ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಚಿರಋಣಿ: ಸಚಿವ ಸಿ.ಟಿ ರವಿ

Public TV
1 Min Read

ಬೆಂಗಳೂರು: ಚೀನಿ ವೈರಸ್ ಕೊರೊನಾದಿಂದ ಗುಣಮುಖವಾಗಿದ್ದು, ನಿಮ್ಮ ಪ್ರೀತಿ ವಿಶ್ವಾಸಕ್ಕೆ ಚಿರಋಣಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಾನು ಕೊರೊನಾದಿಂದ ಮನೆಯಲ್ಲಿ ನಿರ್ಬಂಧದಲ್ಲಿ ಇದ್ದಾಗ ಕರೆ, ಸಂದೇಶಗಳ ಮೂಲಕ ಆತ್ಮಸ್ಥೈರ್ಯ ತುಂಬಿ ಶೀಘ್ರ ಗುಣಮುಖರಾಗಲೆಂದು ಹಾರೈಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ. ನಿಮ್ಮ ಹಾರೈಕೆಯಿಂದ ನಾನು ಗುಣಮುಖನಾಗಿದ್ದು ಸೋಮವಾರದಿಂದ ಎಂದಿನಂತೆ ಸಾರ್ವಜನಿಕ ಕೆಲಸಕ್ಕೆ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಸಿ.ಟಿ.ರವಿ, ಅವರ ಪತ್ನಿ ಪಲ್ಲವಿ, ಗನ್ ಮ್ಯಾನ್ ಮತ್ತು ಕಾರಿನ ಚಾಲಕ ಸೇರಿ ಕಚೇರಿ ಸಿಬ್ಬಂದಿ ಕೋವಿಡ್ ಪರೀಕ್ಷೆ ಮಾಡಿಸಿದ್ದರು. ಜುಲೈ 12 ರಂದು ಸಂಜೆ ವರದಿ ಬಂದಿದ್ದು, ಪತ್ನಿ ಪಲ್ಲವಿ, ಗನ್ ಮ್ಯಾನ್ ಮತ್ತು ಕಾರಿನ ಚಾಲಕ ಸೇರಿ ಕಚೇರಿ ಸಿಬ್ಬಂದಿಗೆ ನೆಗೆಟಿವ್ ಬಂದಿದೆ. ಆದರೆ ಸಿ.ಟಿ ರವಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಈ ಬಗ್ಗೆ ಟ್ವೀಟ್ ಮಾಡಿದ್ದ ಸಿ.ಟಿ ರವಿ, “ನಾನು, ಮಡದಿ ಪಲ್ಲವಿ, ನನ್ನ ಸಿಬ್ಬಂದಿ ವರ್ಗ ಕೋವಿಡ್ 19 ಪರೀಕ್ಷೆಗೆ ಒಳಪಟ್ಟಿದ್ದೆವು. ಪಲ್ಲವಿ ಹಾಗೂ ನನ್ನ ಗನ್-ಮ್ಯಾನ್, ಚಾಲಕ ಸೇರಿ ಆಫೀಸ್ ಸಿಬ್ಬಂದಿ ಎಲ್ಲರದ್ದು ನೆಗೆಟಿವ್ ಬಂದಿದೆ” ಎಂದು ತಿಳಿಸಿದ್ದರು.

ಮತ್ತೊಂದು ಟ್ವೀಟ್ ಮಾಡಿ. “ಥರ್ಡ್ ಅಂಪೈರ್ ಫಲಿತಾಂಶದಲ್ಲಿ ನನಗೆ ಕೋವಿಡ್ ಪಾಸಿಟಿವ್ ಇದೆ ಎಂಬುದು ದೃಢವಾಗಿದೆ. ಆದರೆ ಯಾವುದೇ ತೊಂದರೆಗಳ ಲಕ್ಷಣಗಳಿಲ್ಲದೆ ನಾನು ಸಹಜವಾಗಿದ್ದೇನೆ. ಸೂಕ್ತ ಚಿಕಿತ್ಸೆಗಳನ್ನು ಪಡೆಯುತ್ತಾ ನಾನು ಇಲ್ಲಿಂದಲೇ ಕೆಲಸ ಮುಂದುವರಿಸಲಿದ್ದು, ಆದಷ್ಟು ಬೇಗ ಗುಣಮುಖನಾಗಿ ನಿಮ್ಮೆಲ್ಲರೊಂದಿಗೆ ಕೆಲಸ ಮಾಡುತ್ತೇನೆ” ಎಂದು ತಮಗೆ ಕೊರೊನಾ ಇರುವುದನ್ನ ದೃಢಪಡಿಸಿದ್ದರು.

ಸದ್ಯ ಅವರು ಕೊರೊನಾದಿಂದ ಗುಣಮುಖರಾಗಿದ್ದು, ಸೋಮವಾರದಿಂದ ಸಾರ್ವಜನಿಕರ ಸೇವೆಯಲ್ಲಿ ಸಚಿವರು ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *