ಪಾತಾಳಕ್ಕೆ ಕುಸಿದ ಬದನೆಕಾಯಿ ಬೆಲೆ- ರೈತರಿಂದಲೇ ಬೆಳೆ ನಾಶ

Public TV
1 Min Read

ರಾಯಚೂರು: ಏಕಾಏಕಿ ಬೆಲೆ ಇಳಿಕೆಯಾದ ಹಿನ್ನೆಲೆ ರಾಯಚೂರಿನ ಮನ್ಸಲಾಪುರದಲ್ಲಿ ರೈತ ತಾನೇ ಬೆಳೆದ ಬೆಳೆಯನ್ನ ಕಿತ್ತಿ ಹಾಕಿದ್ದಾರೆ. ಐದು ಎಕರೆ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬದನೆಗಿಡವನ್ನ ರೈತ ಶ್ರೀಧರ ಸಾಗರ್ ಕಿತ್ತು ಹಾಕಿದ್ದಾರೆ.

ಸಂಪೂರ್ಣ 5 ಎಕರೆ ಬದನೆ ಬಿತ್ತನೆ ಮಾಡಿ, ಹನಿನೀರಾವರಿ ಅಳವಡಿಸಿ ಸುಮಾರು 4 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಆದ್ರೆ ದರ ಇಳಿಕೆ ಹಿನ್ನೆಲೆ ಬದನೆಗಿಡ ಕಿತ್ತಿದ್ದಾರೆ. ಈ ಮೊದಲು ಪ್ರತಿ ಚೀಲಕ್ಕೆ 1,500 ರೂಪಾಯಿವರೆಗೆ ಬೆಲೆ ಇತ್ತು. ಆದ್ರೆ ಈಗ 300 ರಿಂದ 600 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಈಗ ಇನ್ನಷ್ಟು ಖರ್ಚು ಮಾಡಿ ಬೆಳೆ ಬೆಳೆದರೆ ನಷ್ಟದ ಪ್ರಮಾಣವು ಹೆಚ್ಚಾಗುವುದು. ಹಾಗಾಗಿ ರೈತ ಬೆಳೆಯನ್ನ ನಾಶ ಮಾಡುತ್ತಿದ್ದಾರೆ.

ಹದಿನೈದು ದಿನಗಳ ಹಿಂದೆ ಮಾರುಕಟ್ಟೆಯಲ್ಲಿ 60 ರೂಪಾಯಿಗೆ ಒಂದು ಕೆ.ಜಿ ಇದ್ದ, ಬದನೆಕಾಯಿ ಈಗ 15 ಗೆ ಒಂದು ಕೆ.ಜಿ ಆಗಿದೆ. ಶ್ರಾವಣಮಾಸದ ಬಳಿಕ ತರಕಾರಿ ಬೆಲೆಯಲ್ಲಿ ಏರುಪೇರಾಗಿದ್ದು ಬದನೆಕಾಯಿ ಬೆಲೆಯಂತೂ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ತರಕಾರಿ ಬೆಳೆಗಾರರು ನಷ್ಟದಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *