ಶೇ.30 ಪಠ್ಯ ಕಡಿತ, ಶೀಘ್ರವೇ ಆದೇಶ: ಸುರೇಶ್ ಕುಮಾರ್

Public TV
1 Min Read

ಚಾಮರಾಜನಗರ: ಕೋವಿಡ್‌ 19 ಹಿನ್ನೆಲೆಯಲ್ಲಿ ಶೇ.30 ರಷ್ಟು ಪಠ್ಯವನ್ನು ಕಡಿತ ಮಾಡಲಾಗುತ್ತದೆ. ನಾಳೆ ಅಥವಾ ನಾಳಿದ್ದು ಇಲಾಖೆಯಿಂದ ಆದೇಶ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಚಾಮರಾಜನಗರ ತಾಲೂಕಿನ ನಲ್ಲೂರು, ನಾಗವಳ್ಳಿ, ಚಂದಕವಾಡಿ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾಗಮ ಹಾಗೂ ತರಗತಿಗಳು ನಡೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಯಾವೆಲ್ಲಾ ಪಠ್ಯ ಕಡಿತ ಮಾಡಬೇಕೆಂದು ಈಗಾಗಲೇ ತೀರ್ಮಾನ ಮಾಡಿದ್ದೇವೆ. ಕನಿಷ್ಠ ಶೇ. 30 ರಷ್ಟು ಪಠ್ಯ ಕಡಿತವಾಗಲಿದ್ದು ಯಾರೂ ಆತಂಕಪಡುವ ಅಗತ್ಯವಿಲ್ಲ. ಯಾವ ಯಾವ ಪಠ್ಯ ಎಷ್ಟು ಕಡಿತವಾಗಲಿದೆ ಎಂಬುದರ ಬಗ್ಗೆ ಶೀಘ್ರವೇ  ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಪ್ರಕಟಿಸಲಿದೆ ಎಂದು ಸಚಿವರು ತಿಳಿಸಿದರು.

 

ಒಂದರಿಂದ ಒಂಭತ್ತನೇ ತರಗತಿ ಹಾಗೂ ಮೊದಲ ಪಿಯುಸಿ ತರತಿಗವರೆಗೆ ಶಾಲೆ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಜನವರಿ 15ರ ನಂತರ ತಜ್ಞರ ಸಮಿತಿ ಜೊತೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಲಾಗವುದು ಎಂದು ಹೇಳಿದರು.

ಖಾಸಗಿ ಶಾಲೆಗಳ ಶುಲ್ಕದ ವಿಚಾರದಲ್ಲಿ ಸರ್ಕಾರ ಮಧ್ಯೆ ಪ್ರವೇಶ ಮಾಡಬೇಕೆಂಬ ಒತ್ತಾಯವಿದೆ. ಟ್ಯೂಷನ್ ಫೀಸ್ ನಲ್ಲಿ ಶೇ.70 ರಷ್ಟು ಮಾತ್ರ ತೆಗೆದುಕೊಳ್ಳುವುದಾಗಿ ಈಗಾಗಲೇ ಎರಡು ಖಾಸಗಿ ಶಾಲಾ ಒಕ್ಕೂಟಗಳು ಮುಂದೆ ಬಂದಿವೆ. ಈ ವಿಚಾರವನ್ನು ಪೋಷಕರ ಗಮನಕ್ಕೂ ತಂದಿವೆ ಎಂದು ತಿಳಿಸಿದರು.

ಕೋವಿಡ್ ಪರಿಣಾಮ ಒಂದು ಕಡೆ ಪೋಷಕರು ಸಂಕಷ್ಟದಲ್ಲಿದ್ದಾರೆ. ಇನ್ನೊಂದು ಕಡೆ ಖಾಸಗಿ ಶಾಲಾ ಶಿಕ್ಷಕರಿಗೆ ಸಂಬಳವಿಲ್ಲದೆ ಕಷ್ಟದಲ್ಲಿದ್ದಾರೆ. ಹಾಗಾಗಿ ಈ ಎರಡೂ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಇಲಾಖೆ ಆಯುಕ್ತರು ತಮ್ಮ ಮಟ್ಟದಲ್ಲಿ ಪೋಷಕರ ಸಂಘಟನೆಗಳ ಪ್ರಮುಖರು, ಹಾಗೂ ಖಾಸಗಿ ಶಾಲೆ ಸಂಘಟನೆಗಳ ಪ್ರಮುಖರ ಸಭೆ ಕರೆದು ಎಲ್ಲರಿಗು ಒಪ್ಪುವ ಒಂದು ಸೂತ್ರ ರಚಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ಅವರು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *