ನಾಲ್ಕನೇ ಬಾರಿ ಮದುವೆಯಾಗಲು ಮಗನನ್ನೇ ಕೊಂದ 23ರ ವಿಧವೆ

Public TV
2 Min Read

– ವಿವಾಹವಾದ ವರ್ಷದ ನಂತ್ರ ಪತಿಯಿಂದ ದೂರ
– 2ನೇ ಪತಿ ಸಾವು, ಅಪಘಾತದಲ್ಲಿ 3ನೇ ಗಂಡ ನಿಧನ

ಪಾಟ್ನಾ: 23 ವರ್ಷದ ವಿಧವೆ ನಾಲ್ಕನೇ ಬಾರಿಗೆ ಮದುವೆಯಾಗಲು ಬಯಸಿದ್ದರಿಂದ ತನ್ನ 4 ವರ್ಷದ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿರುವ ಘಟನೆ ಪಾಟ್ನಾದ ಹಸನ್‍ಪುರ್ ಖಂಡಾ ಪ್ರದೇಶದಲ್ಲಿ ನಡೆದಿದೆ.

ಸಜನ್ ಕುಮಾರ್ ಮೃತ ಬಾಲಕ. ಈತನಿಗೆ ಮಾತನಾಡಲು ಮತ್ತು ಸರಿಯಾಗಿ ಕಿವಿ ಕೇಳಿಸುತ್ತಿರಲಿಲ್ಲ. ಆರೋಪಿಯನ್ನು ಧರ್ಮಶೀಲಾ ದೇವಿ ಎಂದು ಗುರುತಿಸಲಾಗಿದೆ. ಈ ಘಟನೆ ಶುಕ್ರವಾರ ಶಹಜಹಾನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಇದೀಗ ಆರೋಪಿ ವಿಧವೆಯನ್ನು ಜೈಲಿಗೆ ಕಳುಹಿಸಲಾಗಿದೆ.

ಮೃತ ಕುಮಾರ್, ದೇವಿ ಮತ್ತು ಆಕೆಯ ಮೊದಲ ಪತಿ ಅರುಣ್ ಚೌಧರಿ ಮಗ. ಅರುಣ್ ನಳಂದದ ಭದೌಲ್ ನಿವಾಸಿಯಾಗಿದ್ದು, ಮದುವೆಯಾದ ಒಂದು ವರ್ಷದ ನಂತರ ಆರೋಪಿ ದೇವಿ ಪತಿ ಅರುಣ್‍ನನ್ನು ಬಿಟ್ಟು ತನ್ನ ಮಗನ ಕರೆದುಕೊಂಡು ಹೋಗಿದ್ದಳು. ಮತ್ತೆ ಆರೋಪಿ ಎರಡನೇ ಮದುವೆಯಾದಳು. ಆದರೆ 2ನೇ ಪತಿ ಮೃತಪಟ್ಟರು. ಹೀಗಾಗಿ ಆರೋಪಿ ಪಾಟ್ನಾದ ಮುಸ್ತಾಫಾಪುರ ನಿವಾಸಿ ಮಹೇಶ್ ಚೌಧರಿ ಜೊತೆ ಮೂರನೇ ಬಾರಿಗೆ ವಿವಾಹವಾದಳು.

ಎರಡು ತಿಂಗಳ ಹಿಂದೆ ಮಹೇಶ್ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಹೀಗಾಗಿ ಆರೋಪಿ ದೇವಿ ಮತ್ತೆ ಮದುವೆಯಾಗಲು ಬಯಸಿದ್ದಳು. ಆದರೆ ಇದಕ್ಕೆ ಆಕೆಯ ಮಗ ಅಡ್ಡಿಯಾಗಿದ್ದನು. ಹೀಗಾಗಿ ಮಗನನ್ನೇ ಕೊಲೆ ಮಾಡಲು ಪ್ಲಾನ್ ಮಾಡಿದ್ದಳು. ಅದರಂತೆಯೇ ಪೋಷಕರೊಂದಿಗೆ ವಾಸಿಸುತ್ತಿದ್ದ ಆರೋಪಿ ದೇವಿ ಶುಕ್ರವಾರ ತನ್ನ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮದ ಕೆಲ ಅಪ್ರಾಪ್ತ ಬಾಲಕರು ಕುಮಾರ್ ಮೃತದೇಹವನ್ನು ನೀರಿನಲ್ಲಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಘಟನೆಯ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.

ನಾನು ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಲು ಬಯಸಿದ್ದೆ. ಆದ್ದರಿಂದ ನನ್ನ ಮಗುವನ್ನು ಕೊಲೆ ಮಾಡಿದ್ದೇನೆ ಎಂದು ವಿಚಾರಣೆ ವೇಳೆ ಆರೋಪಿ ದೇವಿ ತಪ್ಪೊಪ್ಪಿಕೊಂಡಿದ್ದಾಳೆ. ಪೊಲೀಸರು ಆಕೆಯ ಮೊದಲ ಪತಿ ಅರಣ್‍ನನ್ನು ಪತ್ತೆ ಮಾಡಿ ಆತನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ನಂತರ ಮಹಿಳೆಯ ವಿರುದ್ಧ ಎಫ್‍ಐಆರ್ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *