ನಗರಸಭೆ ಆಯುಕ್ತರೇ ಎದುರು ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಗಲಾಟೆ

Public TV
1 Min Read

ಹಾಸನ: ನಗರಸಭೆ ಆಯುಕ್ತರ ಎದುರೇ ಬಿಜೆಪಿ ಕಾರ್ಯಕರ್ತ ಮತ್ತು ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಬೆಂಬಲಿಗರ ನಡುವೆ ವಾಕ್ಸಮರ ನಡೆದಿದೆ. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆಯ ನಗರಸಭೆಯಲ್ಲಿ ನಡೆದಿದೆ.

ಅರಸೀಕೆರೆ ನಗರಸಭೆಯಲ್ಲಿ ಇಂದು ಶಾಸಕ ಶಿವಲಿಂಗೇಗೌಡ ಅಧ್ಯಕ್ಷತೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ವಿಚಾರವಾಗಿ ಸಭೆ ನಡೆದಿತ್ತು. ಈ ವೇಳೆ ಬಿಜೆಪಿ ಕಾರ್ಯಕರ್ತ ರಘು ಸಭೆಗೆ ಹಾಜರಾಗಿದ್ದರು. ನೀನು ಸದಸ್ಯನಲ್ಲ ಹೀಗಾಗಿ ಸಭೆಗೆ ಹಾಜರಾಗುವಂತಿಲ್ಲ ಎಂದು ರಘು ಅವರನ್ನು ಶಾಸಕ ಶಿವಲಿಂಗೇಗೌಡ ಆಚೆಗೆ ಕಳುಹಿಸಿದ್ದರು.

ಸಭೆ ನಂತರ ಈ ಬಗ್ಗೆ ಆಯುಕ್ತರಾದ ಕಾಂತರಾಜ್ ಬಳಿ ಪ್ರಶ್ನಿಸಿದ್ದ ಬಿಜೆಪಿ ಕಾರ್ಯಕರ್ತ ರಘು, ಸಭೆಯನ್ನು ಬಾಗಿಲು ಹಾಕಿಕೊಂಡು ಮಾಡುವ ಉದ್ದೇಶ ಏನಿತ್ತು? ಇಲ್ಲಿ ಕೆಲವರು ಸದಸ್ಯರಲ್ಲದವರು ಕುಳಿತಿದ್ದರು ನನ್ನನ್ನು ಮಾತ್ರ ಹೊರಗೆ ಕಳುಹಿಸಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ರು. ಈ ವೇಳೆ ಅಲ್ಲಿಯೇ ಇದ್ದ ಶಾಸಕರ ಬೆಂಬಲಿಗರು ಬಿಜೆಪಿ ಕಾರ್ಯಕರ್ತ ರಘು ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆಯುಕ್ತರ ಎದುರೇ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ, ಪರಸ್ಪರ ವಾಗ್ದಾಳಿ ನಡೆಸಿದ್ದಾರೆ. ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *