ನನ್ನ ಖಾತೆಯನ್ನ ಅಸಮಾಧಾನಿತರಿಗೆ ಕೊಡಿ: ಆನಂದ್ ಸಿಂಗ್

Public TV
1 Min Read

– ಸಚಿವ ಸ್ಥಾನ ಅನ್ನೋದು ತುಂಬಾ ಸಣ್ಣದು

ಬಳ್ಳಾರಿ: ನನ್ನ ಖಾತೆಯನ್ನ ಬೇರೆ ಅಸಮಾಧಾನಿತರಿಗೆ ಕೊಡಲು ಯಾವುದೇ ಅಭ್ಯಂತರವಿಲ್ಲ. ಜೊತೆಯಾಗಿ ಸೇರಿ ಸರ್ಕಾರ ನಡೆಸಿಕೊಂಡು ಹೋಗೋಣ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ನನ್ನ ಕ್ಷೇತ್ರದ ಜನರು ನಾನು ಯಾವುದೇ ಪಕ್ಷಕ್ಕೆ ಹೋದರೂ ನನ್ನನ್ನ ಆಯ್ಕೆ ಮಾಡ್ತಾರೆ ಅನ್ನೋ ನಂಬಿಕೆ. ಕ್ಷೇತ್ರದ ಜನರ ಮುಂದೆ ಸಚಿವ ಸ್ಥಾನ ಸಣ್ಣದು. ಸರ್ಕಾರ ನಮ್ಮದೇ ಇದ್ದಾಗ ಸಚಿವರಾಗದಿದ್ರೂ ಕ್ಷೇತ್ರದ ಕೆಲಸಗಳನ್ನ ಮಾಡಿಕೊಳ್ಳಬಹುದು. ನಮ್ಮ ಕ್ಷೇತ್ರದ ನಿರೀಕ್ಷೆಗಳನ್ನು ಸರ್ಕಾರ ಪೂರೈಸುತ್ತೆ ಅನ್ನೋ ನಂಬಿಕೆ ಮತ್ತು ವಿಶ್ವಾಸ ಇದೆ. ಅವಶ್ಯವಿದ್ರೆ ನನಗೆ ಕೊಡಲು ಇಚ್ಛಿಸಿರುವ ಖಾತೆಯನ್ನ ಬೇರಯವರಿಗೆ ನೀಡಿ. ಅಸಮಾಧಾನ ಮತ್ತು ಸಿಎಂ ವಿರುದ್ಧ ಮಾತನಾಡುವ ವಿಚಾರದಿಂದ ನಾನು ದೂರವಿದ್ದೇನೆ ಎಂದು ಆನಂದ್ ಸಿಂಗ್ ಹೇಳಿದರು.

ಸಚಿವ ಸ್ಥಾನದ ನಿರೀಕ್ಷೆ ಇಟ್ಟುಕೊಂಡು ಬಿಜೆಪಿ ಸೇರ್ಪಡೆಯಾಗಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಕೆಲ ಬೇಡಿಕೆಗಳನ್ನ ಇರಿಸಿದ್ದೆ. ವಿಜಯನಗರ ಪ್ರತ್ಯೇಕ ಜಿಲ್ಲೆ ರಚಿಸಬೇಕು ಮತ್ತು ಏತ ನೀರಾವರಿ ಯೋಜನೆ ಆಗಬೇಕೆಂದು ಮನವಿ ಮಾಡಿಕೊಂಡಿದ್ದೆ. ಅದೇ ಮನವಿಗಳನ್ನ ಯಡಿಯೂರಪ್ಪನವರ ಮುಂದಿರಿಸಿ ಬಿಜೆಪಿ ಸೇರಿದೆ. ಇದೀಗ ಸಿಎಂ ಎರಡೂ ಮನವಿಗಳನ್ನ ಈಡೇರಿಸಿದ್ದಾರೆ. ನನ್ನ ಬೇಡಿಕೆ ಈಡೇರಿಸಿದ ಮೇಲೆಯೋ ಬೋನಸ್ ರೂಪದಲ್ಲಿ ಸಚಿವ ಸ್ಥಾನ ನೀಡಿದರು. ಹಾಗಾಗಿ ನನಗೆ ಯಾವುದೇ ಅಸಮಾಧಾನಗಳಿಲ್ಲ ಎಂದರು.

ಮಂತ್ರಿ ಸ್ಥಾನ ನೀಡಿರೋದು ನನಗೆ ಬೋನಸ್. ಅದರಲ್ಲಿ ಚಿಕ್ಕದು ಮತ್ತೊಂದು ಅಂತಿಲ್ಲ. ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಹೋಗುತ್ತೇನೆ. ಮುಖ್ಯಮಂತ್ರಿಗಳು ಖಾತೆಗಳ ಮರು ಹಂಚಿಕೆ ವಿಷಯದಲ್ಲಿ ಸಾಕಷ್ಟು ಒತ್ತಡದಲ್ಲಿದ್ದಾರೆ. ಖಾತೆ ಹಂಚಿಕೆ ಗೊಂದಲ ಸಹ ನಾಲ್ಕೈದು ದಿನಗಳ ಅಂತ್ಯವಾಗಲಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *