ನಿಧಿ ಕದಿಯಲು ಹೋದ ಚೋರರ ಮೇಲೆ ಕುಸಿದ ಪಾಳು ಮಂಟಪ- ಓರ್ವ ಸಾವು

Public TV
1 Min Read

ಆನೇಕಲ್: ನಿಧಿ ಕದಿಯಲು ಹೋದ ಕಳ್ಳರ ಮೇಲೆ ಪಾಳು ಬಿದ್ದ ಮಂಟಪ ಕುಸಿದು ಓರ್ವ ಮೃತಪಟ್ಟು, ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಹಿಂಡಿಗನಾಳ ಗ್ರಾಮದಲ್ಲಿ ನಡೆದಿದೆ.

ಇದೇ ಗ್ರಾಮದ ಗ್ರಾಮದ ಸುರೇಶ್ (23) ನಿಧಿ ಮಂಟಪದ ಕೆಳಗೆ ಸಿಲುಕಿ ಮೃತಪಟ್ಟಿರುವ ದುರ್ದೈವಿ. ಒಟ್ಟು 9 ಜನರ ತಂಡ ಹಿಂಡಿಗನಾಳ ಗ್ರಾಮದ ಹೆದ್ದಾರಿ ರಸ್ತೆಯ ಬಳಿ ಇರುವ ಸುಮಾರು 1000 ವರ್ಷಗಳ ಪುರಾತನ ಸರೋವರ ಆಂಜನೇಯ ಸ್ವಾಮಿ ದೇವಾಲಯದ ನಿಧಿಗೆ ಕನ್ನ ಹಾಕಲು ಮುಂದಾಗಿದ್ದಾರೆ.

ನಿಧಿ ತೆಗೆಯಲು ಈ ಚೋರರು ಮುಂದಾದಾಗ ದೇವಾಲಯ ಪುರಾತನವಾದ್ದರಿಂದ ಮಂಟಪ ಇದ್ದಕ್ಕಿದ್ದಂತೆ ಕುಸಿದಿದೆ. ಪರಿಣಾಮ ಮಂಟಪದ ಅಡಿಯಲ್ಲಿ ಸಿಲುಕಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಉಳಿದಂತೆ ಮಂಟಪದ ಅಡಿಯಲ್ಲಿ 3 ಜನ ಸಿಲುಕಿಕೊಂಡಿದ್ದಾರೆ.

ಈ ಸಮಯದಲ್ಲಿ ಮಂಟಪದ ಅಡಿಯಲ್ಲಿ ಸಿಲುಕಿಕೊಂಡವರನ್ನು ರಕ್ಷಿಸುವ ಸಲುವಾಗಿ ಜೊತೆಯಲ್ಲಿಯೇ ನಿಧಿ ತೆಗೆಯಲು ಬಂದಂತಹ ಇತರೆ ಸಹಚರರು 108 ಅಂಬುಲೆನ್ಸ್ ಗೆ ಕರೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬಂದ ಅಂಬುಲೆನ್ಸ್ ಚಾಲಕನು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಕೆಂಬಡಿಗಾನಹಳ್ಳಿ ಗ್ರಾಮದ ಶ್ರೀನಿವಾಸ (22) ಮತ್ತು ಮಂಜುನಾಥ್ (23) ಹಾಗೂ ಯಲಹಂಕದ ಸಬಾಸಿನ್ (22) ಎಂಬವರನ್ನ ರಕ್ಷಿಸಿ ವಶಕ್ಕೆ ಪಡೆದಿದ್ದಾರೆ. ಮಧ್ಯರಾತ್ರಿ 12 ಗಂಟೆಯ ಸಮಯದಲ್ಲಿ ಈ ದುಷ್ಕರ್ಮಿಗಳು ದೇವಾಲಯದಲ್ಲಿ ನಿಧಿ ತೆಗೆಯಲು ಮುಂದಾದ ವೇಳೆ ಈ ಘಟನೆ ನಡೆದಿದೆ.

ಈ ಸಂಬಂಧ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *