ನಿಜಕ್ಕೂ ದಿಗ್ಭ್ರಮೆಯಾಯಿತು, ಮೃತರ ಆತ್ಮಕ್ಕೆ ಸದ್ಗತಿ ದೊರಕಲಿ: ಸುರೇಶ್ ಕುಮಾರ್

Public TV
2 Min Read

ಬೆಂಗಳೂರು: ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡ ಅವರು ಆತ್ಮಹತ್ಮೆಗೆ ಶರಣಾಗಿದ್ದು, ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ಈ ಸಂಬಂಧ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂದು ಸಂತಾಪ ಸೂಚಿಸಿದ್ದಾರೆ.

ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದೇನು..?
ಪರಿಷತ್ತಿನ ಉಪಸಭಾಪತಿ ಶ್ರೀ ಧರ್ಮೇಗೌಡರೇ, ಏಕೆ ಹೀಗಾಯಿತು?
ಇಂದು ಬೆಳಗ್ಗೆ ನಾನು ನನ್ನ ಬೆಳಗಿನ ವ್ಯಾಯಾಮ ಮುಗಿಸಿ ಯಾರಿಗೊ ಮೆಸೇಜ್ ಕಳಿಸಬೇಕೆಂದು ಮೊಬೈಲ್ ತೆರೆದಾಗ ಧರ್ಮೇಗೌಡ ಅಕಾಲಿಕ ನಿಧನದ ಸುದ್ದಿ ಓದಿದೆ. ನಿಜಕ್ಕೂ ದಿಗ್ಭ್ರಮೆಯಾಯಿತು. ಆಗ ಸುಮಾರು ಬೆಳಗ್ಗಿನ ಜಾವ 5.30. ತಕ್ಷಣ ಅವರ ಸಹೋದರ, ಮತ್ತೋರ್ವ ವಿಧಾನಪರಿಷತ್ ಸದಸ್ಯ ಬೋಜೇಗೌಡರಿಗೆ ಫೋನ್ ಮಾಡಿದೆ. ಆದರೆ ನನ್ನ ಕರೆಯನ್ನು ಸ್ವೀಕರಿಸಿದ್ದು ನಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರು.

ನಾನು ಅತ್ಯಂತ ಮೆಲುದನಿಯಲ್ಲಿ “ಏನೋ ಸುದ್ದಿ ಕೇಳಿದೆ ನಿಜವಾ” ಎಂದು ಸಿಟಿ ರವಿ ಅವರನ್ನು ಪ್ರಶ್ನಿಸಿದೆ. ಆಗ ರವಿಯವರು “ಹೌದು, ನಿನ್ನೆ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ನಿನ್ನೆ ನಾವೆಲ್ಲರೂ ಒಂದೇ ಕಾರ್ಯಕ್ರಮದ ವೇದಿಕೆಯಲ್ಲಿದ್ದೆವು. ಧರ್ಮೇಗೌಡರು ಆರಾಮಾಗಿ ನಮ್ಮೆಲ್ಲರ ಜೊತೆ ನಗುನಗುತ್ತಾ ಇದ್ದರು. ಡಿಸೆಂಬರ್ 25ರಂದು ನಮ್ಮ ಮನೆಗೂ ಬಂದು ಸ್ವಲ್ಪ ನಮ್ಮೆಲ್ಲರ ಜೊತೆ ಮಾತನಾಡುತ್ತ ಸಮಯ ಕಳೆದಿದ್ದರೂ. ನಿನ್ನೆ ಅವರ ತೋಟದಲ್ಲಿ ಒಂದು ಪೂಜೆ ಸಹ ಮಾಡಿದ್ದರು” ಎಂದೆಲ್ಲ ತಿಳಿಸಿದರು.

ನಂತರ ಏಕೆ ಹೀಗಾಯಿತು?, ನಾನು ಕಳೆದ ವಾರ ಧರ್ಮೇಗೌಡ ಜೊತೆ ಮಾತನಾಡಿದ ವಿಷಯಗಳ ಬಗ್ಗೆ ಚರ್ಚಿಸಿದ್ದೆ. ಧರ್ಮೇಗೌಡರು ವಿಧಾನಪರಿಷತ್ತಿನಲ್ಲಿ ನಾನು ನೋಡಿದಂತೆ ಬಹಳ ಶಾಂತ ಸ್ವಭಾವದವರು. ಹೆಚ್ಚು ಮಾತನಾಡುತ್ತಿರಲಿಲ್ಲ. ನಿಜಕ್ಕೂ ಅವರ ಅಕಾಲಿಕ ಸಾವು ಯಾರಿಗಾದರೂ ದಿಗ್ಬ್ರಮೆ ಉಂಟುಮಾಡುವಂತಹದೇ! ಮೃತರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಎಸ್.ಎಲ್ ಧರ್ಮೇಗೌಡ ಅವರು ನಿನ್ನೆ ಸಂಜೆ 6.30ರ ಸುಮಾರಿಗೆ ಗುಣಸಾಗರಕ್ಕೆ ಆಗಮಿಸಿದ್ದರು. ಸಖರಾಯಪಟ್ಟಣದ ಮನೆಯಿಂದ ಡ್ರೈವರ್ ಜೊತೆ ಕಾರಿನಲ್ಲಿ ಬಂದಿದ್ದ ಧರ್ಮೇಗೌಡ, ರೈಲ್ವೆ ಟ್ರ್ಯಾಕ್ ಬಳಿ ಕಾರನ್ನ ನಿಲ್ಲಿಸಲು ಡ್ರೈವರಿಗೆ ಸೂಚನೆ ನೀಡಿದ್ದಾರೆ. ಇತ್ತ ರೈಲ್ವೆ ಹಳಿ ಬರುವಾಗ ಹಳ್ಳಿಗರನ್ನ ಮಾತನಾಡಿಸಿ ಬಂದಿದ್ದರು. ಅಲ್ಲದೆ ನನಗೆ ಒಬ್ಬರ ಜೊತೆ ಖಾಸಗಿಯಾಗಿ ಮಾತನಾಡಬೇಕು. ನೀನು ಹೋಗು ಅಂತ ಚಾಲಕನನ್ನು ಕಳುಹಿಸಿದ್ದಾರೆ. ಆ ಬಳಿಕ ಕಡೂರಿನ ವ್ಯಕ್ತಿಯೊಬ್ಬರಿಗೆ ಫೋನ್ ಮಾಡಿ ಜನಶತಾಬ್ದಿ ರೈಲು ಬರುವ ಸಮಯವನ್ನು ವಿಚಾರಿಸಿದ್ದಾರೆ. ನಂತರ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.

ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬಂದ ರೈಲಿಗೆ ತಲೆಕೊಟ್ಟು ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದ ಧರ್ಮೇಗೌಡ ಅವರ ಮೃತದೇಹ ಛಿದ್ರಗೊಂಡಿದ್ದು, ಸುಮಾರು 100 ಮೀಟರ್ ದೂರದಲ್ಲಿ ಕೈ ಪತ್ತೆಯಾಗಿದೆ. ಪರಿಷತ್‍ನಲ್ಲಿ ನಡೆದ ಗಲಾಟೆಯಿಂದ ಮನಸ್ಸಿಗೆ ನೋವಾಗಿದೆ. ಮನೆಯಲ್ಲಿನ ಆಸ್ತಿ ವಿಚಾರ, ಹಣಕಾಸು ಸಂಬಂಧ ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ. ಅಲ್ಲದೆ ಪತ್ನಿ ಮಮತಾ, ಮಗ, ಮಗಳಲ್ಲಿ ಕ್ಷಮೆ ಕೂಡ ಕೇಳಿದ್ದು, ಅರ್ಧಕ್ಕೆ ನಿಲ್ಲಿಸಿದ್ದ ಮನೆಯನ್ನು ಪೂರ್ಣಗೊಳಿಸುವಂತೆ ಸೂಚನೆ ಕೂಡ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *