ನಾವು ರಾಗಿಣಿ ಅಂತ ತೆಗೊಂಡಿದ್ವಿ, ಡ್ರಗ್ ಹುಡುಗಿಯಂತಲ್ಲ: ರಮೇಶ್ ಜಾರಕಿಹೊಳಿ

Public TV
1 Min Read

ಬೆಂಗಳೂರು: ರಾಗಿಣಿಯಂತ ಪ್ರಚಾರಕ್ಕೆ ತಗೊಂಡಿದ್ವಿ, ಡ್ರಗ್ ಹುಡುಗಿಯಂತಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಇಂದು ವಿಧಾನಸೌಧದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿ ಪರ ಡ್ರಗ್ಸ್ ಪ್ರಕರಣದ ಆರೋಪಿ ನಟಿ ರಾಗಿಣಿ ಪ್ರಚಾರ ಮಾಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು. ಅದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ, ತನಿಖೆ ನಡೆಯುತ್ತಿದೆ. ಎಷ್ಟೇ ಪ್ರಭಾವಿಗಳಿದ್ದರೂ ಕ್ರಮ ಆಗಲಿದೆ ಎಂದು ತಿಳಿಸಿದರು.

ರಾಗಿಣಿ ಎಂದು ಭಾವಿಸಿ ನಾವು ಪ್ರಚಾರಕ್ಕೆ ಕರೆ ತಂದಿದ್ವಿ. ಅದನ್ನು ಬಿಟ್ಟು ಡ್ರಗ್ಸ್ ಹುಡುಗಿ ಅಂತ ಕರೆದಿರಲಿಲ್ಲ. ಆಕೆಯ ಫೋಟೋ ಎಲ್ಲರ ಜೊತೆ ಇರಬಹುದು. ಡಿಕೆ ಶಿವಕುಮಾರ್ ಜೊತೆಯೂ ಫೋಟೋ ಇರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ನನ್ನ ಜೊತೆಯೂ ಇರಬಹುದು. ಕುಮಾರಸ್ವಾಮಿ ಜೊತೆಯೂ ಇರಬಹುದು. ಅದರ ಬಗ್ಗೆ ನಾನು ಮಾತಾಡಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಇದೇ ವೇಳೆ ರಾಜ್ಯದ ನೆರೆ ವಿಚಾರವಾಗಿ ಮಾತನಾಡಿದ ಅವರು, ನೆರೆ ಬಗ್ಗೆ ಕೇಂದ್ರ ತಂಡ ಬಂದು ಅಧ್ಯಯನ ಮಾಡಿಕೊಂಡು ಹೋಗಿದೆ. ನಮ್ಮ ಕಂದಾಯ ಇಲಾಖೆ ಅದನ್ನು ಫಾಲೋ ಮಾಡುತ್ತಿದೆ. ಬೆಳಗಾವಿ ಸೇರಿದಂತೆ ಅನೇಕ ಜಿಲ್ಲೆಗಳಿಗೆ ನೆರೆ ಎಫೆಕ್ಟ್ ಆಗಿದೆ. ಕೇಂದ್ರ ತಂಡ ಬಂದು ಅಧ್ಯಯನ ಮಾಡಿದೆ. ಈ ಬಾರಿ ಹೆಚ್ಚು ಪರಿಹಾರ ಸಿಗುವ ನಿರೀಕ್ಷೆ ಇದೆ ಎಂದು ರಮೇಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಎಂಟಿಬಿ, ಶಂಕರ್, ವಿಶ್ವನಾಥ್‍ಗೆ ಸಚಿವ ಸ್ಥಾನ ನೀಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ನಾನು ಏನು ಹೇಳುವುದಿಲ್ಲ. ಸಿಎಂ, ಪಕ್ಷದ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಅಲ್ಲಿಯವರೆಗೆ ಎಲ್ಲರೂ ಕಾಯಬೇಕು. ನಾವು ಕೂಡಾ 14 ತಿಂಗಳು ಕಾದಿದ್ದೇವೆ. ಕೋರ್ಟು ಕಚೇರಿ ಅಲೆದಾಡಿದ್ದೇವೆ. ಅವರು ಕೂಡಾ ಕಾಯಬೇಕು. ಸಿಎಂ ಮತ್ತು ಪಕ್ಷದ ವರಿಷ್ಠರು ಈ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *