ನಕ್ಸಲರಿಂದ ಯೋಧನ ಫೋಟೋ ರಿಲೀಸ್ – ಮಾತುಕತೆಗೆ ಮಧ್ಯವರ್ತಿ ನೇಮಿಸುವಂತೆ ಪಟ್ಟು

Public TV
1 Min Read

ರಾಯ್‍ಪುರ: ಕಳೆದ ವಾರ ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ದಾಳಿಗೆ 22 ಯೋಧರು ಹುತಾತ್ಮರಾಗಿ, ಹಲವು ಯೋಧರು ನಾಪತ್ತೆಯಾಗಿದ್ದರು. ಇದೀಗ ನಾಪತ್ತೆಯಾಗಿದ್ದ ಕೋಬ್ರಾ ಯುನಿಟ್‍ನ ಯೋಧರೊಬ್ಬರ ಫೋಟೋ ಒಂದನ್ನು ನಕ್ಸಲ್ ಸಂಘಟನೆ ಬಿಡುಗಡೆ ಮಾಡಿದೆ.

ಛತ್ತೀಸ್‍ಗಢದ ಟರ್ರೆಮ್ ಅರಣ್ಯ ಪ್ರದೇಶದಲ್ಲಿ ನಕ್ಸಲರು ಬಿಡುಬಿಟ್ಟಿರುವ ಕುರಿತು ಮಾಹಿತಿ ಕಲೆಹಾಕಿದ್ದ ನಕ್ಸಲ್ ನಿಗ್ರಹ ಪಡೆ ಸಿಆರ್‌ಪಿಎಫ್‌ ನೊಂದಿಗೆ ಜಂಟಿ ಕಾರ್ಯಾಚರಣೆಗೆ ನಡೆಸಿತ್ತು. ಸಿಆರ್‌ಪಿಎಫ್‌ ನ ಕೋಬ್ರಾ ತಂಡ ಮತ್ತು ಜಿಲ್ಲಾ ಮೀಸಲು ಸಶಸ್ತ್ರಪಡೆ ಜಂಟಿ ಕಾರ್ಯಾಚರಣೆಗಿಳಿದು, ನಕ್ಸಲರ ಅಡಗುತಾಣದ ಮೇಲೆ ದಾಳಿ ಮಾಡಿತ್ತು. ಬಳಿಕ ಈ ದಾಳಿಯಲ್ಲಿ 22 ಮಂದಿ ಯೋಧರು ಮೃತಪಟ್ಟು ಹಲವು ಯೋಧರು ನಾಪತ್ತೆಯಾಗಿದ್ದರು.

ಭದ್ರತಾಪಡೆಗಳು ಹಾಗೂ ನಕ್ಸಲರ ನಡುವೆ ಒಟ್ಟು 4 ಗಂಟೆಗಳ ಕಾಲ ನಡೆದ ಗುಂಡಿನ ಕಾಳಗದಲ್ಲಿ 22 ಜನ ಯೋಧರು ಮೃತಪಟ್ಟು ಉಳಿದ ಯೋಧರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಕ್ಸಲ್ ಸಂಘಟನೆಯೊಂದು ಇದೀಗ ಕೋಬ್ರಾ ಯುನಿಟ್‍ನ ಯೋಧರೊಬ್ಬರ ಫೋಟೋವನ್ನು ಕಳುಹಿಸಿ ಈ ಯೋಧ ನಮ್ಮ ವಶದಲ್ಲಿದ್ದಾನೆ ಎಂದು ಪತ್ರದ ಮೂಲಕ ತಿಳಿಸಿದೆ.

ನಕ್ಸಲ್ ಸಂಘಟನೆ ಕಳುಹಿಸಿ ಕೊಟ್ಟಿರುವ ಪತ್ರದಲ್ಲಿ ಈ ಯೋಧನನ್ನು ಬಿಡುಗಡೆ ಮಾಡಬೇಕಾದರೆ ಮಾತುಕತೆ ನಡೆಸಲು ಮಧ್ಯವರ್ತಿಯನ್ನು ನೇಮಿಸುವಂತೆ ಸರ್ಕಾರಕ್ಕೆ ತಿಳಿಸಿದೆ. ನಕ್ಸಲ್ ಸಂಘಟನೆ ಈ ಪತ್ರವನ್ನು ಸ್ಥಳೀಯ ಪತ್ರಕರ್ತರ ಮೂಲಕ ಸರ್ಕಾರಕ್ಕೆ ತಲುಪಿಸಿದೆ. ಹೀಗಾಗಿ ಸರ್ಕಾರ ಅದೇ ಪತ್ರಕರ್ತರನ್ನು ಮಾತುಕತೆಗಾಗಿ ಮಧ್ಯವರ್ತಿಯಾಗಿ ನೇಮಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *