ನಮ್ಮ ಕುಟುಂಬಕ್ಕೂ ಬಳ್ಳಾರಿಗೂ ಅವಿನಾಭಾವ ಸಂಬಂಧ ಇದೆ: ಪುನೀತ್ ರಾಜ್‍ಕುಮಾರ್

Public TV
2 Min Read

– ಕೊರೊನಾ ನಿಯಮ ಪಾಲಿಸಿ ಸಿನಿಮಾ ನೋಡಿ

ಬಳ್ಳಾರಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ಏಪ್ರಿಲ್ 1ರಿಂದ ರಾಜ್ಯಾದ್ಯಂತ ತೆರೆಕಾಣಲಿದೆ. ಈ ಹಿನ್ನೆಲೆಯಲ್ಲಿ ಇಂದು ಪುನೀತ್ ರಾಜ್ ಕುಮಾರ್, ಡಾಲಿ ಧನಂಜಯ್ ಇಂದು ಬಳ್ಳಾರಿಗೆ ಆಗಮಿಸಿದ್ದಾರೆ. ಈ ವೇಳೆ ತಮ್ಮ ನೆಚ್ಚಿನ ನಟನನ್ನು ನೋಡಲು ಸಾವಿರಾರು ಜನ ಕಾತುರದಿಂದ ಕಾದಿದ್ದರು.

ಬೆಳಗ್ಗೆ 11 ಗಂಟೆಯ ಸುಮಾರಿಗೆ ಬಳ್ಳಾರಿಯ ಶಕ್ತಿ ದೇವತೆ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಆಗಮಿಸಿದ ಪವರ್ ಸ್ಟಾರ್ ಹಾಗೂ ಡಾಲಿ ಧನಂಜಯ್ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರ ಮನೆಗೆ ಆಗಮಿಸಿದರು. ಅಲ್ಲಿ ಪುನೀತ್ ಗೆ ಅದ್ಧೂರಿಯಾಗಿ ಸ್ವಾಗತ ನೀಡಲಾಯಿತು. ಕ್ರೇನ್ ಮೂಲಕ ಹೂ ಹಾಕಿ ಕೆಲ ಕಾಲ ಅವರ ಮನೆಯಲ್ಲಿ ವಿಶ್ರಾಂತಿ ಪಡೆದರು. ಅಲ್ಲಿಯೂ ಸಹ ಅಭಿಮಾನಿಗಳು ದೊಡ್ಡ ದಂಡೆ ನೆರೆದಿತ್ತು, ಬಳಿಕ ಎಂ.ಜಿ ಪೆಟ್ರೋಲ್ ಬಂಕ್ ಬಳಿ ಹಾಕಲಾಗಿದ್ದ ಸ್ಟೇಜ್ ನಲ್ಲಿ ಅಭಿಮಾನಿಗಳಿಗೆ ನಟರು ಕೈ ಬೀಸಿದ್ರು.

ಇದೇ ವೇಳೆಯಲ್ಲಿ ಮಾತನಾಡಿದ ಅಪ್ಪು, ನಮ್ಮ ತಂದೆ ರಾಜ್‍ಕುಮಾರ್ ಅವರ ಕಾಲದಿಂದಲೂ ಬಳ್ಳಾರಿಗೂ ನಮಗೂ ಅವಿನಾಭಾವ ಸಂಬಂಧ ಇದೆ. ಅಪ್ಪಾಜಿ ಹೆಸರಲ್ಲಿ ಬಳ್ಳಾರಿಯಲ್ಲಿ ಪಾರ್ಕ್ ಕೂಡಾ ಇದೆ. ಸಾಕಷ್ಟು ಸಮಾಜ ಸೇವೆ ಅಪ್ಪಾಜಿ ಹೆಸರಲ್ಲಿ ಇಲ್ಲಿನ ಜನರು ಮಾಡುತ್ತಿದ್ದಾರೆ. ನನ್ನ ಅರಸು, ಪವರ್ ಸಿನಿಮಾ ಆಡಿಯೋವನ್ನು ಬಳ್ಳಾರಿಯಲ್ಲಿ ರಿಲೀಸ್ ಆಗಿದೆ. ದೊಡ್ಡಮನೆ ಹುಡುಗ ಸೇರಿದಂತೆ ಹಲವಾರು ಚಿತ್ರಗಳಿಗೆ ಬಳ್ಳಾರಿಯಲ್ಲಿ ಶೂಟಿಂಗ್ ನಡೆದಿದೆ ಎಂದರು.

ಯುವರತ್ನ ಚಿತ್ರ ಏಪ್ರಿಲ್ ಒಂದ ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಕಲಬುರಗಿ, ಹುಬ್ಬಳ್ಳಿ, ಬೆಳಗಾವಿಯಲ್ಲಿ ಪ್ರಚಾರದ ವೇಳೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇಂದು ಬಳ್ಳಾರಿಯಲ್ಲಿಯೂ ಸಹ ಉತ್ತಮ ಸ್ಪಂದನೆ ದೊರೆತಿದೆ. ಜನ ನನ್ನನ್ನು ತುಂಬಾ ಪ್ರೀತಿ ಮಾಡುತ್ತಾರೆ. ದುರ್ಗಮ್ಮ ದೇವಸ್ಥಾನ ದರ್ಶನ ಪಡೆದಿರುವೆ. ನನಗೂ ನನ್ನ ಸಿನಿಮಾಕ್ಕೂ ಆಶೀರ್ವಾದ ಮಾಡಿದ್ದಾರೆ. ಬಳ್ಳಾರಿ ಜನರು ನನ್ನ ಮತ್ತು ನಮ್ಮ ಕುಟುಂಬವನ್ನು ಹೆಚ್ಚು ಪ್ರೀತಿ ಮಾಡುತ್ತಾರೆಂದರು. ಚಿತ್ರಮಂದಿರಕ್ಕೆ ಬಂದು ಸರ್ಕಾರ ಪ್ರಕಟಿಸಿರುವ ಕೊರೊನಾ ನಿಯಮ ಪಾಲಿಸಿ, ಸಿನಿಮಾ ನೋಡಿ ಎಂದು ಇದೇ ವೇಳೆ ಅಪ್ಪು ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *