ನಾಳೆಯಿಂದ ಅಖಾಡದಲ್ಲಿ ರಾಖಿ – ಯಶ್ ಅಭಿಮಾನಿಗಳಿಗೆ ಸಿಹಿಸುದ್ದಿ

Public TV
2 Min Read

ಬೆಂಗಳೂರು: ಹೊಂಬಾಳೆ ಫಿಲ್ಮ್ಸ್ ನ ಕಾರ್ಯನಿರ್ವಾಹಕ ನಿರ್ಮಾಪಕ ಕಾರ್ತಿಕ್ ಗೌಡ ಅವರು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸಹಿ ಸುದ್ದಿಯನ್ನು ನೀಡಿದ್ದಾರೆ.

ಕೆಜಿಎಫ್-1 ಸಿನಿಮಾದ ಮುಂದುವರಿದ ಭಾಗ ಕೆಜಿಎಫ್-2ಗಾಗಿ ಇಡೀ ಭಾರತ ಚಿತ್ರರಂಗವೇ ಕಾದು ಕುಳಿತಿದೆ. ಕೊರೊನಾ ಕಾರಣದಿಂದ ನಿಂತಿದ್ದ ಸಿನಿಮಾ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಈಗ ನಾಳೆಯಿಂದ ರಾಕಿಂಗ್ ಸ್ಟಾರ್ ಯಶ್ ಅವರು ಅಂತಿಮ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿಯನ್ನು ಕಾರ್ತಿಕ್ ಗೌಡ ನೀಡಿದ್ದಾರೆ.

ಈ ವಿಚಾರವಾಗಿ ಇಂದು ಟ್ವೀಟ್ ಮಾಡಿರುವ ಕಾರ್ತಿಕ್ ಗೌಡ ಅವರು, ನಾಳೆಯಿಂದ ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್-2 ಸಿನಿಮಾದ ಅಂತಿಮ ಹಂತದ ಶೂಟಿಂಗ್‍ನಲ್ಲಿ ಭಾಗಿಯಾಗಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ನಾವು ಚಿತ್ರೀಕರಣವನ್ನು ಪೂರ್ಣಗೊಳಿಸಿ ಚಿತ್ರದ ಬಿಡುಗಡೆಯ ಕಡೆ ಸಾಗುತ್ತೇವೆ ಎಂದು ಬಿಗ್ ಅಪ್ಡೇಟ್ ನೀಡಿದ್ದಾರೆ. ಇದನ್ನು ಕಂಡ ಯಶ್ ಅಭಿಮಾನಿಗಳು ಖುಷಿಯಾಗಿದ್ದು, ಟ್ವಿಟ್ಟರಿನಲ್ಲಿ ಟ್ರೆಂಡ್ ಸೆಟ್ ಮಾಡಿದ್ದಾರೆ.

ಚಿತ್ರತಂಡ ಈ ಮುಂಚೆಯೇ ಅಕ್ಟೋಬರ್ 23ಕ್ಕೆ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ಹೇಳಿಕೊಂಡಿತ್ತು. ಆದರೆ ಕೊರೊನಾ ಕಾರಣದಿಂದ ಚಿತ್ರದ ಶೂಟಿಂಗ್ ಆರಂಭವಾಗದ ಕಾರಣ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ. ಚಿತ್ರ ಮುಂದಿನ ವರ್ಷ ಜನವರಿ 14ರಂದು ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿದೆ. ಕೆಜಿಎಫ್ ಮೊದಲ ಚಾಪ್ಟರ್ ನೋಡಿ ಥ್ರಿಲ್ ಆಗಿದ್ದ ಚಿತ್ರಪ್ರೇಮಿಗಳು ಈಗ ಕೆಜಿಎಫ್-2ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

ಕೊರೊನಾ ಲಾಕ್‍ಡೌನ್ ಮುಗಿದ ಬಳಿಕ ಈಗಾಗಲೇ ಆಗಸ್ಟ್ 26ರಿಂದ ಕೆಜಿಎಫ್-2 ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಹಿರಿಯ ನಟ ಪ್ರಕಾಶ್ ರೈ ಮತ್ತು ಮಾಳವಿಕಾ ಅವರು ನಟಿಸಿರುವ ದೃಶ್ಯಗಳನ್ನು ಚಿತ್ರೀಕರಣವನ್ನು ಮಾಡಲಾಗಿದೆ. ಕೊರೊನಾ ಲಾಕ್‍ಡೌನ್‍ಗೂ ಮುನ್ನ ಬಾಲಿವುಡ್‍ನ ಸಂಜಯ್ ದತ್ ಮತ್ತು ರವೀನಾ ಟಂಡನ್ ಕೂಡ ಬಂದು ಚಿತ್ರೀಕರಣದಲ್ಲಿ ಭಾಗವಹಿಸಿ ಹೋಗಿದ್ದಾರೆ.

ಎಲ್ಲ ಅಂದುಕೊಂಡಂತೆ ನಡೆದಿದ್ದರೆ, ಈ ಬಾರಿಯ ದಸರಾಗೆ ರಾಖಿಬಾಯ್ ಚಿತ್ರಮಂದಿರಗಳಿಗೆ ಬರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಆದರೆ ಈ ತಿಂಗಳಲ್ಲೇ ಸಿನಿಮಾ ಚಿತ್ರೀಕರಣ ಅಂತ್ಯವಾಗುವ ಕಾರಣ, ಅಕ್ಟೋಬರ್ ಕೊನೆಯಲ್ಲಿ ಕೆಜಿಎಫ್-2 ಸಿನಿಮಾದ ಟ್ರೈಲರ್ ನೋಡಬಹುದು ಎಂದು ಯಶ್ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಚಿತ್ರತಂಡ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *