‘ನಿನ್ನಂಥ ಮೃದು ಮನಸ್ಸಿನವನಿಗೆ ಇದು ವಿಧಿಯ ದೊಡ್ಡ ಹೊಡೆತ’

Public TV
1 Min Read

– ಸುಂದರ್ ರಾಜ್‍ಗೆ ಸಾಂತ್ವನ ಹೇಳಿದ ಟಿ.ಎನ್.ಸೀತಾರಾಮ್
– ಮೇಘನಾಗೆ ನೀನು ಮಾತ್ರ ಧೈರ್ಯ ನೀಡಬಲ್ಲೆ ಸುಂದರ್

ಬೆಂಗಳೂರು: ಎಲ್ಲರ ಪ್ರೀತಿಯ ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ. ಅಳಿಯ ಅಗಲಿಕೆ, ಪ್ರೀತಿಯ ಮಗಳ ದುಃಖವನ್ನು ಕಂಡು ಹಿರಿಯ ನಟ ಸುಂದರ್ ರಾಜ್ ಕಣ್ಣೀರಾಗಿದ್ದಾರೆ. ಅವರಿಗೆ ನಿರ್ದೇಶಕ ಟಿ.ಎನ್.ಸೀತಾರಾಮ್ ಅವರು ಸಾಂತ್ವನ ಹೇಳಿದ್ದಾರೆ.

ತಮ್ಮ ಫೇಸ್‍ಬುಕ್‍ನಲ್ಲಿ ಚಿರಂಜೀವಿ ಸರ್ಜಾ ಫೋಟೋವನ್ನು ಪೋಸ್ಟ್ ಮಾಡಿರುವ ಟಿ.ಎನ್.ಸೀತಾರಾಮ್, ‘ಪ್ರೀತಿಯ ಸುಂದರ್ ರಾಜ’ ಎಂದು ಮಾತುಗಳನ್ನು ಆರಂಭಿಸಿದ್ದಾರೆ. “ಈ ಕ್ಷಣದಲ್ಲಿ ಎಲ್ಲ ಬಗೆಯ ಸಾಂತ್ವನದ ಮಾತುಗಳೂ ಕೂಡ ಯಾಂತ್ರಿಕವೆನ್ನಿಸುತ್ತದೆ. ಆದರೆ ನಿನ್ನಂಥ ಮೃದು ಮನಸ್ಸಿನ ಮನುಷ್ಯನಿಗೆ ಇದು ವಿಧಿ ಕೊಡುತ್ತಿರುವ ದೊಡ್ಡ ಹೊಡೆತ” ಎಂದು ವಿಧಿಯನ್ನು ದೂರಿದ್ದಾರೆ.

“ಒಬ್ಬಳೇ ಪ್ರೀತಿಯ ಮಗಳ ಪತಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಹಠಾತ್ ನಿಧನರಾಗಿರುವುದು ನಿಮ್ಮ ಮನೆಯ ಎಲ್ಲರಿಗೂ ಚೇತರಿಸಿಕೊಳ್ಳಲು ಆಗದಂಥ ಆಘಾತ. ಅದರಲ್ಲೂ ಚಿರಂಜೀವಿ ಸದಾ ಜೀವ ಚೈತನ್ಯವನ್ನು ತುಂಬಿಕೊಂಡಿರುತ್ತಿದ್ದಂಥ ಹುಡುಗ. ಅವನ ಸಾವು ಮೇಘನಾಳ ಈಗಿನ ಸ್ಥಿತಿಯಲ್ಲಿ ಅಪಾರ ನೋವು ಮತ್ತು ಶಮನವಾಗದ ಸಂಕಟ ತಂದಿರುತ್ತದೆ” ಎಂದು ಸೀತಾರಾಮ್ ತಿಳಿಸಿದ್ದಾರೆ.

“ಮಾತುಗಳು ದುಃಖವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಬದುಕಿನ ಬಗ್ಗೆ ಆಳವಾದ ಅರಿವನ್ನು ಪಡೆದಿರುವ ನಿನಗೆ ಹೆಚ್ಚು ಹೇಳಲಾರೆ. ಪ್ರಮೀಳಾ ಮತ್ತು ಮೇಘನಾಗೆ ನೀನು ಮಾತ್ರ ಧೈರ್ಯ ನೀಡಬಲ್ಲೆ. ಕಣ್ಣೀರನ್ನು ನಗುವಿನೊಂದಿಗೆ ಬೆರೆಸಬಲ್ಲ ನಿನ್ನ ಎಂದಿನ ಶಕ್ತಿ ನಿನ್ನೊಂದಿಗಿರಲಿ. ಚಿರು ಮನೆಯವರಿಗೂ ನೋವು ಸಹಿಸುವ ಶಕ್ತಿ ಬರಲಿ ಎಂದು ಹಾರೈಸುತ್ತೇನೆ” ಎಂದು ಟಿ.ಎನ್.ಸೀತಾರಾಮ್ ಅವರು ಸುಂದರ್ ರಾಜ್ ಅವರಿಗೆ ಧೈರ್ಯ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *