ನೈಜ ಆರೋಪಿಯ ಪತ್ತೆ ಹಚ್ಚುವ ಬದಲು ಸರ್ಕಾರದಿಂದ ಅಮಾಯಕರ ಬಂಧನ – ಖಾದರ್ ಆರೋಪ

Public TV
1 Min Read

– ಬಂಧಿಸಿದ ನಿರಪರಾಧಿಗಳಿಗೆ ಮುಕ್ತಿ ನೀಡಿ

ಬೆಂಗಳೂರು: ನಗರದ ಡಿ.ಜೆ ಹಳ್ಳಿ ಹಾಗೂ ಕೆ.ಜೆ ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಸರ್ಕಾರ ನೈಜ ಅಪರಾಧಿಗಳನ್ನು ರಕ್ಷಣೆ ಮಾಡುತ್ತಿದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಸರ್ಕಾರದ ಭಯ ಇದ್ರೆ ಪುಂಡರು ಈ ರೀತಿ ವರ್ತಿಸುತ್ತಿರಲಿಲ್ಲ. ಇದು ಸರ್ಕಾರದ ವೈಫಲ್ಯವಲ್ಲದೆ ಮತ್ತೇನು? ನೈಜ ಆರೋಪಿಯ ಪತ್ತೆ ಹಚ್ಚುವ ಬದಲು ಸರ್ಕಾರ ಅಮಾಯಕರನ್ನ ಬಂಧಿಸುತ್ತಿದೆ. ಈ ಮೂಲಕ ನೈಜ ಅಪರಾಧಿಗಳಿಗೆ ರಕ್ಷಣೆ ನೀಡ್ತಾ ಇದೆ ಎಂದರು.

ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಬೀಳೋ ತನಕ, ಪೊಲೀಸ್ ಠಾಣೆ ಸುಟ್ಟು ಬೂದಿಯಾಗೋ ತನಕ, ಪೊಲೀಸರು ಏನೂ ಮಾಡಿಲ್ಲ. ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆಯಾದ ಪ್ರಕರಣದ ಕಥೆ ಏನಾಯ್ತು ಗೊತ್ತಿಲ್ಲ. ಮಂಗಳೂರು ಗಲಭೆಗೆ ಕೇರಳದಿಂದ ಬಂದವರು ಕಾರಣ ಎಂದಿರಿ, ಹಾಗಿದ್ದರೆ ಒಬ್ಬ ಕೇರಳಿಗರನ್ನ ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ರಾಜಕೀಯದ ಕೆಸರೆರಚಾಟ ಮಾಡುವ ಬದಲು ಸಮಾಜಘಾತುಕ ಶಕ್ತಿ ಯಾರೇ ಇರಲಿ ಅವರನ್ನ ಮಟ್ಟ ಹಾಕಿ ನಿಮ್ಮ ಬದ್ಧತೆಯನ್ನ ತೋರಿಸಿ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರ ಅಧಿಕಾರದಲ್ಲಿ ಕುಳಿತು ಇನ್ನೊಬ್ಬರ ಮೇಲೆ ಬೆರಳು ತೋರಿಸುವುದೇ ನಿಮ್ಮ ಸ್ವರ್ಣಯುಗವೇ? ಬಂಧಿಸಿದ ನಿರಪರಾಧಿಗಳಿಗೆ ಮುಕ್ತಿ ನೀಡಿ, ನೈಜ ಅಪರಾಧಿಯನ್ನ ಶಿಕ್ಷಿಸಿ, ಸಮಾಜವನ್ನ ರಕ್ಷಿಸಿ ಎಂದು ತಿಳಿಸಿದ್ದಾರೆ.

ಶಾಸಕ ತನ್ವೀರ್ ಸೇಠ್ ಮೇಲಿನ ಮಾರಣಾಂತಿಕ ಹಲ್ಲೆ ತಡೆಯಲಾಗಲಿಲ್ಲ. ಆರೋಪಗಳಿನ್ನೂ ಪತ್ತೆ ಹಚ್ಚಲಾಗಲಿಲ್ಲ. ಪ್ರವಾದಿಗೆ ನಿಂದಿಸಿದ ವ್ಯಕ್ತಿ ಪಕ್ಕದಲ್ಲೇ ಇದ್ದರೂ ಬಂಧಿಸಲಿಲ್ಲ ಎಂದು ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *