ನ್ಯಾಯ ಪಂಚಾಯ್ತಿಗೆ ಕರೆದು ಜಿಮ್ ಟ್ರೈನರ್‌ನನ್ನು ಕೊಲೆಗೈದಿದ್ದ ಆರೋಪಿಗಳು ಅಂದರ್

Public TV
1 Min Read

ಬೆಂಗಳೂರು: ನ್ಯಾಯ ಪಂಚಾಯ್ತಿಗೆ ಕರೆದು ಜಿಮ್ ಟ್ರೈನರ್‌ನನ್ನು ಬರ್ಬರ ಹತ್ಯೆಗೈದಿದ್ದ ಆರೋಪಿಗಳನ್ನು ಆನೇಕಲ್ ತಾಲೂಕಿನ ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ.

ಕಲ್ಕೆರೆಯ ಪವನ್, ಪ್ರವೀಣ್, ಮನೋಜ್, ಅಕ್ಷಯ್, ಯೋಗೇಶ್, ಗೋವಿಂದ್, ವೆಂಕಟೇಶ್, ರಾಜಶೇಖರ್ ಬಂಧಿತ ಆರೋಪಿಗಳು. ಬನ್ನೇರುಘಟ್ಟ ರಸ್ತೆಯ ಕಲ್ಕೆರೆ ನಿವಾಸಿ ಕಿರಣ್ ಅಲಿಯಾಸ್ ಪುಟ್ಟ (27) ಕೊಲೆಯಾದ ಜಿಮ್ ಟ್ರೈನರ್. ಕಿರಣ್ ರಾಮಸಂದ್ರದಲ್ಲಿ ಜಿಮ್ ಟ್ರೈನರ್ ಆಗಿದ್ದ.

ಯುವತಿಯ ವಿಚಾರದಲ್ಲಿ ಕಿರಿಕ್ ಉಂಟಾಗಿತ್ತು. ಇತ್ತ ಕಲ್ಕೆರೆಯ ಪವನ್, ಪ್ರವೀಣ್ ಹಾಗೂ ಅವರ ಸ್ನೇಹಿತರು ಕಿರಣ್ ಹತ್ಯೆಗೆ ಪ್ಲಾನ್ ನಡೆಸಿತ್ತು. ಇದೇ ಸಂದರ್ಭದಲ್ಲಿ ಯುವತಿಯು ಪವನ್ ಗುಂಪಿನ ಮೊರೆ ಹೋಗಿದ್ದಳು. ಹೀಗಾಗಿ ಜಗಳ ಬಗೆ ಹರಿಸಬೇಕು ನೀನು ಬಾ ಎಂದು ಆರೋಪಿಗಳು ಕಿರಣ್‍ನನ್ನು ಕರೆದಿದ್ದರು.

ಕಿರಣ್ ಜೂನ್ 18ರಂದು ನ್ಯಾಯ ಪಂಚಾಯ್ತಿಗೆ ಹೋಗಿದ್ದಾಗ ಮಾತಿಗೆ ಮಾತು ಬೆಳೆದಿತ್ತು. ಇದರಿಂದ ಕೋಪಗೊಂಡ ಗುಂಪು ಕಿರಣ್ ಮೇಲೆ ಲಾಗು ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಬನ್ನೇರುಘಟ್ಟ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಆರೋಪಿಗಳು ಸ್ಕೂಟರ್ ಹಾಗೂ ಆಟೋದಲ್ಲಿ ಬಂದು ಕೃತ್ಯ ಎಸಗಿರುವ ಮಾಹಿತಿ ಲಭಿಸಿತ್ತು. ಬಳಿಕ ಆರೋಪಿಗಳಿಗೆ ಬಲೆ ಬೀಸಿದ ಪೊಲೀಸರು ಇಂದು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಎರಡು ಆಟೋ ಹಾಗೂ ಸ್ಕೂಟರ್ ವಶಕ್ಕೆ ಪಡೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *