದರೆ ನಂತರ ಬಂದರೆ ಸರ್ಜರಿ ಅನಿವಾರ್ಯವಾಗಿದೆ. ಆದಷ್ಟು ಜನರು ಈ ಬಗ್ಗೆ ನಿಗಾ ವಹಿಸಿ ಎಂದು ಡಿಸಿ ರೋಹಿಣಿ ಸಿಂಧೂರಿ ಹೇಳಿದರು.

ಪ್ರತಿ ದಿನ ಆಂಟಿಜನ್ ಟೆಸ್ಟ್: ನಮ್ಮ ಮನೆಯಲ್ಲಿ ನಾಲ್ವರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಮೂವರು ಮನೆಯಲ್ಲಿ, ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಆರೋಗ್ಯ ಸುಧಾರಣೆ ಕಂಡಿದೆ. ನಾನು ಕೋವಿಡ್ ಚೆಕ್ ಮಾಡಿಸಿದಾಗ ನೆಗೆಟಿವ್ ಬಂದಿದೆ. ನಾನು ನಿತ್ಯವೂ ಕೂಡ ಕೊರೊನಾ ತಪಾಸಣೆ ಮಾಡಿಸುತ್ತೇನೆ. ಆಂಟಿಜನ್ ಟೆಸ್ಟ್ ಮಾಡಿಸಿದ ಬಳಿಕವೇ ನಾನು ಸಹ ಕೆಲಸಕ್ಕೆ ಬರೋದು. ನಮ್ಮಿಂದಲೂ ಯಾರಿಗೂ ಸಮಸ್ಯೆ ಆಗಬಾರದು. ಹಾಗಾಗಿ ದಿನದ ತಪಾಸಣೆಯಲ್ಲಿ ನೆಗೆಟಿವ್ ಇದ್ದರೆ ಮಾತ್ರ ಕರ್ತವ್ಯಕ್ಕೆ ಬರುತ್ತೇನೆ ಎಂದು ಡಿಸಿ ರೋಹಿಣಿ ಸಿಂಧೂರಿ ಮಾಹಿತಿ ನೀಡಿದರು.

ಇದು ಮೊದಲಲ್ಲ, ಮೂರನೇ ಬಾರಿ: ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿನ ಕೋವಿಡ್ ಪಾಸಿಟಿವ್ ರೋಗಿಗಳ ಆರೋಗ್ಯವನ್ನು ವಿಚಾರಿಸಲು ಹಿಂದೆ ಎರಡು ಬಾರಿ ಪಿಪಿಇ ಕಿಟ್ ಹಾಕಿಕೊಂಡು ವಾರ್ಡ್ ಗೆ ಹೋಗಿದ್ದೇನೆ. ಇಂದು ಮೂರನೇ ಭೇಟಿ. ಮಾಧ್ಯಮದವರಿಗೆ ಹಿಂದೆ ಮಾಹಿತಿ ನೀಡಿರಲಿಲ್ಲ. ಇವತ್ತು ಬ್ಲ್ಯಾಕ್ ಫಂಗಸ್ ಬಗ್ಗೆ ಜನರಿಗೆ ಅಗತ್ಯ ಮಾಹಿತಿ ನೀಡುವ ಸಲುವಾಗಿ ಮಾಧ್ಯಮದವರನ್ನು ಕರೆಸಬೇಕಾಯಿತು ಎಂದು ಸ್ಪಷ್ಟಪಡಿಸಿದರು.

ಸರ್ಕಾರದಿಂದ ಮಾರ್ಗಸೂಚಿ ಬಂದಿದೆ. ಎಲ್ಲಾ ಜಿಲ್ಲಾಧಿಕಾರಿಗಳು ಆಸ್ಪತ್ರೆಗೆ ಭೇಟಿ ಕೊಟ್ಟು ಮಾಹಿತಿ ಜೊತೆಗೆ ಸಭೆ ಮಾಡಬೇಕೆಂದು. ಹಾಗಾಗಿ ಕೆ.ಆರ್.ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೇನೆ. ಇದು ಮೊದಲ ಭೇಟಿಯಲ್ಲ, ಈಗಾಗಲೇ ಎರಡು ಬಾರಿ ಬಂದಿದ್ದೇನೆ. ಸದ್ಯ ಬ್ಲಾಕ್ ಫಂಗಸ್ ಹೆಚ್ಚಾಗಿರುವ ಕಾರಣ ಇಲ್ಲಿ ಹೆಚ್ಚಿನ ಗಮನ ಹರಿಸಿದ್ದೇವೆ. ಬ್ಲಾಕ್ ಫಂಗಸ್‍ನ ಸಮಸ್ಯೆ ಹೆಚ್ಚಾಗಿರುವ ಕಾರಣ. ನಾನು ಕೆ.ಆರ್ ಆಸ್ಪತ್ರೆ ಭೇಟಿ ಕೊಟ್ಟು ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ. ಇದಕ್ಕೆ ಬೇಕಾದ ಸೂಕ್ತ ಔಷಧಿ ಬಗ್ಗೆ ಸರ್ಕಾರಕ್ಕೆ ತಿಳಿಸುತ್ತೇನೆ. ಜೆಎಸ್‍ಎಸ್ ಆಸ್ಪತ್ರೆಯಿಂದಲು ಔಷಧಿಯ ಬೇಡಿಕೆ ಬಂದಿದೆ. ಹಾಗಾಗಿ ಸರ್ಕಾರಕ್ಕೆ ಪತ್ರ ಬರೆದು ಔಷಧಿಗಾಗಿ ಮನವಿ ಮಾಡುತ್ತೇವೆ. ಸದ್ಯ ಇರುವುದರಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿದ್ದೇವೆ. ಅವರಿಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸಿದ್ದೇವೆ ಎಂದರು.

ಜಿಲ್ಲಾಧಿಕಾರಿಗಳ ಎದುರು ಕಣ್ಣೀರಿಟ್ಟ ಕೊರೊನಾ ರೋಗಿಯ ಸಂಬಂಧಿ: ಆಸ್ಪತ್ರೆಗೆ ಡಿಸಿ ರೋಹಿಣಿ ಸಿಂಧೂರಿ ಭೇಟಿ ನೀಡಿದ್ದ ವೇಳೆ ರೋಗಿಗಳ ಸಂಬಂಧಿಗಳು ಕೊರೊನಾ ವಾರ್ಡ್ ಗಳಲ್ಲಿನ ಅವ್ಯವಸ್ಥೆ ಬಗ್ಗರ ಗಮನಕ್ಕೆ ತಂದರು. ಮೆಡಿಸಿನ್ ಇಲ್ಲ, ವಾರ್ಡ್ ಗಳಲ್ಲಿ ಸ್ವಚ್ಚತೆ ಇಲ್ಲ. ಸೆಕ್ಯೂರಿಟಿಗಳು ಸೌಜನ್ಯವಾಗಿ ವರ್ತಿಸಲ್ಲ ಎಂದು ದೂರಿದರು. ಎಲ್ಲರ ದೂರು ಆಲಿಸಿದ ಡಿಸಿ ರೋಹಿಣಿ ಸಿಂಧೂರಿ, ತಕ್ಷಣವೇ ಕಂಪ್ಲೇಂಟ್ ಬಾಕ್ಸ್ ಆರಂಭಿಸಿ. ಪ್ರತಿ ರೋಗಿ ಸಂಬಂಧಿಯ ದೂರು ಅಲ್ಲಿ ದಾಖಲಾಗಲಿ. ಎಲ್ಲ ದೂರನ್ನು ನಾನೇ ಪ್ರತಿ ದಿನ ಸಂಜೆ ಪರಿಶೀಲಿಸುತ್ತೇನೆ ಎಂದರು.

ನೀವೂ ಒಂದು ಹೆಣ್ಣಾಗಿ ಇಷ್ಟೊಂದು ಸೇವೆ ಮಾಡ್ತಿದ್ದೀರಾ. ನಿಮಗೆ ನಮ್ಮ ಧನ್ಯವಾದಗಳು, ಆದರೆ ಈ ಸಮಸ್ಯೆ ಬಗೆಹರಿಸಿ. ನಮಗೆ ನರ್ಸ್ ಕರೆ ಮಾಡಿ ಕೆಟ್ಟದಾಗಿ ಬೈತಾರೆ ಎಂದು ಮಹಿಳೆಯೊಬ್ಬರು ಡಿಸಿ ಬಳಿ ಕಣ್ಣೀರಿಟಟು ಬೇಸರ ಹೊರಹಾಕಿದರು. ಈ ವೇಳೆ ಮಹಿಳೆಗೆ ಸಾಂತ್ವನ ಹೇಳಿ ಅಧಿಕಾರಿಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

Share This Article
Leave a Comment

Leave a Reply

Your email address will not be published. Required fields are marked *