ಪಾಕಿಸ್ತಾನ ಜಿಂದಾಬಾದ್, ಅಲ್ಲಾಹು ಅಕ್ಬರ್ ಅಂದ್ರೆ ಕಾಂಗ್ರೆಸ್‍ಗೆ ಖುಷಿ ಆಗ್ತಿತ್ತಾ? : ಈಶ್ವರಪ್ಪ

Public TV
1 Min Read

ಶಿವಮೊಗ್ಗ: ಪಾಕಿಸ್ತಾನ ಜಿಂದಾಬಾದ್, ಅಲ್ಲಹೋ ಅಕ್ಬರ್ ಎಂದು ಘೋಷಣೆ ಹಾಕಿದ್ದರೆ ಕಾಂಗ್ರೆಸ್‍ನವರಿಗೆ ಖುಷಿ ಆಗುತ್ತಿತ್ತಾ ಎಂದು ಸಚಿವ ಈಶ್ವರಪ್ಪ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಭದ್ರಾವತಿಯಲ್ಲಿ ಕಬ್ಬಡಿ ಪಂದ್ಯದ ವೇಳೆ ನಡೆದ ಘಟನೆಯಲ್ಲಿ ಜೈ ಶ್ರೀರಾಮ್, ಭಾರತ್ ಮಾತಾಕೀ ಜೈ ಎಂದು ಕೂಗಿದಕ್ಕೆ ಕಾಂಗ್ರೆಸ್ ಈ ರೀತಿ ಸಮಾವೇಶ ನಡೆಸುತ್ತಿದ್ದು, ಸಮಾವೇಶದಲ್ಲಿ ರಾಜ್ಯದ ನಾಯಕರುಗಳು ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ಪ್ರತಿಭಟನೆ, ಸಮಾವೇಶ ನಡೆಸುವ ಮೊದಲು ಭದ್ರಾವತಿಗೆ ಒಮ್ಮೆ ಹೋಗಿ ಬರಲಿ. ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳನ್ನು ಮಾತಾಡಿಸಿ ಘಟನೆ ಬಗ್ಗೆ ತಿಳಿದುಕೊಳ್ಳಲಿ ಎಂದರು.

ಪಂದ್ಯಾವಳಿಯಲ್ಲಿ ಗೆದ್ದ ತಂಡವೊಂದು ಜೈ ಶ್ರೀರಾಮ್, ಭಾರತ್ ಮಾತಾಕೀ ಜೈ ಎಂದು ಕೂಗಿದ್ದಾರೆ. ಈ ಘೋಷಣೆ ಕೂಗಿದ್ದಕ್ಕೆ ಶಾಸಕ ಸಂಗಮೇಶ್ ಮತ್ತು ಅವರ ಪುತ್ರರಿಗೆ ಹಾಗೂ ಬೆಂಬಲಿಗರಿಗೆ ಏಕೆ ನೋವಾಯಿತೋ ಗೊತ್ತಿಲ್ಲ. ಹಾಗಾದರೆ ಪಾಕಿಸ್ತಾನ ಜಿಂದಾಬಾದ್, ಅಲ್ಲಾಹೋ ಅಕ್ಬರ್ ಎಂದು ಕೂಗಿದ್ದರೆ ಖುಷಿ ಆಗುತ್ತಿತ್ತಾ ಎಂದು ಸಚಿವ ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಭದ್ರಾವತಿ ಘಟನೆಯನ್ನು ಕಾಂಗ್ರೆಸ್ ಸ್ಪರ್ಧಾ ಮನೋಭಾವದಿಂದ ತೆಗೆದುಕೊಳ್ಳಬೇಕಿತ್ತು. ಅದನ್ನು ಬಿಟ್ಟು ಸಮಾವೇಶ ನಡೆಸುತ್ತಿರುವುದು ಸರಿ ಅಲ್ಲ. ಈ ಘಟನೆಯನ್ನು ರಾಜ್ಯದ ಜನ, ಜಿಲ್ಲೆಯ ಜನ, ಅದರಲ್ಲೂ ಭದ್ರಾವತಿ ಜನ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಇದನ್ನೇ ಮುಂದುವರೆಸಿಕೊಂಡು ಹೋದರೆ ಮುಂದಿನ ದಿನಗಳಲ್ಲಿ ಅಧೋಗತಿಗೆ ಇಳಿಯುವುದರಲ್ಲಿ ಅನುಮಾನವಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *