ನಾನು ಮನೆಗೆ ಹೋಗ್ತೀನಿ – ಬಿಗ್ ಮನೆಯಲ್ಲಿ ಕಣ್ಣೀರಿಟ್ಟ ದಿವ್ಯಾ

Public TV
2 Min Read

ಬಿಗ್‍ಬಾಸ್ ಮನೆಯಲ್ಲಿ ಮೊದಲು ಒಳ್ಳೆಯ ಸ್ನೇಹಿತರಾಗಿದ್ದ ಸ್ಪರ್ಧಿಗಳು ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ಕಿತ್ತಾಡಿಕೊಂಡಿದ್ದಾರೆ. ಸ್ನೇಹಿತರಾಗಿದ್ದ ಮಂಜು ಮತ್ತು ದಿವ್ಯಾ ನಡುವೆ ಒಂದು ವಿಚಾರವಾಗಿ ಮನಸ್ತಾಪವಾಗಿ ಇಬ್ಬರೂ ದೂರವಾಗಿದ್ದಾರೆ.

ಕಳೆದ ವಾರದ ಕ್ಯಾಪ್ಟನ್ಸಿ ಟಾಸ್ಕ್‍ನಲ್ಲಿ ದಿವ್ಯಾ ಸುರೇಶ್ ಅವರು ಶಮಂತ್ ಬ್ರೋ ಗೌಡಗೆ ಸಪೋರ್ಟ್ ಮಾಡಿದ್ದರು. ಇದು ಮಂಜು ಗಮನಕ್ಕೆ ಬಂದಿದೆ. ನಾಲ್ಕು ದಿನ ಇದನ್ನು ಮಂಜು ಸಹಿಸಿಕೊಂಡಿದ್ದರು. ಆದರೆ ಹೆಚ್ಚು ದಿನ ಇದನ್ನು ತಡೆದಿಟ್ಟುಕೊಳ್ಳೋಕೆ ಅವರಿಂದ ಆಗಿಲ್ಲ. ಹೀಗಾಗಿ ದಿವ್ಯಾ ಬಳಿ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ನನಗೆ ದಿವ್ಯಾ ಜೊತೆಗಿನ ಸ್ನೇಹ ಸರಿ ಇಲ್ಲ ಎಂದು ಶುಭಾ ಬಳಿಯೂ ಮಂಜು ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

ಮಂಜು ಈ ವಿಚಾರವನ್ನು ಪ್ರಸ್ತಾಪ ಮಾಡಿದ ನಂತರ ದಿವ್ಯಾ ಇದನ್ನು ಒಪ್ಪಿಕೊಂಡಿಲ್ಲ. ಶಮಂತ್ ಜಾಗದಲ್ಲಿ ಯಾರೇ ಇದ್ದರೂ ಇದೇ ರೀತಿ ಮಾಡುತ್ತಿದ್ದೆ ಎಂದು ದಿವ್ಯಾ ಹೇಳಿಕೊಂಡರು. ಕೊನೆಗೆ ಮಂಜು ನಾನು ನಿನ್ನ ಬಳಿ ಕ್ಷಮೆ ಕೇಳುತ್ತಿದ್ದೇನೆ. ಸ್ವಾರಿ ಎಂದರು ದಿವ್ಯಾ. ಆದರೆ ಮಂಜು ಕ್ಷಮೆ ಬೇಡ. ನೀನು ಮಾಡಿದ್ದೂ ತಪ್ಪು ಎಂದು ನಿನಗೆ ಅನ್ನಿಸುತ್ತಿಲ್ಲ ಎಂದು ನೇರವಾಗಿಯೇ ಹೇಳಿದರು.

ನಂಗೆ ಈ ಮನೆ ಸಾಕಾಗಿದೆ. ತುಂಬಾನೇ ಹಿಂಸೆ ಆಗುತ್ತಿದೆ. ನಾಳೆಯಿಂದ ನನ್ನ ಜೊತೆ ಮಾತನಾಡಬೇಡ. ದಯವಿಟ್ಟು ನನ್ನ ಜೊತೆಗಿನ ಮಾತು ನಿಲ್ಲಿಸು. ಈ ವಾರ ನಾನೇ ಮನೆಯಿಂದ ಹೊರ ಹೋಗುತ್ತೇನೆ. ನೀನು ಮಾತನಾಡೋದನ್ನು ನಿಲ್ಲಿಸಿದರೆ ನಿನ್ನ ಅಭಿಮಾನಿಗಳು ನನಗೆ ವೋಟ್ ಮಾಡೋದು ನಿಲ್ಲಿಸುತ್ತಾರೆ. ನಾನು ಯಾರ ಜೊತೆಗೂ ನಾಳೆಯಿಂದ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ. ಆಗ ಮಂಜು ಮಾತು ನಿಲ್ಲಿಸು ಎಂದು ನಾನು ಹೇಳಿಲ್ಲ ಎಂದು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ನೀನು ಮೊದಲಿನಂತೆ ನನ್ನ ಜೊತೆಗೆ ಇಲ್ಲ ಮಂಜಾ ಎಂದು ಹೇಳುತ್ತಾ ದಿವ್ಯಾ ಕಣ್ಣೀರು ಹಾಕಿದ್ದಾರೆ.

ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಬಗ್ಗೆ ದಿವ್ಯಾ ಮಾತನಾಡಿದ್ದರು. ಅವರಿಬ್ಬರು ಸೆಕ್ಯುರಿಟಿ ಗಾರ್ಡ್‍ಗಳಂತೆ ನನ್ನ ಹಿಂದೆಯೇ ಇರುತ್ತಿದ್ದರು ಎಂದು ನನ್ನ ಮನೆಯಲ್ಲಿ ಹೇಳಿದ್ದಾರೆ ಎಂಬುದಾಗಿ ದಿವ್ಯಾ ಸುದೀಪ್ ಎದುರು ಹೇಳಿದ್ದರು. ಇದಾದ ನಂತರದಲ್ಲಿ ಪ್ರಶಾಂತ್ ಹಾಗೂ ಚಕ್ರವರ್ತಿ ಮಾತಿನ ಮೂಲಕವೇ ದಿವ್ಯಾಗೆ ಚುಚ್ಚಿ ಮಾತನಾಡುತ್ತಿದ್ದಾರೆ. ಹೀಗಾಗಿ, ಮನೆಯಿಂದ ಹೊರ ಹೋಗಬೇಕು ಎಂದು ದಿವ್ಯಾ ಹೇಳೋಕೆ ಇದು ಕೂಡ ಒಂದು ಕಾರಣ.

Share This Article
Leave a Comment

Leave a Reply

Your email address will not be published. Required fields are marked *