ನಾಳೆಯೂ ಬಸ್ ಬಂದ್ ಸಾಧ್ಯತೆ – ಬೇಡಿಕೆ ಈಡೇರುವವರೆಗೆ ಮುಷ್ಕರ

Public TV
2 Min Read

– ಬಸ್ ನಿಲ್ದಾಣದಲ್ಲೇ ಸಾರಿಗೆ ನೌಕರರ ಅಹೋರಾತ್ರಿ ಧರಣಿ

ಬೆಂಗಳೂರು: ಸಾರಿಗೆ ಸಿಬ್ಬಂದಿ ಹಾಗೂ ಸರ್ಕಾರದ ನಡುವಿನ ಹಗ್ಗ ಜಗ್ಗಾಟ ಮುಂದುವರಿದಿದ್ದು, ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಬಸ್‍ಗಳಿಲ್ಲದೆ ಜನ ರೋಸಿ ಹೋಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಮಧ್ಯೆಯೇ ನಾಳೆಯೂ ಬಸ್‍ಗಳು ರಸ್ತೆಗೆ ಇಳಿಯುವುದಿಲ್ಲವೇ ಎಂಬ ಪ್ರಶ್ನೆ ಇದೀಗ ಕಾಡತೊಡಗಿದೆ.

ಸಾರಿಗೆ ಸಿಬ್ಬಂದಿ ನಡೆಸುತ್ತಿರುವ ಮುಷ್ಕರ ಮುಂದುವರಿದಿದ್ದು, ಬೇಡಿಕೆ ಈಡೇರಿಸುವವರೆಗೆ ಅನಿರ್ಧಿಷ್ಠಾವಧಿ ಮುಷ್ಕರ ನಡೆಸುವುದಾಗಿ ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ನೌಕರರೊಂದಿಗೆ ಸರ್ಕಾರ ಮಾತಕತೆಗೆ ಸಿದ್ಧವಿದೆ. ಸಂಘಟನೆ ಮುಖಂಡರು ಹಾಗೂ ಕಾರ್ಮಿಕರು ಮಾತುಕತೆಗೆ ಆಗಮಿಸಬೇಕು. ಹಠ ಹಿಡಿದು ಮುಷ್ಕರ ನಡೆಸುವ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡಬಾರದು ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

ಯಾವುದಕ್ಕೂ ಕ್ಯಾರೆ ಎನ್ನದ ನೌಕರರು ತಮ್ಮ ಹೋರಾಟವನ್ನು ಮುಂದುವರಿಸಿದ್ದು, ಪ್ರಯಾಣಿಕರು ಮೆಜೆಸ್ಟಿಕ್, ಯಶವಂತಪುರ, ಬಾಪೂಜಿ ನಗರ ಬಸ್ ನಿಲ್ದಾಣಗಳಲ್ಲಿ ಬಿಎಂಟಿಸಿ ಬಸ್‍ಗಾಗಿ ಪರದಾಡಿದ್ದಾರೆ. ಮತ್ತೊಂದೆಡೆ ಇದೇ ಸಂದರ್ಭದ ಲಾಭ ಪಡೆದ ಆಟೋ ಹಾಗೂ ಖಾಸಗಿ ವಾಹನದವರು ದುಪ್ಪಟ್ಟು ಬೆಲೆ ನಿಗದಿಪಡಿಸಿ ಪ್ರಯಾಣಿಕರಿಗೆ ಬರೆ ಎಳೆದಿದ್ದಾರೆ. ಆದರೆ ನೌಕರರು ಮಾತ್ರ ತಮ್ಮ ಬೇಡಿಕೆಯನ್ನು ಈಡೇರಿಸುವ ವೆರೆಗೆ ಮುಷ್ಕರ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ನಾಳೆಯೂ ಬಸ್‍ಗಳು ರಸ್ತೆಗೆ ಇಳಿಯುವುದು ಅನುಮಾನ ಎನ್ನಲಾಗಿದೆ.

ಸಾರಿಗೆ ಸಚಿವ ಲಕ್ಷ್ಮಣ್ ಸವದಿ ವಿಧಾನಸೌಧದಲ್ಲಿ ಸಿಎಂ ಜೊತೆ ಹಾಗೂ ಅಧಿಕಾರಿಗಳ ಜೊತೆ ಸಭೆ ಮಾಡಿದ್ದು, ಬಿಎಂಟಿಸಿ ಎಂಡಿ, ಅಧ್ಯಕ್ಷರ ಜೊತೆ ಸಹ ಮಾತುಕತೆ ನಡೆಸಿದ್ದಾರೆ. ಸಾರಿಗೆ ನೌಕರರ ಸಂಧಾನಕ್ಕೆ ಸರ್ಕಾರ ಸರ್ಕಸ್ ಮಾಡಿದ್ದಾರೆ. ಆದರೆ ಸರ್ಕಾರ-ಸಾರಿಗೆ ನೌಕರರ ಸಂಧಾನ ವಿಫಲವಾಗಿದೆ.

ಕೊರೊನಾ ಲಾಕ್‍ಡೌನ್ ಬಳಿಕ ರೈತರು ಭಾರತ್ ಬಂದ್‍ಗೆ ಕರೆಕೊಟ್ಟರು. ಇದೀಗ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಹೀಗೆ ಸಾಲು ಸಾಲು ಬಂದ್‍ಗೆ ಜನ ಬೇಸತ್ತಿದ್ದು, ಬಸ್‍ಗಳಿಲ್ಲದೆ ಪರದಾಡುತ್ತಿದ್ದಾರೆ. ಗರ್ಭಿಣಿ, ಬಾಣಂತಿ, ರೋಗಿಗಳು ನಿಲ್ದಾಣಗಳದಲ್ಲೇ ನಿದ್ರೆಗೆ ಜಾರಿದ ಚಿತ್ರಣ ಕಂಡು ಬಂತು.

ರಾಜ್ಯದ ಹಲವೆಡೆ ಬಸ್‍ಗಳ ಮೇಲೆ ಕಲ್ಲು ತೂರಾಟ ಸಹ ಮಾಡಿದ್ದು, ಸಂಚಾರ ಶುರು ಮಾಡಿದ್ದ ಬಸ್‍ಗಳ ಗಾಜುಗಳನ್ನು ಪುಡಿಪುಡಿ ಮಾಡಲಾಗಿದೆ. ಬಸ್ ಬಂದ್‍ನ ಲಾಭ ಪಡೆದ ಆಟೋ ಹಾಗೂ ಖಾಸಗಿ ವಾಹನಗಳು ಬಾಯಿಗೆ ಬಂದಷ್ಟು ಹಣ ಪೀಕಿದ್ದಾರೆ. ಖಾಸಗಿ ಬಸ್‍ಗಳು ಸಹ ಪ್ರಯಾಣಿಕರನ್ನು ಸುಲಿಗೆ ಮಾಡಿವೆ.

Share This Article
Leave a Comment

Leave a Reply

Your email address will not be published. Required fields are marked *