ಮುತ್ತಿಗೆ ಹಾಕುವುದು ಒಂದು ರೀತಿಯ ಭಯೋತ್ಪಾದನೆಯೇ: ನಳಿನ್ ಕುಮಾರ್

Public TV
1 Min Read

– ಪಿಎಫ್‍ಐ ದೇಶದ್ರೋಹಿ ಚಟುವಟಿಕೆ ನಡೆಸುತ್ತಿದೆ

ಉಡುಪಿ: ಪಿಎಫ್‍ಐ ದೇಶದ್ರೋಹಿ ಚಟುವಟಿಕೆ ನಡೆಸುತ್ತಿದೆ. ಈ ರೀತಿಯ ಯಾವುದೇ ಚಟುವಟಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಿಎಫ್‍ಐ ಕಾರ್ಯಕರ್ತರು ಅವರ ಕಚೇರಿಗೆ ಮುತ್ತಿಗೆ ಹಾಕಿದ ಕುರಿತು ಪ್ರತಿಕ್ರಿಯಿಸಿದ ಅವರು, ಪಿಎಫ್‍ಐ ದೇಶದ್ರೋಹಿ ಚಟುವಟಿಕೆ ನಡೆಸುತ್ತಿದೆ. ಕಾನೂನು ತನ್ನದೇ ಕ್ರಮಕೈಗೊಳ್ಳುತ್ತದೆ. ಈ ತರದ ಯಾವುದೇ ಚಟುವಟಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಯಾವುದೇ ಬಂಧನ ಆದಾಗ ಕಾನೂನು ಪ್ರಕಾರ ಹೋರಾಟ ಮಾಡಬೇಕೇ ಹೊರತು ಮುತ್ತಿಗೆ ಹಾಕುವುದಲ್ಲ. ಮುತ್ತಿಗೆ ಹಾಕುವುದೇ ಒಂದು ರೀತಿಯ ಭಯೋತ್ಪಾದನಾ ಚಟುವಟಿಕೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಗಂಭೀರತೆ ಪಡೆದುಕೊಳ್ಳಲಿದೆ ಎಂದು ತಿಳಿಸಿದರು.

ಮಂಗಳೂರಿನಲ್ಲಿ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಗೋಡೆ ಬರಹದಲ್ಲಿ ಬರೆಯಲಾಗಿತ್ತು. ಎಲ್ಲ ಕೃತ್ಯದ ಹಿಂದೆ ಭಯೋತ್ಪಾದನಾ ಚಟುವಟಿಕೆ ಇದೆ ಅನ್ನಿಸುತ್ತಿದೆ. ನಮ್ಮ ಸರ್ಕಾರ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಎಲ್ಲದಕ್ಕೂ ಉತ್ತರ ನೀಡಲು ಸಿದ್ಧವಾಗಿದೆ ಎಂದು ಎಚ್ಚರಿಕೆ ನೀಡಿದರು.

ಗ್ರಾಮ ಪಂಚಾಯತ್ ಚುನಾವಣೆಗೆ ಬಿಜೆಪಿ ಉತ್ತಮ ಪೂರ್ವತಯಾರಿ ಮಾಡಿಕೊಂಡಿತ್ತು. ಬಿಜೆಪಿ ಹಮ್ಮಿಕೊಂಡ ಕುಟುಂಬ ಮಿಲನ, ಪಂಚರತ್ನ ಯೋಜನೆಗಳು ಯಶಸ್ವಿಯಾಗಿವೆ. ನಮ್ಮ ಕಾರ್ಯಕರ್ತರಿಗೆ ರಾಜ್ಯಾದ್ಯಂತ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಅಭಿವೃದ್ಧಿ ಕಾರ್ಯವೇ ಶ್ರೀರಕ್ಷೆ. ರಾಜ್ಯಾದ್ಯಂತ ಬಿಜೆಪಿ ಪರ ಒಲವು ಕಂಡುಬರುತ್ತಿದೆ. ಎರಡೂ ಹಂತದ ಚುನಾವಣೆಯಲ್ಲಿ ಉತ್ತಮ ಶೇಕಡಾವಾರು ಮತದಾನ ಆಗಿದೆ ಎಂದರು.

ಕಾಂಗ್ರೆಸ್‍ನಲ್ಲಿ ಅಭ್ಯರ್ಥಿಗಳಿಗೆ ಕೊರತೆಯಾಗಿತ್ತು. ಮತಗಟ್ಟೆಯಲ್ಲಿ ಕೆಲಸ ಮಾಡಲು ಕಾರ್ಯಕರ್ತರೇ ಇರಲಿಲ್ಲ. ಸದ್ಯ ಕಾಂಗ್ರೆಸ್ ಮುಳುಗುವ ಹಡಗು ಆಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಕ್ಸಿಜನ್‍ನಲ್ಲಿದೆ ಎಂದು ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *