ಪತ್ನಿಯ ಹೇಳಿಕೆಯಿಂದ ಡೈವೋರ್ಸ್‌ ಕೇಸ್‌ ಗೆದ್ದ ಪತಿ

Public TV
1 Min Read

ಗುವಾಹಟಿ: ಏನೇನೋ ಕಾರಣಗಳನ್ನು ಹೇಳಿ ಪತಿ, ಪತ್ನಿಯರು ಕೋರ್ಟ್‌ನಲ್ಲಿ ವಿಚ್ಛೇದನ ಸಲ್ಲಿಸುವುದು ಸಾಮಾನ್ಯ. ಆದರೆ ಅಸ್ಸಾಂನಲ್ಲಿ ಪತ್ನಿ ಹೇಳಿದ ಒಂದು ಹೇಳಿಕೆಯಿಂದಾಗಿ ಪತಿಗೆ ವಿಚ್ಛೇದನ ಸಿಕ್ಕಿದೆ.

ಹೌದು. ನಾನು ಸಿಂಧೂರ ಮತ್ತು ಬಳೆ ತೊಡುವುದಿಲ್ಲ ಎಂದು ಪತ್ನಿ ಹೇಳಿದ್ದರಿಂದ ಪತಿಗೆ ಪ್ರಕರಣದಲ್ಲಿ ಗೆಲುವು ಸಿಕ್ಕಿದೆ. ವಿವಾಹದ ನಂತರವೂ ಪತ್ನಿ ಸಿಂಧೂರ ಮತ್ತು ಬಳೆಯನ್ನು ತೊಡುವುದಿಲ್ಲ ಎಂದು ಹೇಳಿದ್ದಲ್ಲಿ, ಆಕೆ ಮದುವೆಯಾದ ವರನನ್ನು ಪತಿಯಾಗಿ ಸ್ವೀಕರಿಸಿಲ್ಲ ಎಂದೇ ಅರ್ಥ ಎಂದು ಗುವಾಹಟಿ ಹೈಕೋರ್ಟ್‌ ಅಭಿಪ್ರಾಯ ಪಟ್ಟು ಪತಿಯ ಅರ್ಜಿಯನ್ನು ಮಾನ್ಯ ಮಾಡಿದೆ.

ಏನಿದು ಪ್ರಕರಣ?
2012ರ ಫೆಬ್ರವರಿಯಲ್ಲಿ ಇಬ್ಬರಿಗೂ ಮದುವೆಯಾಗಿದ್ದು, ಮದುವೆಯಾದ ಆರಂಭದಲ್ಲೇ ಪತ್ನಿ ನಾನು ಕುಟುಂಬದ ಸದಸ್ಯರ ಜೊತೆ ವಾಸ ಮಾಡುವುದಿಲ್ಲ ಎಂದು ಹೇಳಿದ್ದಳು. ಅಷ್ಟೇ ಅಲ್ಲದೇ ಜಗಳ ಮಾಡಲು ಆರಂಭಿಸಿದ್ದಳು. ಇದಾದ ಬಳಿಕ ಜೂನ್‌ 2013ರ ಜೂನ್‌ 30ರ ಬಳಿಕ ಇಲ್ಲಿಯವರೆಗೆ ಇಬ್ಬರು ಪ್ರತ್ಯೇಕವಾಗಿ ವಾಸವಾಗಿದ್ದರು.

ಪ್ರತ್ಯೇಕವಾಗಿ ವಾಸ ಮಾಡಲು ಆರಂಭಿಸಿದ ಬಳಿಕ ಪತ್ನಿ ಪತಿ ಮನೆಯವರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಇದಾದ ಬಳಿಕ ಪತಿ ಪತ್ನಿಯಿಂದ ವಿಚ್ಚೇದನ ನೀಡಬೇಕೆಂದು ಕೌಟುಂಬಿಕ ಕೋರ್ಟ್‌ ಮೆಟ್ಟಿಲೇರಿದ್ದಾನೆ. ಈ ವೇಳೆ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾದರೂ ಆಕೆ ಸಿಂಧೂರ ಮತ್ತು ಬಳೆಯನ್ನು ತೊಡಲು ನಿರಾಕರಿಸಿದ್ದಾಳೆ. ಹೀಗಾಗಿ ವಿಚ್ಛೇದನ ನೀಡಬೇಕೆಂದು ಮನವಿ ಮಾಡಿದ್ದ. ಆದರೆ ಕೋರ್ಟ್‌ ಈತನ ಅರ್ಜಿಯನ್ನು ವಜಾಗೊಳಿಸಿತ್ತು.

ಪತಿ ನ್ಯಾಯಕ್ಕಾಗಿ ಹೈಕೋರ್ಟ್‌ ಮೆಟ್ಟಲೇರಿದ್ದಾನೆ. ವಿಚಾರಣೆ ನಡೆಸಿದ್ದ ದ್ವಿಸದಸ್ಯ ಪೀಠ, ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾದವಳು ಹಣೆಗೆ ಸಿಂಧೂರ ಧರಿಸಬೇಕು. ಕೈಗೆ ಬಳೆಯನ್ನು ತೊಡಬೇಕು. ಪತ್ನಿ ಇದನ್ನು ಮಾಡಲು ಹಿಂದೇಟು ಹಾಕುತ್ತಾಳೆ ಎಂದರೆ ಆಕೆಗೆ ಮದುವೆ ಇಷ್ಟವಿಲ್ಲ ಎಂದೇ ಅರ್ಥ. ಇಷ್ಟ ಇಲ್ಲದೇ ಇದ್ದರೂ ನನ್ನ ಜೊತೆಯೇ ಪತಿ ಜೀವನ ಮಾಡಬೇಕೆಂದು ಹೇಳುವುದು ಪತಿ ಮೇಲೆ ಮಾಡುವ ದೌರ್ಜನ್ಯ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *