ನಮ್ಮ ನೋವು ದೂರ ಮಾಡಲು ಮಗು ರೂಪದಲ್ಲಿ ಚಿರು ಬಂದಿದ್ದಾನೆ – ಅರ್ಜುನ್ ಸರ್ಜಾ

Public TV
2 Min Read

ಬೆಂಗಳೂರು: ನಮ್ಮ ನೋವನ್ನು ದೂರ ಮಾಡಲು ಚಿರು ಮಗು ರೂಪದಲ್ಲಿ ಹುಟ್ಟಿದ್ದಾನೆ ಎಂದು ಅರ್ಜುನ್ ಸರ್ಜಾ ಸಂತೋಷ ಹಂಚಿಕೊಂಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, 36 ವರ್ಷಗಳ ಹಿಂದೆ ಚಿರು ಹುಟ್ಟಿದಾಗ ಚೆನ್ನೈಯಿಂದ ಅವನ್ನು ನೋಡಲು ಓಡಿ ಬಂದಿದ್ದೆ. ಈಗ ಅವನ ಮಗುವನ್ನು ನೋಡಲು ಬರುತ್ತಿದ್ದೇನೆ. ನಮ್ಮ ಕುಟುಂಬಕ್ಕೆ ಹೇಳಲಾಗದಷ್ಟು ಸಂತೋಷವಾಗಿದೆ. ನಾಲ್ಕು ತಿಂಗಳ ನಂತರ ನಮ್ಮ ಕುಟುಂಬದಲ್ಲಿ ಸಂತೋಷ ಸಂಭ್ರಮ ಮನೆಮಾಡಿದೆ. ಚಿರು ವಾಪಸ್ ಬಂದಿದ್ದಾನೆ ಎಂಬ ತೃಪ್ತಿ ಇದೆ ಎಂದರು.

ಮಗು ನೋಡಲು ಚಿರುವಿನಂತೆ ಇದೆ. ಮೂಗು ಕಣ್ಣು ಎಲ್ಲವೂ ತಂದೆಯನ್ನು ಹೋಲುತ್ತದೆ. ಚಿರು ನಮ್ಮೊಂದಿಗೆ ಇದ್ದಿದ್ದರೆ ಎಷ್ಟು ಸಂತೋಷವನ್ನು ಪಡುತ್ತಿದ್ದ ಎಂದು ನೆನಪಿಸಿಕೊಂಡರೆ ತುಂಬಾ ಬೇಸರವಾಗುತ್ತೆ. ಈಗಾಗಲೇ ಜೋರಾಗಿ ಕಿರುಚಿಕೊಂಡು ಮಾಮ ಗಂಡು ಮಗು ಎಂದು ಹೇಳುತ್ತಿದ್ದ. ಇದ್ದೆಲ್ಲ ನೆನಪಿಸಿಕೊಂಡರೆ ಮನಸ್ಸಿಗೆ ತಂಬಾ ಕಷ್ಟವಾಗುತ್ತೆ. ಆದರೆ ಚಿರು ಕಳೆದುಕೊಂಡಿರುವ ದುಃಖವನ್ನು ಅವನ ಮಗು ಮುಖ ನೋಡಿ ಮರೆಯುತ್ತೇವೆ ಎಂದು ಹೇಳಿದರು.

ನಮ್ಮ ತಾಯಿ ಮುತ್ತಜ್ಜಿ ಆದರೆ ನಾನು ತಾತನಾಗಿದ್ದೇನೆ. ಗಂಡು ಮಗು ಹೆಣ್ಣು ಮಗು ಎನ್ನು ಭೇದ ಇಲ್ಲ. ಆದರೂ ಗಂಡು ಮಗು ಆಗಿರುವುದು ಚಿರು ಮತ್ತೆ ಹುಟ್ಟಿ ಬಂದಿದ್ದಾನೆ ಎನ್ನುವಷ್ಟು ಸಂತೋಷವನ್ನು ತಂದಿದೆ ಎಂದರು.

ದುಃಖದಲ್ಲಿದ್ದ ನಮ್ಮ ಕುಟುಂಬಕ್ಕೆ ಸಂತೋಷ ತರಲು ಮಗು ಕಾರಣನಾಗಿದ್ದಾನೆ. ಧ್ರುವ ಸರ್ಜಾ ಮುಖದಲ್ಲಿ ಕಳೆದ ನಾಲ್ಕು ತಿಂಗಳಿಂದ ನಗುವೇ ಇಲ್ಲದಂತಾಗಿತ್ತು. ಇದೀಗ ಚಿರು ಮಗುವನ್ನು ನೋಡಿ ಸಣ್ಣ ಕಿರು ನಗು ಕಾಣಿಸಿಕೊಂಡಿದೆ. ಕಷ್ಟ, ಸುಖ, ದುಃಖದಲ್ಲಿ ನಮ್ಮೊಂದಿಗೆ ಇದ್ದು ಸಹಕರಿಸಿದ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಅರ್ಜುನ್ ಸರ್ಜಾ ತಿಳಿಸಿದರು.

ಕೈಗೆ ಬಂದಿರುವ ಮಗನನ್ನು ಕಳೆದುಕೊಂಡಾಗ ಆಗುವ ದುಃಖ ಹೇಳಲಾಗದು. ಚಿರು ಕಳೆದುಕೊಂಡ ದಿನದಿಂದ ನಾನು ದೇವರ ಪೂಜೆ ಮಾಡುವುದು ಬಿಟ್ಟು ಬಿಟ್ಟಿದ್ದೇನೆ. ಚಿರು ನೆನಪು ಕಾಡುತ್ತಲೇ ಇರುತ್ತದೆ. ಆದರೆ ಚಿರು ಇಲ್ಲದ ಆ ನೋವನ್ನು ಕಡಿಮೆ ಮಾಡಲು ಚಿರು ರೂಪದಲ್ಲಿ ಅವನ ಮಗು ಇದ್ದಾನೆ ಎಂಬುದೇ ಸಂತೋಷವಾಗಿದೆ ಎಂದು ತಿಳಿಸಿದರು.

ಮಗು ಹುಟ್ಟಿರುವ ಸಂತೋಷವನ್ನು ನಾವು ಸಂಭ್ರಮಿಸಬೇಕು. ಮಗುವಿನ ಮುಖದ ನಗುವಿನಲ್ಲಿ ನಾವು ಚಿರುವನ್ನು ಕಾಣುತ್ತೇವೆ. ಚಿರು ಹುಟ್ಟು ಹಬ್ಬದ ದಿನದಂದು ಮಗು ಹುಟ್ಟುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಚಿರು ಮತ್ತು ಮೇಘನಾ ಎಂಗೆಜ್‍ಮ್ಮೆಂಟ್ ದಿನ ಮತ್ತು ನವರಾತ್ರಿ ಹಬ್ಬದ ದಿನವೇ ಮಗು ಹುಟ್ಟಿರುವುದು ತಂಬಾ ಸಂತೋಷವಾಗಿದೆ ಎಂದು ಸಂಭ್ರಮ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *