ನಾಲ್ಕು ಬಾರಿ ಕಾರ್ ಪಲ್ಟಿಯಾಗಿ, ಮರಕ್ಕೆ ಡಿಕ್ಕಿ ಹೊಡಿತು: ಪ್ರತ್ಯಕ್ಷದರ್ಶಿ

Public TV
1 Min Read

– ಜಗ್ಗೇಶ್ ಪುತ್ರ ಯತಿರಾಜ್ ಕಾರ್ ಅಪಘಾತ

ಚಿಕ್ಕಬಳ್ಳಾಪುರ: ಜಗ್ಗೇಶ್ ಪುತ್ರ ಯತಿರಾಜ್ ಕಾರ್ ನಾಲ್ಕು ಬಾರಿ ಪಲ್ಟಿಯಾಗಿ, ಮರಕ್ಕೆ ಡಿಕ್ಕಿ ಹೊಡೆದು ನಿಂತಿತು ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ ಲಕ್ಷ್ಮಿಪತಿ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

ನಾವು ಹೆದ್ದಾರಿ ಬಳಿಯಲ್ಲಿಯೇ ವಿದ್ಯುತ್ ಕಂಬಗಳನ್ನು ಹಾಕ್ತಾ ಇದ್ದೀವಿ. ಕಾರ್ ವೇಗವಾಗಿ ಬರುತ್ತಿರುವಾಗ ಎಡಗಡೆಯಿಂದ ಬೈಕ್ ಬಂದಿದೆ. ಬೈಕಿಗೆ ಡಿಕ್ಕಿ ಹೊಡೆಯೋದನ್ನ ತಪ್ಪಿಸಲು ಮುಂದಾದಾಗ ಕಾರ್ ಯತಿರಾಜ್ ನಿಯಂತ್ರಣ ತಪ್ಪಿದೆ. ವೇಗವಾಗಿ ಬರುತ್ತಿದ್ದರಿಂದ ಕಾರ್ ನಾಲ್ಕು ಬಾರಿ ಪಲ್ಟಿಯಾಗಿ, ನಮ್ಮ ಮುಂದೆ ಬಂದು ಮರಕ್ಕೆ ಡಿಕ್ಕಿ ಹೊಡೀತು. ಮರಕ್ಕೆ ಡಿಕ್ಕಿ ಹೊಡೆಯದಿದ್ರೆ ನಮ್ಮ ಮೇಲೆಯೇ ಕಾರ್ ಬರುತ್ತಿತ್ತು.

ಕಾರ್ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಯತಿರಾಜ್ ಅವರಿಗೆ ಪ್ರಾಣಪಾಯಕ್ಕೆ ಏನು ಅಪಾಯವಾಗಿಲ್ಲ. ಕೂಡಲೇ ಕಾರ್ ಬಾಗಿಲು ತೆಗೆದು ಯತಿರಾಜ್ ಅವರನ್ನ ಹೊರ ಕರೆ ತಂದು ನೀರು ಕುಡಿಸಿದೆವು. ನಂತರ ಸ್ವಲ್ಪ ಇಲ್ಲಿಯೇ ಓಡಾಡಿಸಿ ಏನಾದ್ರೂ ಆಗಿದೆಯಾ ಅಂತ ನೋಡಿದೇವು. ಆಟೋ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯ್ತು. ವಿಷಯ ತಿಳಿದ ಬಂದು ಅಲ್ಲಿಗೆ ಬಂದ ಗೆಳೆಯರ ಜೊತೆ ಯತಿರಾಜ್ ಹೋದರು ಎಂದು ಲಕ್ಷ್ಮಿಪತಿ ಮಾಹಿತಿ ನೀಡಿದ್ದಾರೆ.

ಅಪಘಾತ ಸಂಭವಿಸಿದ್ದು ಎಲ್ಲಿ?:
ಚಿಕ್ಕಬಳ್ಳಾಪುರ ನಗರದ ಹೊರವಲಯದ ಹೈದರಾಬಾದ್ ಹೆದ್ದಾರಿಯ ಅಲಗುರ್ಕಿ ಬೈ ಪಾಸ್ ಬಳಿ ಅಪಘಾತ ಸಂಭವಿಸಿದೆ. ಯತಿರಾಜ್ ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಿರುವಾಗ ಅಪಘಾತ ನಡೆದಿದೆ. ಅಪಘಾತದ ತೀವ್ರತೆಗೆ ಬಿಎಂಡಬ್ಲ್ಯೂ ಕಾರ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಏರ್ ಬ್ಯಾಗ್ ಓಪನ್ ಆಗಿದ್ದು ಮತ್ತು ಸ್ಥಳೀಯರ ರಕ್ಷಣೆಯಿಂದ ಯತಿರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರ್ ಜಗ್ಗೇಶ್ ಅವರ ಹೆಸರಿನಲ್ಲಿ ನೋಂದಣಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *