ನಾನು ಸಿಎಂ ಆಗಬೇಕು ಅಂತ ಗಡ್ಡ ಬಿಟ್ಟಿಲ್ಲ, ಕಾಲೇಜಿನಿಂದಲೂ ಬಿಡ್ತಿದ್ದೇನೆ: ಸಿ.ಟಿ.ರವಿ

Public TV
2 Min Read

ಚಿಕ್ಕಮಗಳೂರು.: ನಾನು ಸಿಎಂ ಆಗಬೇಕೆಂಬ ಕಾರಣಕ್ಕೆ ಗಡ್ಡ ಬಿಟ್ಟಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ತಾಲೂಕಿನ ಮಲ್ಲೇನಹಳ್ಳಿಯಲ್ಲಿ ವಿವಿಧ ಕಾಮಗಾರಿಗಳನ್ನ ಉದ್ಘಾಟಿಸಿ ಮಾತನಾಡಿದ ಅವರು, ವಿಜಯನಗರದ ಮೈಲಾರಲಿಂಗ ಸ್ವಾಮಿಯ ಕಾರ್ಣೀಕದ ಬಗ್ಗೆ ನನಗೆ ಗೊತ್ತಿಲ್ಲ. ನಾನಂತು ಮುಖ್ಯಮಂತ್ರಿ ಆಗಬೇಕೆಂದು ಗಡ್ಡ ಬಿಟ್ಟಿಲ್ಲ ಎಂದು ನಕ್ಕರು. ಗಡ್ಡಾಧಾರಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಕಾರ್ಣೇಕ ಹೇಳಿರುವುದು ನಿಜವಾಗಿದ್ದರೆ ಬಹಳ ಜನ ಗಡ್ಡ ಬಿಡಬಹುದು. ಯಾರು ಮುಖ್ಯಮಂತ್ರಿ ಆಕಾಂಕ್ಷಿ ಇದ್ದಾರೋ ಅವರೆಲ್ಲಾ ಗಡ್ಡ ಬಿಡಲು ಪ್ರಾರಂಭಿಸಬಹುದು ಎಂದರು.

ನಾನು ಕಾಲೇಜು ದಿನಗಳಿಂದಲೂ ನಿರಂತರವಾಗಿ ಗಡ್ಡ ಬಿಡುತ್ತಿದ್ದೇನೆ, ಹಣೆಗೆ ತಿಲಕ, ಕಿವಿಗೆ ಮುರ, ಗಡ್ಡ ನನ್ನ ಐಡೆಂಟಿಟಿಯ ಒಂದು ಭಾಗ. ಭಗವಂತ ಏನೇನು ಬರೆದಿದ್ದಾನೋ, ತಾಯಿಯ ಆಶೀರ್ವಾದ ಏನಿದೆಯೋ ಗೊತ್ತಿಲ್ಲ, ಆದರೆ ಮುಖ್ಯಮಂತ್ರಿ ಆಗಬೇಕೆಂದು ನಾನಂತೂ ಗಡ್ಡ ಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ನನ್ನ ನೋಡಿದವರು ದೂರದಿಂದಲೇ ಸಿ.ಟಿ.ರವಿ ಎಂದು ಹೇಳಲು ಇದು ನನ್ನ ಐಡೆಂಟಿಟಿಯ ಭಾಗ. ನನಗೆ ಪಕ್ಷನಿಷ್ಠೆ ಪರಿಶ್ರಮದ ಮೇಲೆ ಮಾತ್ರ ನಂಬಿಕೆ ಎಂದು ಹೇಳಿದರು.

ಮುಖ್ಯಮಂತ್ರಿ ರೇಸ್‍ನಲ್ಲಿ 15 ದಿನ ಮಾಧ್ಯಮದಲ್ಲಿ ನಾನೊಬ್ಬನೇ ಅಲ್ಲದೆ ಹಲವರ ಹೆಸರು ಬರುತ್ತಿತ್ತು. ಮುಖ್ಯಮಂತ್ರಿಯಾಗಲು ಯೋಗವೂ ಇರಬೇಕಲ್ವಾ ಎಂದು ಅವರು, ಈಗ ಬಸವರಾಜ ಬೊಮ್ಮಾಯಿ ಅವರಿಗೆ ಯೋಗ ಕೂಡಿ ಬಂದಿದೆ. ಅವರು ಒಳ್ಳೆ ಕೆಲಸ ಮಾಡುತ್ತಾರೆಂಬ ನಿರೀಕ್ಷೆ ಇದೆ. ಮುಖ್ಯಮಂತ್ರಿ ಬೊಮ್ಮಾಯಿ ನನ್ನ ಸ್ನೇಹಿತರು. ಅವರಿಗೆ ಎಲ್ಲ ರೀತಿಯ ಸಹಕಾರ ಕೊಡುತ್ತೇವೆ. ರಾಜ್ಯದ ಹಿತಕ್ಕೆ ಅವರು ಮಾಡುವ ಕೆಲಸಕ್ಕೆ ನಮ್ಮ ಬೆಂಬಲ ಇರುತ್ತದೆ. ರಾಜ್ಯದ ಹಿತವನ್ನೇ ಆದ್ಯತೆಯನ್ನಾಗಿ ಇಟ್ಟುಕೊಂಡು ಸಂಪುಟ ರಚನೆ ಮಾಡಬೇಕು. ಸಾಮಾಜಿಕ, ಪ್ರಾದೇಶಿಕ ಸಮತೋಲನ ಕಾಪಾಡಬೇಕು. ಒಳ್ಳೆ ಸಂಪುಟ ರಚಿಸಿ ಪುನಃ ಅವರ ನೇತೃತ್ವದಲ್ಲೇ ಚುನಾವಣೆ ಗೆದ್ದು ಬರಬೇಕು ಎಂದು ಆಶಿಸಿದರು.

ಕರ್ನಾಟಕ ಮತ್ತು ತಮಿಳುನಾಡು ಎರಡು ರಾಜ್ಯಗಳು ರಾಜಕಾರಣ ಮಾಡದೆ ಎರಡೂ ರಾಜ್ಯಕ್ಕೆ ಅನುಕೂಲವಾಗುವಂತೆ ಮಧ್ಯಮ ಮಾರ್ಗದಲ್ಲಿ ಮೇಕೆದಾಟು ಯೋಜನೆ ಮಾಡಬೇಕು. ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಉಪವಾಸ ಮಾಡುವುದಾಗಿ ಹೇಳಿರುವ ಬಗ್ಗೆ ಭಾನುವಾರ ಸುದ್ದಿಗಾರರ ಪ್ರಶ್ನೆ ಮಾಡಿದಾಗ, ಬೆಂಗಳೂರಿನಲ್ಲಿ ಶೇ.30ರಷ್ಟು ತಮಿಳುನಾಡಿನವರೇ ಇದ್ದಾರೆ. ದೇಶದ ಎಲ್ಲ ರಾಜ್ಯದ ಜನ ಬೆಂಗಳೂರಿನಲ್ಲಿದ್ದಾರೆ. ಎರಡೂ ರಾಜ್ಯದ ಮುಖ್ಯಮಂತ್ರಿಗಳು ರಾಜಕಾರಣ ಮಾಡದೆ ವಾಸ್ತವಿಕ ನೆಲೆಯಲ್ಲಿ ಯೋಚನೆ ಮಾಡಬೇಕು ಎಂದರು. ಇದನ್ನೂ ಓದಿ: ಗಿಡದಲ್ಲೇ ಕೊಳೆಯುತ್ತಿದೆ ಕಾಫಿ – ಆತಂಕದಲ್ಲಿ ಬೆಳೆಗಾರರು

Share This Article
Leave a Comment

Leave a Reply

Your email address will not be published. Required fields are marked *