ನನ್ನ ಬಗ್ಗೆ ಮಾತಾಡಿದ್ರೆ ಸುಮ್ನೆ ಇರಲ್ಲ: ಪ್ರಶಾಂತ್ ಸಂಬರಗಿಗೆ ಸಂಜನಾ ಎಚ್ಚರಿಕೆ

Public TV
3 Min Read

– 50 ಸಿನಿಮಾ ಮಾಡಿದ್ದೇನೆ, ಪಂಚ ಭಾಷಾ ತಾರೆ ನಾನು
– ರಾಹುಲ್ ನನ್ನ ಅಣ್ಣನಿದ್ದಂತೆ

ಬೆಂಗಳೂರು: ನನ್ನ ಬಗ್ಗೆ ಇನ್ನೊಮ್ಮೆ ಮಾತಾಡಿದ್ರೆ ನಾನು ಸುಮ್ಮನೆ ಇರಲ್ಲ ಎಂದು ಪ್ರಶಾಂತ್ ಸಂಬರಗಿಗೆ ನಟಿ ಸಂಜನಾ ಗಲ್ರಾನಿ ಎಚ್ಚರಿಕೆ ನೀಡಿದ್ದಾರೆ.

ಈ ಕರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನನ್ನು ವಿಚಾರಣೆಗೆ ಕರೆದಿಲ್ಲ, ನಾನು ಬೆಂಗಳೂರಲ್ಲೇ ಇದ್ದೇನೆ. ಇದು ತುಂಬಾ ದೊಡ್ಡ ವಿಷಯ, ಚಿತ್ರರಂಗದ ಹೆಸರನ್ನು ಮಣ್ಣಲ್ಲಿ ಹಾಕಲಾಗುತ್ತಿದೆ. ಚಿತ್ರರಂಗವನ್ನು ಇಷ್ಟು ಕಷ್ಟಪಟ್ಟು, ಪ್ರೀತಿಯಿಂದ ದೇವಸ್ಥಾನದ ರೀತಿ ದೊಡ್ಡದಾಗಿ ಕಟ್ಟಲಾಗಿದೆ. ಕನ್ನಡ ಚಿತ್ರರಂಗ ಡ್ರಗ್ಸ್ ನಲ್ಲಿದೆ ಎಂದು ಹೇಳಿ ಕನ್ನಡ ಚಿತ್ರರಂಗದ ಹೆಸರನ್ನು ಹಾಳು ಮಾಡಬೇಡಿ. ಕೆಲವರು ಆ ರೀತಿ ಇದ್ದರೆ ಎಲ್ಲರೂ ಅದೇ ರೀತಿ ಎಂದು ಹೇಳಬೇಡಿ, ಊಹಾಪೋಹ ಮಾಡಬೇಡಿ. ಇದರು ಇಡೀ ಕರ್ನಾಟಕಕ್ಕೇ ಬೇಜಾರಾಗುವ ಸಂಗತಿ ಎಂದು ಹೇಳಿದ್ದಾರೆ.

ರಾಹುಲ್ ನನ್ನ ಅಣ್ಣ ಇದ್ದಂತೆ, ಅವರಿಗೂ ನನಗೂ ಯಾವುದೇ ನಂಟಿಲ್ಲ. ನನಗೆ ಒಳ್ಳೆಯ ರೀತಿಯ ಸಿನಿಮಾ ಮಾಡಿ, ಆರಾಮಾಗಿರುವುದು ಇಷ್ಟ. ಯಾರು ಏನು ಮಾಡುತ್ತಾರೆ ಎಂಬುದು ನನಗೆ ಸಂಬಂಧವಿಲ್ಲ. ರಾಹುಲ್ ರಿಯಲ್ ಎಸ್ಟೇಟ್‍ಲ್ಲಿ ಕೆಲಸ ಮಾಡುತ್ತಿದ್ದರು. ಒಳ್ಳೆಯ ಹುಡುಗ, ಪಾರ್ಟಿಗೆಲ್ಲ ಹೋಗುತ್ತಿದ್ದರು. ಯಾವುದೇ ತಪ್ಪನ್ನು ರಾಹುಲ್ ಬಳಿ ನಾನು ನೋಡಿಲ್ಲ. ಅವರು ತುಂಬಾ ಜಾಲಿ ಮನುಷ್ಯ ಹೀಗಾಗಿ ನೋಟೆಡ್ ಆಗಿದ್ದಾರೆ. ಹೀಗಾಗಿ ವಿಚಾರಣೆಗೆ ಕರೆದಿದ್ದಾರೆ. ಇದನ್ನು ಬಿಟ್ಟು ಬೇರೆನೂ ಇಲ್ಲ.

ಪಾರ್ಟಿಗೆ ಹೋಗುತ್ತಿದ್ದರು. ಆದರೆ ಯಾವುದೇ ತಪ್ಪು ಕೆಲಸ ಮಾಡುವವರಲ್ಲ. ನಾನು ಅವರ ತಂದೆಗೆ ಕರೆ ಮಾಡಿ ಕೇಳಿದೆ, ನಿನ್ನೆಯೇ ಕರೆದುಕೊಂಡು ಹೋದರು ಎಂದು ಹೇಳಿದರು. ಕೊರೊನಾ ಬಂದಾಗಿಂದ ಯಾವುದೇ ಪಾರ್ಟಿ ನಡೆಯುತ್ತಿಲ್ಲ. ಡ್ರಗ್ಸ್ ನ್ನು ನಾನು ಯಾವುದೇ ಪಾರ್ಟಿಯಲ್ಲಿ ನೋಡಿಲ್ಲ. ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಬೀದಿಯಲ್ಲಿ ನಾಯಿ ಬೊಗಳುತ್ತೆ ಎಂದು ನಾನು ಬಟ್ಟೆ ಬಿಚ್ಚಿ ಬೊಗಳಲು ಆಗುವುದಿಲ್ಲ. ಆತ, ನಿರ್ಮಾಪಕ, ನಿರ್ದೇಶಕ, ಹೀರೋ ಅಲ್ಲ. ಫಿಲಂ ಇಂಡಸ್ಟ್ರಿಯಲ್ಲೇ ಇಲ್ಲ. ಆದರೆ ಹೀರೋಯಿನ್‍ಗಳನ್ನು ಟಾರ್ಗೆಟ್ ಮಾಡುತ್ತಿದ್ದಾನೆ. ನನಗೆ ಮಾಡಲು ತುಂಬಾ ಕೆಲಸಗಳಿವೆ ಕೋರ್ಟ್‍ಲ್ಲಿ ಕೇಸ್ ಹಾಕಿದರೆ ಓಡಾಡಲು ಆಗುವುದಿಲ್ಲ. ಇವರೆಲ್ಲ ಬೆಳೆದಿಲ್ಲ, ಬೇರೆಯವರನ್ನು ಬೆಳೆಯಲು ಬಿಡುತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಅಲ್ಲದೆ ಪ್ರಶಾಂತ್ ಸಂಬರಗಿಯವರನ್ನು ಪ್ರಾಣಿಗೆ ಹೋಲಿಸಿದ ಅವರು, ನಾನು ಒಂದೇ ಸಿನಿಮಾ ಮಾಡಿದ್ದೇನೆ ಎಂದು ಹೇಳುತ್ತಾರೆ. ಆದರೆ ನಾನು 50 ಸಿನಿಮಾಗಳನ್ನು ಮಾಡಿದ್ದಾರೆ. ಆ ಹಂದಿ ವಿಕಿಪಿಡಿಯಾದಲ್ಲಿ ಹೋಗಿ ನೋಡಲಿ ಎಂದು ಹೇಳಿದ್ದಾರೆ. 50 ಪ್ರಾಜೆಕ್ಟ್ ಮಾಡಿದ್ದೇನೆ, ಪಂಚ ಭಾಷೆ ತಾರೆ ನಾನು. ಐಶ್ವರ್ಯ ರೈ ಅಲ್ಲದಿದ್ದರೂ ನಾನು ಸಂಜನಾ ಗಲ್ರಾಣಿ, ನನಗೆ ಸ್ವಾಭಿಮಾನ ಇದೆ. ಅಲ್ಲದೆ ನನ್ನದೇ ಸ್ವಂತ ಫ್ಯಾನ್ ಫಾಲೋವರ್ಸ್ ಇದ್ದಾರೆ. ಬೆಂಜ್, ಆಡಿ ಕಾರ್ ಬಗ್ಗೆ ಮಾತನಾಡುತ್ತಾರೆ. ನಾನು 16 ವರ್ಷ ಸಿನಿಮಾ ತಂಡದಲ್ಲಿದ್ದೇನೆ, ಸತ್ತ ಮೇಲೆ ಬೆಂಜ್ ಕಾರ್ ತೆಗೆದುಕೊಳ್ಳುವುದಾ, ಇವರಿಗೆ ಬೆಳೆಯಲು ಸಾಧ್ಯವಿಲ್ಲ, ಬೆಳೆದವರನ್ನು ಕಾಲೆಳೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ನನಗೆ ಕಾನೂನಾತ್ಮಕವಾಗಿ ಹೋರಾಡಲು ಸಮಯವಿಲ್ಲ. ಆದರೆ ಇದೇ ಕೊನೆ ನನ್ನ ಬಗ್ಗೆ ಇನ್ನೊಂದು ಬಾರಿ ಈ ರೀತಿ ಮಾತನಾಡಿದರೂ ಸುಮ್ಮನಿರಲ್ಲ. ಇಂದ್ರಜಿತ್ ಅವರು ಸಮಾಜವನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ನಾವು 10, 20, 30 ಲಕ್ಷ ಸಂಭಾವನೆ ಪಡೆಯುತ್ತೇವೆ. ಒಂದು ಅಂಗಡಿಯ ಓಪನ್ ಮಾಡಿ ರಿಬ್ಬನ್ ಕಟ್ ಮಾಡಿದರೂ 2 ಲಕ್ಷ ರೂ. ಸಂಭಾವನೆ ಪಡೆಯುತ್ತೇವೆ. ಕಷ್ಟ ಪಟ್ಟು ಕೆಲಸ ಮಾಡುತ್ತೇವೆ, ಹೆಸರು ಮಾಡುತ್ತೇವೆ ಅದಕ್ಕೆ ತಕ್ಕಂತೆ ಸಂಭಾವನೆಯನ್ನೂ ಪಡೆಯುತ್ತೇವೆ ಎಂದು ಖಾರವಾಗಿ ಉತ್ತರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *