ಪಕ್ಷ ತಾಯಿ ಇದ್ದಂತೆ, ತುತ್ತು ತಡವಾಗಿ ಕೊಟ್ಟಿರಬಹುದು, ಯಾರೂ ಪ್ರತಿಭಟಿಸಬೇಡಿ: ರಾಜೂಗೌಡ

Public TV
2 Min Read

– ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ಸಮಾಧಾನ ಹೇಳಿದ ಶಾಸಕ

ಬೆಂಗಳೂರು: ಪಕ್ಷ ನಮ್ಮ ತಾಯಿ ಇದ್ದಂತೆ, ತಾಯಿ ಮಕ್ಕಳಿಗೆ ತುತ್ತು ನೀಡುವಾಗ ಸ್ವಲ್ಪ ತಡವಾಗಿರಬಹುದು ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಶಾಸಕನಾಗಿರುವುದು ಜನರ ಸೇವೆ ಮಾಡಲು, ಸಚಿವರಾದರೆ ಮಾತ್ರ ಮಾಡುತ್ತಾರೆಯೇ? ನನ್ನ ಕೆಲಸವನ್ನು ನಾನು ಮಾಡುತ್ತೇನೆ. ನನ್ನ ಜನರ ಮನವೊಲಿಸುವುದು ನನ್ನ ಧರ್ಮ. ಅಲ್ಲದೆ ನಮ್ಮ ಮುಖ್ಯಮಂತ್ರಿಗಳ ವಿರುದ್ಧ, ನಮ್ಮ ಪಕ್ಷದ ವಿರುದ್ಧ ಪ್ರತಿಭಟಿಸಲು ಸಾಧ್ಯವೇ? ಯಾರೂ ಈ ರೀತಿ ವರ್ತಿಸಬೇಡಿ ಎಂದು ಶಾಸಕ ರಾಜೂಗೌಡ ಅವರು ತಮ್ಮ ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ.

ಪ್ರತಿಭಟನೆ ನಡೆಸುತ್ತಿದ್ದ ತಮ್ಮ ಬೆಂಬಲಿಗರನ್ನು ಸಮಾಧಾನಪಡಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಜನರ ಆಶೀರ್ವಾದದಿಂದ 3 ಬಾರಿ ಶಾಸಕನಾಗಿದ್ದೇನೆ. ಅವರು ಪ್ರತಿಭಟನೆ ನಡೆಸಿ ಕರ್ತವ್ಯವನ್ನು ಮಾಡಿದ್ದಾರೆ. ಇವರ ಸೇವೆ ಮಾಡುವುದು ನನ್ನ ಕರ್ತವ್ಯ, ಜನತೆಯ ಕಾಲಿಗೆ ಬಿದ್ದು ಕೇಳಿಕೊಳ್ಳುತ್ತೇನೆ, ಧರಣಿ ಮಾಡುವುದು, ಪಕ್ಷದ ವಿರುದ್ಧ ಕೂಗುವುದು ಬೇಡ ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಕೈ ತಪ್ಪಿದ ಸಚಿವ ಸ್ಥಾನ – ರೇಣುಕಾಚಾರ್ಯ ಕಣ್ಣೀರು

ಪಕ್ಷ ನಮ್ಮ ತಾಯಿ ಇದ್ದಂತೆ, ತಾಯಿ ಮಕ್ಕಳಿಗೆ ತುತ್ತು ನೀಡುವಾಗ ಸ್ವಲ್ಪ ತಡವಾಗಿರಬಹುದು ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಶಾಸಕನಾಗಿರುವುದು ಜನರ ಸೇವೆ ಮಾಡಲು, ಸಚಿವರಾದರೆ ಮಾತ್ರ ಮಾಡುತ್ತಾರೆಯೇ? ನನ್ನ ಕೆಲಸವನ್ನು ನಾನು ಮಾಡುತ್ತೇನೆ ಅವರ ಮನವೊಲಿಸುವುದು ನನ್ನ ಧರ್ಮ ಎಂದು ತಿಳಿಸಿದರು.

ಮುಂದಿನ ಬಾರಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಆಗ ನಾನು ಸಚಿವನಾಗುತ್ತೇನೆ. ನನ್ನ ಮೇಲೆ ಯಾವುದೇ ಭ್ರಷ್ಟಾಚಾರ ಆರೋಪಗಳಿಲ್ಲ, ಪಕ್ಷ ವಿರುದ್ಧ ಯಾವುದೇ ಚಟುವಟಿಕೆ ಮಾಡಿಲ್ಲ, ಜನರೊಂದಿಗೆ ಬೆರೆತು ಸೇವೆ ಮಾಡುತ್ತಿದ್ದೇನೆ. ಹೀಗಾಗಿ ನನಗೆ ಬೇಸರವಿಲ್ಲ, ಪ್ರತಿಭಟಿಸಬೇಡಿ ಎಂದು ಬೆಂಬಲಿಗರಿಗೆ ನಾನು ಹೇಳಿದ್ದೇನೆ. ಆದರೂ ಅವರಿಗೆ ನನ್ನ ಮೇಲೆ ಹುಚ್ಚು ಪ್ರೀತಿ, ಇದಕ್ಕಾಗಿ ಬರುತ್ತಿದ್ದಾರೆ. ಯಾರೂ ಯಾರ ವಿರುದ್ಧವೂ ಪ್ರತಿಭಟಿಸುವುದು ಬೇಡ, ಇದೇ ಮೊದಲಲ್ಲ ನನಗೆ ಈ ರೀತಿ 6ನೇ ಬಾರಿ ಆಗುತ್ತಿದೆ. ಹೀಗಾಗಿ ನಾನಿದನ್ನು ನಿಭಾಯಿಸುತ್ತೇನೆ. ಒಳ್ಳೆಯ ಕೆಲಸ ಮಾಡಿ ಮುಂದೆ ಬರುತ್ತೇನೆ. ಇದರಿಂದ ನನಗೆ ಬೇಸರ ಇಲ್ಲ, ಆಗಲೇ ರೂಢಿ ಆಗಿಬಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *