ಪಬ್ಲಿಕ್ ಟಿವಿ ಜ್ಞಾನದೀವಿಗೆ- ರಾಯಚೂರಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ

Public TV
1 Min Read

ರಾಯಚೂರು: ಪಬ್ಲಿಕ್ ಟಿವಿಯ ಮಹಾಯಜ್ಞ ಜ್ಞಾನದೀವಿಗೆ ಕಾರ್ಯಕ್ರಮ ಅಂಗವಾಗಿ ರಾಯಚೂರಿನ ಉಡಮಗಲ್ ಖಾನಾಪುರ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಇಂದು ಉಚಿತ ಟ್ಯಾಬ್ ವಿತರಿಸಲಾಯಿತು. ಆನ್‍ಲೈನ್ ತರಗತಿಗೆ ಬೇಸತ್ತಿರುವ ಗ್ರಾಮೀಣ ಭಾಗದ ಮಕ್ಕಳು ಖುಷಿಯನ್ನ ವ್ಯಕ್ತಪಡಿಸಿದರು.

ಕೊರೊನಾ ಸಂದರ್ಭದಲ್ಲಿ ಸರ್ಕಾರಿ ಶಾಲೆ ಮಕ್ಕಳು ಹಿಂದುಳಿಯಬಾರದು ಅನ್ನೋ ಕಾರಣದಿಂದ ರೋಟರಿ ಕ್ಲಬ್ ಸಹಯೋಗದೊಂದಿಗೆ ಪಬ್ಲಿಕ್ ಟಿವಿ ಆರಂಭಿಸಿರುವ ಜ್ಞಾನದೀವಿಗೆ ಕಾರ್ಯಕ್ರಮಕ್ಕೆ ದಾನಿಗಳ ಮಹಾಪೂರವೇ ಹರಿದು ಬರುತ್ತಿದೆ. ದಾನಿಗಳ ಸಹಕಾರದಿಂದ ರಾಜ್ಯದ ಮೂಲೆ ಮೂಲೆಯ ಭಾಗದ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಉಚಿತ ಟ್ಯಾಬ್ ದೊರೆಯುತ್ತಿದೆ. ಕಾರ್ಯಕ್ರಮದ ಅಂಗವಾಗಿ ರಾಯಚೂರಿನ ಉಡಮಗಲ್ ಖಾನಾಪುರ ಪ್ರೌಢಶಾಲೆಯ 103 ಮಕ್ಕಳಿಗೆ 51 ಟ್ಯಾಬ್ ಗಳನ್ನ ನೀಡಲಾಯಿತು.

ರೋಟರಿ ಕ್ಲಬ್ ರಾಯಚೂರು ಸೆಂಟ್ರಲ್ ಸಹಯೋಗದೊಂದಿಗೆ ಪಬ್ಲಿಕ್ ಟಿವಿ ಆಯೋಜಿದ್ದ ಕಾರ್ಯಕ್ರಮದಲ್ಲಿ ದಾನಿಗಳಿಂದ ಮಕ್ಕಳಿಗೆ ಟ್ಯಾಬ್ ವಿತರಿಸಲಾಯಿತು. ಸ್ವತಃ ಉಡುಮಗಲ್ ಖಾನಾಪುರ ಪ್ರೌಢಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು 15 ಟ್ಯಾಬ್‍ಗಳನ್ನ ನೀಡಿದ್ದು ವಿಶೇಷ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಯಚೂರು, ಗುರುರಾಜ ಸೇನೆ ಸೇರಿದಂತೆ ವಿವಿಧ ದಾನಿಗಳ ಸಹಕಾರದಿಂದ 51 ಟ್ಯಾಬ್‍ಗಳನ್ನ ವಿದ್ಯಾರ್ಥಿಗಳಿಗೆ ವಿತರಿಸಲಾಗಿದ್ದು, ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ನೆಟ್‍ವರ್ಕ್ ಸಮಸ್ಯೆ ಸೇರಿ ನಾನಾ ಕಾರಣಗಳಿಂದ ಆನ್‍ಲೈನ್ ತರಗತಿ ಕಬ್ಬಿಣದ ಕಡಲೆಯಂತಾಗಿತ್ತು. ಶಾಲೆಯೂ ಇಲ್ಲಾ ಆನ್‍ಲೈನ್ ತರಗತಿಯೂ ಇಲ್ಲದೆ ಸರ್ಕಾರಿ ಶಾಲೆ ಮಕ್ಕಳು ಕೂಲಿಕೆಲಸಕ್ಕೆ ಹೋಗಿದ್ದಾರೆ. ಪಬ್ಲಿಕ್ ಟಿವಿ ಟ್ಯಾಬ್‍ಗಳಿಂದ ವಿದ್ಯಾರ್ಥಿಗಳಿಗೆ ಮನೆಯಲ್ಲೇ ಕುಳಿದು ಅಭ್ಯಾಸ ಮಾಡಲು ಅನುಕೂಲವಾಗುತ್ತದೆ ಅಂತ ದಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನೂ ಟ್ಯಾಬ್‍ಗಳ ಸದ್ಬಳಕೆ ಜವಾಬ್ದಾರಿಯನ್ನ ಹೊತ್ತುಕೊಂಡಿರುವ ಶಾಲೆಯ ಶಿಕ್ಷಕರು ಪಬ್ಲಿಕ್ ಟಿವಿ ಹಾಗೂ ರೋಟರಿ ಇಂಟರ್ ನ್ಯಾಷನಲ್‍ಗೆ ಧನ್ಯವಾದ ಅರ್ಪಿಸಿದ್ದಾರೆ.

ಕಾರ್ಯಕ್ರಮದಲ್ಲಿ ರಾಯಚೂರು ಕ್ಷೇತ್ರಶಿಕ್ಷಣಾಧಿಕಾರಿ ಚಂದ್ರಶೇಖರ್ ದೊಡ್ಡಮನಿ ,ದಾನಿಗಳಾದ ಮಲ್ಲನಗೌಡ, ರಾಮು ಪರಿಟಾಲ, ಲಕ್ಷ್ಮಿಕಾಂತ್ ರೆಡ್ಡಿ, ರಂಗಾರಾವ್ ದೇಸಾಯಿ, ಪ್ರಭನಗೌಡ, ರೋಟರಿ ಕ್ಲಬ್‍ನ ರಾಯಚೂರು ಸೆಂಟ್ರಲ್ ಅಧ್ಯಕ್ಷ ಡಾ.ವಿಜಯ್ ಮಹಾಂತೇಶ್ ಹಾಗೂ ರೋಟರಿ ಕ್ಲಬ್‍ನ ನಿಜಾನಂದ್ ರೆಡ್ಡಿ, ಅಜಯ್ ಸೇರಿ ಇತರರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *