ನಮ್ಮಲ್ಲಿ ಯಾವುದೇ ಸಮಸ್ಯೆಯಿಲ್ಲ – ಮಾಧ್ಯಮಗಳ ಮೇಲೆಯೇ ಗೂಬೆ ಕೂರಿಸಿದ ಕೈ ನಾಯಕರು

Public TV
3 Min Read

ಬೆಂಗಳೂರು: ಬಹಿರಂಗವಾಗಿ ಅಸಮಾಧಾನವನ್ನು ನಾಯಕರು ಹೊರ ಹಾಕಿದ ಬಳಿಕವೂ ಕೈ ನಾಯಕರು ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಭಿನ್ನಮತವೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಹೇಳುವ ಮೂಲಕ ಬಿಕ್ಕಟ್ಟು ಶಮನ ಮಾಡಲು ಮುಂದಾಗಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಡಬ್ಲ್ಯುಸಿ ಸಭೆಯಲ್ಲಿ ನೀಡಿದ್ದಾರೆ ಎನ್ನಲಾದ ಹೇಳಿಕೆಯ ಹಿನ್ನೆಲೆಯಲ್ಲಿ ಕಪಿಲ್ ಸಿಬಲ್ ಮನವೊಲಿಕೆಗಾಗಿ ಇದೀಗ ಕಾಂಗ್ರೆಸ್ ನಾಯಕರು ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, ಕಪಿಲ್ ಸಿಬಲ್ ಅವರೇ ಮಾಧ್ಯಮಗಳ ತಪ್ಪು ಮಾಹಿತಿ ಎಲ್ಲರಿಗೂ ತಿಳಿದ ವಾಸ್ತವ. ಅದರಲ್ಲೂ ಮುಖ್ಯವಾಗಿ ಬ್ರೇಕಿಂಗ್ ನ್ಯೂಸ್ ಕೊಡುವ ಹಸಿವಿದ್ದಾಗ ಮಾಧ್ಯಮಗಳು ಇಂತಹ ತಪ್ಪು ಮಾಹಿತಿಗಳನ್ನು ಬಿತ್ತರಿಸುತ್ತವೆ ಎಂದು ಹೇಳಿದ್ದಾರೆ.

ಮಾಧ್ಯಮಗಳ ವಿರುದ್ಧ ಕೈ ನಾಯಕರು ಟೀಕೆ ಮಾಡುವ ಮೊದಲೇ ಕಾಂಗ್ರೆಸ್ ಸಿಡಬ್ಲ್ಯೂಸಿ ಸಭೆಯ ಮಾಹಿತಿ ಸೋರಿಕೆಯಾಗಿದೆ ಎಂದು ಟ್ವೀಟ್ ಮಾಡಿ ನಟಿ, ಮಾಜಿ ಸಂಸದೆ ರಮ್ಯಾ ಕಿರಿಕಾರಿದ್ದರು. ಬಂಡಾಯಕ್ಕೆ ಕಾರಣವಾದ 23 ಮಂದಿ ಪತ್ರ ಬರೆದು ಅದನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ. ಅಲ್ಲದೆ ಕಾಂಗ್ರೆಸ್ ಸಭೆಯ ಇಂಚಿಂಚು ಮಾಹಿತಿಗಳನ್ನು ನೀಡುವ ಮೂಲಕ ಎಲ್ಲಾ ವಿಚಾರಗಳನ್ನು ಸೋರಿಕೆ ಮಾಡುತ್ತಿದ್ದಾರೆ ದೂರಿದ್ದರು.

ರಾಹುಲ್ ಗಾಂಧಿ ವಿರುದ್ಧ ಗರಂ ಆಗಿ ಕಪಿಲ್ ಸಿಬಲ್ ಮಾಡಿದ್ದ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದ ರಮ್ಯಾ, ನನ್ನ ಪ್ರಕಾರ ರಾಹುಲ್ ಜೀ ತಪ್ಪು ಮಾಡಿದ್ದಾರೆ. ಅವರು ಬಿಜೆಪಿ ಮತ್ತು ಮಾಧ್ಯಮಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಬೇಕಿತ್ತು ಎಂದು ಬರೆದು ತಿರುಗೇಟು ನೀಡಿದ್ದರು.

ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಯಾರಿಗೆ ನೀಡಬೇಕು ಎಂಬ ಮೂಲ ವಿಷಯವನ್ನು ಇಟ್ಟುಕೊಂಡು ಇಂದು ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆದಿತ್ತು. ಈ ಸಭೆಯಲ್ಲಿ 23 ನಾಯಕರು ಬರೆದ ಪತ್ರದ ಬಗ್ಗೆ ಈಗ ಭಾರೀ ಚರ್ಚೆ ನಡೆದಿತ್ತು. ಈ ವೇಳೆ ಪ್ರಮುಖರ ನಾಯಕರು ಪತ್ರ ಬರೆದ ವಿಚಾರಕ್ಕೆ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದರು. ಕೋವಿಡ್ 19, ಮಧ್ಯಪ್ರದೇಶ, ರಾಜಸ್ಥಾನ ಬಿಕ್ಕಟ್ಟಿನ ಸಮಯದಲ್ಲಿ ಹಿರಿಯ ನಾಯಕರಾದವರು ಈ ರೀತಿ ಪತ್ರ ಬರೆಯುವುದು ಸರಿಯಲ್ಲ. ಸೋನಿಯಗಾಂಧಿ ಅವರಿಗೆ ಆರೋಗ್ಯ ಸಮಸ್ಯೆ ಇದೆ. ಅವರು ಆಸ್ಪತ್ರೆ ದಾಖಲಾದ ವೇಳೆ ಪತ್ರ ಬರೆಯುವುದು ಎಷ್ಟು ಸರಿ? ಕಾಂಗ್ರೆಸ್ ಕೆಲ ಹಿರಿಯ ನಾಯಕರು ಬಿಜೆಪಿ ಜೊತೆ ಸೇರಿಕೊಂಡು ಈಗ ನಮ್ಮ ವಿರುದ್ಧವೇ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು ಮೂಲಗಳನ್ನು ಆಧಾರಿಸಿ ಮಾಧ್ಯಮಗಳಲ್ಲಿ ವರದಿ ಮಾಡಿತ್ತು.

ಮಾಧ್ಯಮಗಳ ವರದಿಗೆ ಪೂರಕ ಎಂಬಂತೆ ರಾಹುಲ್ ಮಾತಿಗೆ ಕಿಡಿಕಾರಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್, ನಾವು ಬಿಜೆಪಿಯೊಂದಿಗೆ ಒಡನಾಟ ಹೊಂದಿದ್ದೇವೆ ಎಂದು ರಾಹುಲ್ ಹೇಳುತ್ತಾರೆ. ಆದರೆ ನಾವು ಕಳೆದ 30 ವರ್ಷಗಳಲ್ಲಿ ಯಾವುದೇ ವಿಷಯದ ಬಗ್ಗೆ ಬಿಜೆಪಿ ಪರವಾಗಿ ಹೇಳಿಕೆ ನೀಡಿಲ್ಲ. ರಾಜಸ್ಥಾನ ಹೈಕೋರ್ಟ್‍ನಲ್ಲಿ ಕಾಂಗ್ರೆಸ್ ಪಕ್ಷವನ್ನು ಸಮರ್ಥಿಸಿಕೊಳ್ಳುವಲ್ಲಿ ಯಶಸ್ವಿಯಾದೆ. ಬಿಜೆಪಿ ಸರ್ಕಾರವನ್ನು ಉರುಳಿಸಿ ಮಣಿಪುರದಲ್ಲಿ ಹಾಲಿ ಪಕ್ಷವನ್ನು ತರುವಲ್ಲಿ ನೆರವಾದೆ. ಆದರೂ ನಾವು ಬಿಜೆಪಿಯೊಂದಿಗೆ ಒಡನಾಟ ಹೊಂದಿದ್ದೇವೆ ಎಂದು ಬರೆದು ಖರವಾಗಿ ಟ್ವೀಟ್ ಮಾಡಿದ್ದರು.

ಸದ್ಯ ಕಪಿಲ್ ಸಿಬಲ್ ಅವರು ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದು, ರಾಹುಲ್ ಗಾಂಧಿ ನನಗೆ ಕರೆ ಮಾಡಿ ನಿಮ್ಮನ್ನು ಉದ್ದೇಶಿಸಿ ಹೇಳಿಲ್ಲ ಎಂದು ಹೇಳಿದರು. ಹೀಗಾಗಿ ನನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ತಿಳಿಸಿ ಹಳೆಯ ಟ್ವೀಟ್ ಡಿಲೀಟ್ ಮಾಡಿದ್ದರು. ಒಂದು ಸಭೆಯಲ್ಲಿ ನಾಯಕತ್ವದ ಬಗ್ಗೆ ಭಾರೀ ಚರ್ಚೆ ನಡೆದರೂ ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ಎಲ್ಲವೂ ಸರಿಯಿದೆ. ಗೊಂದಲ ಎಲ್ಲವೂ ಮಾಧ್ಯಮಗಳ ಸೃಷ್ಟಿ ಎಂದು ಕೈ ನಾಯಕರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಗೂಬೆ ಕೂರಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *