ನಿಸರ್ಗಧಾಮದಲ್ಲಿ ಕಬ್ಬಿಣದ ಕಾಡು ನಿರ್ಮಾಣ ಪರಿಸರ ಪ್ರೇಮಿಗಳ ಅಕ್ರೋಶ

Public TV
2 Min Read

ಮಡಿಕೇರಿ : ಕೊಡಗಿನ ಪ್ರಕೃತಿ ಸೌಂದರ್ಯವನ್ನು ಸವಿಯಲೆಂದೇ ಹೊರ ಜಿಲ್ಲೆ, ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಅರಣ್ಯ ಇಲಾಖೆ ಪ್ರವಾಸಿಗರನ್ನು ಸೆಳೆಯುವ ಹೆಸರಿನಲ್ಲಿ ನಿಸರ್ಗದತ್ತವಾಗಿದ್ದ ನಿಸರ್ಗಧಾಮದಲ್ಲಿ ಅಡ್ವಂಚರ್ಸ್ ಗೇಮ್ ಗಳ ಪರಿಕರಗಳನ್ನು ನಿರ್ಮಿಸಿ ಕಬ್ಬಿಣದ ಕಾಡು ಸೃಷ್ಟಿಸುತ್ತಿದ್ದಾರೆ ಎಂದು ಪರಿಸರ ಪ್ರೇಮಿಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.

ಕೊಡಗು ಜಿಲ್ಲೆ ಕುಶಾಲನಗರ ಸಮೀಪದಲ್ಲೇ ಕಾವೇರಿ ನದಿ ದಂಡೆಯ ಮೇಲೆ ಕಾವೇರಿ ನಿಸರ್ಗಧಾಮವಿದೆ. ಇದರೊಳಗಿರುವ ಬಿದಿರು, ಸಹಜವಾಗಿಯೇ ಬೆಳೆದಿರುವ ಅರಣ್ಯದ ಮರಗಳು ಹೊರ ಜಿಲ್ಲೆಯಿಂದ ಬರುವ ಪ್ರವಾಸಿಗರಿಗೆ ಅರಣ್ಯದೊಳಗೆ ಸುತ್ತಾಡಿದ ಅನುಭವ ನೀಡುತ್ತಿದ್ದವು. ಆದರೆ ಕೆಲವು ವರ್ಷಗಳ ಹಿಂದೆಯಷ್ಟೇ ಇಲ್ಲಿನ ಬಿದಿರು ಮೆಳೆಗಾಲದಲ್ಲಿ ಕಟ್ಟೆ ರೋಗಬಂದು ಎಲ್ಲವೂ ಒಣಗಿ ಹೋಗಿ ಈಗಷ್ಟೇ ಹೊಸ ಬಿದಿರು ಬೆಳೆಯುತ್ತಿದೆ. ಇದರ ಜೊತೆಗೆ ಇನ್ನಷ್ಟು ಮರ ಗಿಡಗಳನ್ನು ಬೆಳೆಸಿ ಈಗ ಬರುತ್ತಿರುವ ಬಿದಿರನ್ನು ಪೋಷಣೆ ಮಾಡಿ ಹಿಂದಿನ ಸಹಜ ಸೌಂದರ್ಯ ಮರುಕಳಿಸುವಂತೆ ಅರಣ್ಯ ಇಲಾಖೆ ಮಾಡಬೇಕಾಗಿತ್ತು. ಅದರ ಬದಲಿಗೆ ಲೋರೋಫ್ ಕೋರ್ಸ್ ಗಳನ್ನು ಮಾಡಲಾಗುತ್ತಿದೆ.

ಅಡ್ವೆಂಚರ್ಸ್ ಗೇಮ್ಸ್ ಗಳಿಗಾಗಿ ಹತ್ತಾರು ಎಕರೆ ಪ್ರದೇಶದಲ್ಲಿ ಕಬ್ಬಿಣಗಳಿಂದ ದೊಡ್ಡ ದೊಡ್ಡ ಡೇರೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಎರಡು ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಸುತ್ತಲೂ ಕಬ್ಬಿಣದ ಗ್ರಿಲ್ಸ್ ಗಳ ಬೇಲಿಯನ್ನು ನಿರ್ಮಿಸಲಾಗಿದ್ದು, ಅದರೊಳಗೆ ಅಡ್ವೆಂಚರ್ಸ್ ಗೇಮ್‍ಗಳಿಗೆ ಬೇಕಾದ ವಿವಿಧ ಪರಿಕರಗಳನ್ನು ಮರಗಳಿಗೆ ಕಟ್ಟಲಾಗಿದೆ. ಹೀಗಾಗಿ ನಿಸರ್ಗಧಾಮ ಈಗ ಸೈಸರ್ಗಿಕ ಸೌಂದರ್ಯವನ್ನು ಸಂಪೂರ್ಣ ಕಳೆದುಕೊಳ್ಳುತ್ತಿದೆ ಎಂದು ಪರಿಸರ ಪ್ರೇಮಿಗಳ ವಾದವಾಗಿದೆ.

ಈ ಅಡ್ವೆಂಚರ್ಸ್ ಗೇಮ್ ಗಳ ಪರಿಕರಗಳನ್ನು ಮರಗಳಿಗೆ ಕಟ್ಟಲಾಗಿದ್ದು ಅದಕ್ಕಾಗಿ ಮರಗಳಿಗೆ ದೊಡ್ಡ ದೊಡ್ಡ ಮೊಳೆಗಳನ್ನು ಹೊಡೆಯಲಾಗಿದೆ. ಇದೆಲ್ಲವೂ ಪರಿಸರ ಪ್ರಿಯರು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಇದೆಲ್ಲವನ್ನೂ ಕೊಡಗು ಮಾನವ ಮತ್ತು ವನ್ಯಜೀವಿ ಸಂರಕ್ಷಣಾ ಫೌಂಡೇಷನ್ ನಿಂದ ಸಂಪೂರ್ಣ ಖಾಸಗಿಯವರಿಂದಲೇ ಇದನ್ನು ಮಾಡಲಾಗುತ್ತಿದೆಯಂತೆ. ಇದಕ್ಕೆ ಅರಣ್ಯ ಸಚಿವರೇ ಅಧ್ಯಕ್ಷರಾಗಿದ್ದು, ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲೇ ಇದೆಲ್ಲವನ್ನೂ ನಿರ್ಮಿಸುವುದಕ್ಕೆ ಒಪ್ಪಿಗೆ ಸೂಚಿಸಲಾಗಿದೆಯಂತೆ. ಖಾಸಗೀ ಸಂಸ್ಥೆಯು ಸಂಪೂರ್ಣ ಬಂಡವಾಳ ಹೂಡುತ್ತಿದ್ದು, ಇದರಿಂದ ಬರುವ ಆದಾಯದಲ್ಲಿ ಅರಣ್ಯ ಇಲಾಖೆಗೆ ಅರ್ಧಪಾಲು ಕೊಡಬೇಕೆಂದು ನಿರ್ಧರವಾಗಿದೆ ಎಂಬ ಮಾಹಿತಿ ಇದೆ.

Share This Article
Leave a Comment

Leave a Reply

Your email address will not be published. Required fields are marked *