ನಾಗಮಂಗಲಕ್ಕೆ ಸುರೇಶ್ ಗೌಡ ಮುಂದಿನ ಅಭ್ಯರ್ಥಿ: ನಿಖಿಲ್ ಕುಮಾರಸ್ವಾಮಿ

Public TV
1 Min Read

– ಕುಟುಂಬ ರಾಜಕೀಯ ತಪ್ಪಾ ಅಂತ ಪ್ರಶ್ನೆ

ಮಂಡ್ಯ: ನಾಗಮಂಗಲ ಕ್ಷೇತ್ರಕ್ಕೆ ಮುಂದಿನ ಅಭ್ಯರ್ಥಿ ಸುರೇಶ್ ಗೌಡ ಎಂದು ಜೆಡಿಎಸ್ ಯುವಘಟಕದ ಅದ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ಸ್ಪಷ್ಟವಾಗಿ ಹೇಳುತ್ತೇನೆ, ನಮ್ಮ ಪಕ್ಷದ ತೀರ್ಮಾನ. ರಾಷ್ಟ್ರೀಯ ಅಧ್ಯಕ್ಷ ಕುಮಾರಣ್ಣ, ಕಾರ್ಯಕರ್ತರ ತೀರ್ಮಾನವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸುರೇಶ್ ಗೌಡ ಅವರನ್ನು ಆಯ್ಕೆ ಮಾಡಲಾಗುತ್ತದೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಸೃಷ್ಟಿ ಮಾಡಲು ನಾವು ಬಿಡುವುದಿಲ್ಲ ಎಂದು ಹೆಳುವ ಮೂಲಕ ಪರೋಕ್ಷವಾಗಿ ಶಿವರಾಮೇಗೌಡಗೆ ಟಾಂಗ್ ನೀಡಿದರು.

ಶಿವರಾಮೇಗೌಡ ಅವರು ಮುಂದಿನ ಬಾರಿ ಚುನಾವಣೆಗೆ ನಿಲ್ತೀನಿ ಎಂದಿದ್ದರು. ಶಿವರಾಮೇಗೌಡರ ನಡೆಯಿಂದ ಶಾಸಕ ಸುರೇಶ್‍ಗೌಡ ಬೇಸರ ವ್ತಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ವಿಚಾರವಾಗಿ ಇವರಿಬ್ಬರ ನಡುವೆ ವಾಕ್ಸಮರ ನಡೆದಿತ್ತು. ಈಗ ಸುರೇಶ್ ಗೌಡರೇ ಅಭ್ಯರ್ಥಿ ಎನ್ನುವ ಮೂಲಕ ರಾಜಕೀಯ ಮೇಲಾಟಕ್ಕೆ ನಿಖಿಲ್ ಬ್ರೇಕ್ ಹಾಕಿದ್ದಾರೆ.

ಇದೇ ವೇಳೆ ನಿಖಿಲ್ ರಾಜಕೀಯಕ್ಕೆ ರೀ ಎಂಟ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಶಾಸಕ ಆಗಬೇಕೆಂದು ಹುಚ್ಚು ಹಿಡಿಸಿಕೊಂಡಿದ್ರೇ ಯಾವತ್ತೋ ರಾಜಕಾರಣಕ್ಕೆ ನುಗ್ಗುತ್ತಿದೆ. ಎಷ್ಟೋ ಜನ ನಮ್ಮ ತಂದೆ ಹೆಸರಲ್ಲಿ ಶಾಸಕರಾಗಿದ್ದಾರೆ. ನಾನು 10 ವರ್ಷದ ಹಿಂದೆಯೇ ಶಾಸಕ ಆಗಿಬಿಡ್ತಿದ್ದೆನೇನೋ. ಸಿನಿಮಾ ರಂಗದಲ್ಲಿ ನನ್ನನ್ನ ನಾನು ತೊಡಗಿಸಿಕೊಂಡಿದ್ದೇನೆ. ನನಗೆ ಒಂದು ಪ್ಯಾಷನ್ ಇತ್ತು, ಅದನ್ನು ಮುಂದುವರಿಸುತ್ತೇನೆ ಎಂದರು.

ಪಕ್ಷ ಒಂದು ಜವಬ್ದಾರಿ ಕೊಟ್ಟಿದೆ, ಯುವ ಘಟಕದ ಸ್ಥಾನ ನೀಡಿದ್ದಾರೆ. ರಾಮನಗರ ಜಿಲ್ಲೆ, ಮಂಡ್ಯ ಜಿಲ್ಲೆ ಯುವಕರು ನಾನು ಬರಬೇಕೆಂದು ಬಯಸುತ್ತಾರೆ. ಇದು ಒಂದು ಉದ್ದೇಶ ಬಿಟ್ಟರೆ, ಅಲ್ಲಿ ನಿಲ್ಲಬೇಕು, ಇಲ್ಲಿ ನಿಲ್ಲಬೇಕೆಂಬ ಉದ್ದೇಶ ಇಲ್ಲ. ಮುಂದಿನ ದಿನಗಳಲ್ಲಿ ಜನ ತೀರ್ಮಾನ ಮಾಡ್ತಾರೆ. ಅದಕ್ಕೆ ನಾನು ಬದ್ಧನಾಗಿ ಕೆಲಸ ಮಾಡ್ತೇನೆ ಎಂದು ಹೇಳಿದರು.

ಕುಟುಂಬ ರಾಜಕಾರಣ ಕುರಿತು ಸ್ಪಷ್ಟನೆ ಕೊಟ್ಟ ನಿಖಿಲ್, ಯಡಿಯೂರಪ್ಪರ ಮಕ್ಕಳು ರಾಜಕಾರಣ ಮಾಡ್ತಿಲ್ವಾ, ಸಿದ್ದರಾಮಯ್ಯ ಮಕ್ಕಳು ರಾಜಕಾರಣದಲ್ಲಿಲ್ವ..?, ಅವರಿಗೂ ಪ್ರಶ್ನೆ ಮಾಡಬೇಕಾಗುತ್ತೆ. ನಾವು ಜನಗಳ ಜೊತೆ ಬೆರಿತೀವಿ, ಇರ್ತಿವಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *