ನವೀನ್‌ ವಿರುದ್ಧ ದೂರು ನೀಡಿದ್ಧ ವ್ಯಕ್ತಿಯಿಂದ ಈಗ ಗಲಭೆಕೋರರ ವಿರುದ್ಧ ದೂರು

Public TV
2 Min Read

ಬೆಂಗಳೂರು: ಆರೋಪಿ ನವೀನ್‌ ವಿರುದ್ಧ ದೂರು ನೀಡಿದ್ದ ವ್ಯಕ್ತಿಯೇ ಈಗ ಡಿಜೆ ಹಳ್ಳಿ ಠಾಣೆಯಲ್ಲಿ ಗಲಾಟೆ ಮಾಡಿದ ಕಿಡಿಗೇಡಿಗಳ ವಿರುದ್ಧ ದೂರು ನೀಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಿದ್ದಕ್ಕೆ ನವೀನ್‌ ವಿರುದ್ಧ ಫಿರ್ದೋಸ್‌ ಪಾಶಾ ನೀಡಿದ್ದರು. ಆದರೆ ಈಗ ತನ್ನ ಸ್ಕೂಟರ್‌ ಅನ್ನು ಕಿಡಿಗೇಡಿಗಳು ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿ ಡಿಜೆ ಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ವತ್ತಿನ ನಾಶ ಹಾಗೂ ನಷ್ಟ ಪ್ರತಿಬಂಧಕ ಅಧಿನಿಯಮ 1981 ಮತ್ತು ಐಪಿಸಿ ಸೆಕ್ಷನ್‌ 143, 145, 144, 147, 148, 149, 435 ಅಡಿ ಪ್ರಕರಣ ದಾಖಲಾಗಿದೆ. 75 ಸಾವಿರ ರೂ. ಮೌಲ್ಯ ನಷ್ಟವಾಗಿದೆ ಎಂದು ಫಿರ್ದೋಶ್‌ ಪಾಶಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ಕೇರಳ ಲಿಂಕ್

ದೂರಿನಲ್ಲಿ ಏನಿದೆ?
ಆಗಸ್ಟ್‌ 11 ರ ಸಂಜೆ 7:30ಕ್ಕೆ ನಾನು ನನ್ನ ಹೊಂಡಾ ಆಕ್ವೀವಾವನ್ನು ಡಿಜೆ ಹಳ್ಳಿ ಠಾಣೆಯಲ್ಲಿ ನಿಲ್ಲಿಸಿ ದೂರು ನೀಡಲು ಬಂದಿದ್ದೆ. ಈ ವೇಳೆ ಸುಮಾರು ಜನ ಠಾಣೆಯ ಒಳಗಡೆ ಬಂದು ಜಮಾಯಿಸಿದ್ದಾರೆ. ಈ ಸಂದರ್ಭದಲ್ಲಿ ನನಗೆ ನನ್ನ ಆಕ್ಟೀವಾವನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ರಾತ್ರಿ 9 ಗಂಟೆಗೆ ಜಮಾಯಿಸಿದ ಜನ ನನ್ನ ಸ್ಕೂಟರ್‌ ಅನ್ನು ಸುಟ್ಟು ಹಾಕಿದ್ದಾರೆ. ಗಲಭೆಯಾದ ದಿನದಂದು 144 ಸೆಕ್ಷನ್‌ ಜಾರಿಯಾದ ಕಾರಣ ನನಗೆ ಆ ದಿನವೇ ದೂರು ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಈ ದಿನ ದೂರು ನೀಡುತ್ತಿದ್ದೇನೆ. ನನ್ನ ಸ್ಕೂಟರನ್ನು ಸುಟ್ಟು ಹಾಕಿ ನಾಶ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡುತ್ತಿದ್ದೇನೆ.

ಎಫ್‌ಬಿ ಪೋಸ್ಟ್‌ ನೆಪ?
ನವೀನ್‌ ವಿರುದ್ಧವೇ ದೂರು ನೀಡಿದ ಫಿರ್ದೋಸ್ ಪಾಶಾ ಅವರೇ ಗಲಾಟೆ ಮಾಡಿದ ಕಿಡಿಗೇಡಿಗಳ ವಿರುದ್ಧ ದೂರು ನೀಡಿದ್ದು ಈ ಪ್ರಕರಣ ಮತ್ತಷ್ಟು ಟ್ವಿಸ್ಟ್‌ ಸಿಕ್ಕಿ ಹಲವು ಪ್ರಶ್ನೆಗಳು ಎದ್ದಿದೆ. ದೂರು ಕೊಟ್ಟವರು ಹಾಗೂ ಗಲಾಟೆ ಮಾಡಿದವರಿಗೂ ಸಂಬಂಧ ಇಲ್ಲವೇ? ನವೀನ್ ಪೋಸ್ಟ್‌ಗೂ ಗಲಾಟೆಗೂ ಸಂಬಂಧವೆ ಇಲ್ಲವೇ? ಫೇಸ್‌ಬುಕ್‌ ಪೋಸ್ಟ್‌ ಎಂಬುದು ನೆಪ ಮಾತ್ರವೇ ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *