ಹಾಸನ: ನಾನು ಮೊದಲಿಂದಲೂ ಹೋಂ ಐಸೋಲೇಶನ್ ರದ್ದುಗೊಳಿಸಬೇಕೆಂದು ಹೇಳುತ್ತಲಿದ್ದೇನೆ. ಆದರೆ ನನ್ನ ಮಾತನ್ನು ಕೇಳುವುದಿಲ್ಲ. ನನ್ನ 20 ವರ್ಷ ಅನುಭವದ ಮಾತನ್ನು ಹೇಳುತ್ತಿದ್ದೇನೆ. ಅದಕ್ಕೆ ಬೆಲೆ ಕೊಡದಿದ್ದರೆ ಸಭೆಯನ್ನು ನೀವೇ ಮುಂದುವರಿಸಿಕೊಂಡು ಹೋಗಿ ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ವೇದಿಕೆಯ ಮೇಲಿದ್ದ ಸಚಿವದ್ವಯರ ಮೇಲೆ ಕೆಂಡಾಮಂಡಲವಾದರು.
ಹಾಸನದ ಜಿಲ್ಲಾ ಪಂಚಾಯಿತಿಯ ಹೊಯ್ಸಳ ಸಭಾಂಗಣದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯನವರಿಗೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಸಲಹೆ ನೀಡಲು ಮುಂದಾದರು. ಆದರೆ ಇದನ್ನ ಕೇಳುವಂತಹ ಪರಿಸ್ಥಿತಿಯಲ್ಲಿ ವೇದಿಕೆ ಮೇಲಿದ್ದ ಸಚಿವದ್ವಯರು ಹಾಗೂ ಸಂಸದರು ಸೇರಿದಂತೆ ಜಿಲ್ಲಾಡಳಿತ ಸರಿಯಾಗಿ ಗಮನಹರಿಸದ ಹಿನ್ನೆಲೆಯಲ್ಲಿ ಶಾಸಕ ಶಿವಲಿಂಗೇಗೌಡ ಮಾತಿನ ಮೂಲಕವೇ ಏರುಧ್ವನಿಯಲ್ಲಿ ಕೂಗಾಡಿದರು. ಇದನ್ನೂ ಓದಿ: ಸಚಿವ ಸುಧಾಕರ್ ಎದುರೇ ಪತ್ರ ಹರಿದು ಹಾಕಿ ರೇವಣ್ಣ ಆಕ್ರೋಶ
ನನ್ನ ಹೆಂಡತಿ ಕೋವಿಡ್-19 ರ ಸೋಂಕಿಗೆ ಒಳಗಾಗಿದ್ದರು. ಇಂತಹ ಸಮಯದಲ್ಲಿ ನಾನು ಪ್ರಥಮ ಸಂಪರ್ಕದಲ್ಲಿದ್ದ ಕಾರಣಕ್ಕಾಗಿ ನನಗೂ ಕೂಡ ನಿರ್ಬಂಧ ಹೇರಿ ಸುಮಾರು ಹದಿನಾಲ್ಕು ದಿನಗಳ ಕಾಲ ಹೋಗದಂತೆ ತಂತಿ ಬೆಲೆ ಹಾಕುವ ರೀತಿ ನನ್ನ ಮನೆಯ ಸುತ್ತಲೂ ಹಾಕಿದ್ರು. ಆದರೆ ಈ ಬಾರಿ ಆ ರೀತಿಯ ಕಠಿಣ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುತ್ತಿಲ್ಲ. ಕಳೆದ ಬಾರಿ ಸೋಂಕು ತಗಲಿದ ವ್ಯಕ್ತಿಗೆ ತಹಶೀಲ್ದಾರ್ ಆರೋಪಿಯಂತೆ ಹಿಡಿದು ಕೈಗೆ ಸೀಲ್ ಹಾಕುತ್ತಿದ್ದರು. ಈ ಬಾರಿ ಆ ರೀತಿ ಮಾಡುತ್ತಿಲ್ಲ ಎಂದು ಕೆಂಡಾಮಂಡಲವಾಗಿ ಸಭೆಯಲ್ಲಿ ಕೆಲಕಾಲ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.