ನಾನು ಬದುಕುಳಿಯಲು ಕೊಲೆ ಮಾಡಿದೆ – ಮಲಗಿದ್ದ ಪತ್ನಿ, ಅತ್ತೆಯ ಕತ್ತು ಕೊಯ್ದ

Public TV
2 Min Read

– ಕೊಲೆಯ ನಂತ್ರ ಮಕ್ಕಳೊಂದಿಗೆ ಪೊಲೀಸ್ ಠಾಣೆಗೆ ಹೋದ

ಜೈಪುರ: ವ್ಯಕ್ತಿಯೊಬ್ಬ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಅಲ್ಲದೇ ಹೆಂಡತಿಯ ವಿವಾಹೇತರ ಸಂಬಂಧಕ್ಕೆ ಆಕೆಯ ತಾಯಿ ಕೂಡ ಸಪೋರ್ಟ್ ಮಾಡಿದ್ದಾಳೆ ಎಂದು ಅತ್ತೆಯನ್ನೂ ಕೊಲೆ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಮಂಜು ಸೈನಿ ಮತ್ತು ಈಕೆಯ ತಾಯಿ ಗೌರ ದೇವಿ ಕೊಲೆಯಾವದರು. ಆರೋಪಿಯನ್ನು ರಾಮ್ ಕಿಶನ್ ಸೈನಿ ಎಂದು ಗುರುತಿಸಲಾಗಿದೆ. ಆರೋಪಿ ಕೊಲೆ ಮಾಡಿದ ನಂತರ ತನ್ನ ಮಕ್ಕಳೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಆರೋಪಿ ಮಂಜು ಸೈನಿ ಜೊತೆ ಅನೇಕ ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ಈ ದಂಪತಿಗೆ ಮೂವರು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸೈನಿ ಮತ್ತು ಆತನ ಕುಟುಂಬವು ಚಾಂಡಲೈ ರಸ್ತೆಯ ಶಿವಂ ಕಾಲೋನಿಯಲ್ಲಿರುವ ಅತ್ತೆ ಮನೆಯಲ್ಲಿ ವಾಸಿಸುತ್ತಿದ್ದರು. ಸೋಮವಾರ ನಸುಕಿನ ಜಾವ ಸುಮಾರು 1 ಗಂಟೆಗೆ ಮಲಗಿದ್ದ ಪತ್ನಿ ಮಂಜು ಅತ್ತೆ ಗೌರ ದೇವಿಯ ಕತ್ತನ್ನು ಕೊಯ್ದು ಕೊಲೆ ಮಾಡಿದ್ದಾನೆ. ಈ ವೇಳೆ ಆರೋಪಿಯ ಮಕ್ಕಳು ಮಲಗಿದ್ದರು ಎಂದು ತಿಳಿದುಬಂದಿದೆ.

ಕೊಲೆ ಮಾಡಿದ ನಂತರ ಆರೋಪಿ ಸೈನಿ ತನ್ನ ಮಕ್ಕಳೊಂದಿಗೆ ಚಕ್ಸು ಪೊಲೀಸ್ ಠಾಣೆಗೆ ಹೋಗಿ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ತಕ್ಷಣ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಆರೋಪಿ ತನ್ನ ಮಕ್ಕಳ ಮುಂದೆ ತಾನು ಮಾಡಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

ಸದ್ಯಕ್ಕೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಹೇಳಿದ ನಂತರ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದ್ದು, ಮಲಗಿದ್ದ ಸ್ಥಳದಲ್ಲಿಯೇ ಮಂಜು ಮತ್ತು ಗೌರ ದೇವಿ ಶವ ಪತ್ತೆಯಾಗಿದೆ. ನಂತರ ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲದೇ ವಿಧಿವಿಜ್ಞಾನ ತಂಡ ಮತ್ತು ಶ್ವಾನ ದಳದ ತಂಡವೂ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿವೆ.

ನನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಳು, ಅದಕ್ಕೆ ನನ್ನ ಅತ್ತೆ ಕೂಡ ಬೆಂಬಲ ನೀಡುತ್ತಿದ್ದಳು. ಇಬ್ಬರು ಮಹಿಳೆಯರು ನನ್ನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದರು. ಹೀಗಾಗಿ ನಾನು ಬದುಕುಳಿಯಲು ಅವರನ್ನು ಕೊಲೆ ಮಾಡಿದೆ ಎಂದು ಆರೋಪಿ ಪೊಲೀಸರ ಬಳಿ ಹೇಳಿದ್ದಾನೆ. ಮಕ್ಕಳಿಗೂ ಈ ಕೊಲೆಗೂ ಸಂಬಂಧ ಇಲ್ಲ. ಅಲ್ಲದೇ ತಾನೇ ಕೊಲೆ ಮಾಡಿದ್ದೇನೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ. ಮದುವೆಯಾಗಿದ್ದರು ಪತ್ನಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅನುಮಾನ ಪಟ್ಟು ಈ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *