ಪರೀಕ್ಷಾ ಕೇಂದ್ರಕ್ಕೆ ಮಗನನ್ನ ಬಿಡಲು ಹೊರಟಿದ್ದ ಶಿಕ್ಷಕ ಅಪಘಾತದಲ್ಲಿ ಸಾವು

Public TV
1 Min Read

ರಾಯಚೂರು: ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದ ಶಿಕ್ಷಕ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ದೇವದುರ್ಗದ ಮೀಯಾಪುರ ಕ್ರಾಸ್ ಬಳಿ ನಡೆದಿದೆ.

ನಾಗಿರೆಡ್ಡಿ (57) ಮೃತ ಶಿಕ್ಷಕಕನಾಗಿದ್ದು, ಇವರ ಜೊತೆಗೆ ಪರೀಕ್ಷೆ ಬರೆಯಲು ತೆರಳುತ್ತಿದ್ದ ಅವರ ಮಗನಿಗೂ ಗಂಭೀರ ಗಾಯಗಳಾಗಿವೆ. ಬೈಕ್ ಗೆ ಆಕಳು ಅಡ್ಡ ಬಂದಿದ್ದರಿಂದ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಗಾಯಾಳು ಮಗನನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ತಾಲೂಕಿನ ಸುಂಕೇಶ್ವರಾಳದಲ್ಲಿ ಶಿಕ್ಷಕರಾಗಿರುವ ನಾಗಿರೆಡ್ಡಿಯನ್ನ ಮಸರಕಲ್ ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲಾಗಿತ್ತು. ಮಗನನ್ನ ಗಬ್ಬೂರಿನ ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಕರ್ತವ್ಯಕ್ಕೆ ತೆರಳಲು ಹೊರಟಿದ್ದ ಶಿಕ್ಷಕ ಅಪಘಾತದಿಂದ ಸಾವನ್ನಪ್ಪಿದ್ದಾರೆ. ಪರೀಕ್ಷೆಗೆ ತಂದೆಯ ಜೊತೆ ತೆರಳುತ್ತಿದ್ದ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿರುವುದರಿಂದ ರಾಯಚೂರಿಗೆ ಕರೆತರಲಾಗುತ್ತಿದೆ.

ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *