ಧಾರವಾಡ ಅಪಘಾತ, ಸಾವಿನ ಸಂಖ್ಯೆ 11ಕ್ಕೆ ಏರಿಕೆ- ಪ್ರಧಾನಿ ಮೋದಿ ಸಂತಾಪ

Public TV
2 Min Read

ಧಾರವಾಡ: ಟೆಂಪೋ ಹಾಗೂ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ಭೀಕರ ಅಪಘಾತ ನಡೆದಿದ್ದು, ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಕನ್ನಡದಲ್ಲೇ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಇಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತರಾದವರ ಬಗ್ಗೆ ಸಂತಾಪ ಸೂಚಿಸುವೆ. ಈ ಸಂದರ್ಭದಲ್ಲಿ ದುಃಖತಪ್ತ ಕುಟುಂಬಗಳ ನೋವಿನಲ್ಲಿ ನಾನೂ ಭಾಗಿ. ಅಪಘಾತದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುವೆ ಎಂದು ತಿಳಿಸಿದ್ದಾರೆ.

ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಘಟನೆ ನಡೆದಿದ್ದು, ಒಟ್ಟು 11 ಜನ ಸಾವನ್ನಪ್ಪಿದ್ದಾರೆ. 5 ಜನ ಸ್ಥಳದಲ್ಲೇ ಸಾವನ್ನಪ್ಪಿದರೆ, 6 ಜನ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಬಸ್ ದಾವಣಗೆರೆಯಿಂದ ಗೋವಾಗೆ ತೆರಳುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಮೃತರನ್ನು ಡಾ.ವೀಣಾ ಪ್ರಕಾಶ ಮಟ್ಟಿಹಳ್ಳಿ(47), ವರ್ಷೀತಾ ವಿರೇಶ ಬಿರಾದಾರ (45), ಮಂಜುಳಾ ನಟೇಶ (47), ರಾಜೇಶ್ವರಿ ಶಿವಕುಮಾರ ಬಂಡೆಮ್ಮನವರ(40) ಎಲ್ಲರೂ ದಾವಣಗೆರೆಯವರಾಗಿದ್ದಾರೆ. ಟೆಂಪೋ ಚಾಲಕ ಮಲ್ಲಿಕಾರ್ಜುನ ತಿಮ್ಮಪ್ಪ ವಡಗಟ್ಟಿ(26) ರಾಣೇಬೆನ್ನೂರಿನವರೆಂದು ಗುರುತಿಸಲಾಗಿದೆ.

ಒಟ್ಟು 16 ಜನ ಟೆಂಪೋದಲ್ಲಿ ಪ್ರಯಾಣ ಮಾಡುತ್ತಿದ್ದರು. ಇದರಲ್ಲಿ 11 ಜನ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತರೆಲ್ಲರೂ ದಾವಣಗೆರೆಯ ಸೇಂಟ್ ಪಾಲ್ ಸ್ಕೂಲ್ ನ ಬ್ಯಾಚ್‍ಮೇಟ್‍ಗಳಾಗಿದ್ದು, ಎಲ್ಲರೂ ಸೇರಿ ಗೋವಾ ಟ್ರಿಪ್ ಗೆ ಹೊರಟಿದ್ದರು. ಡಿಐಜಿ ಡಿ.ರೂಪಾ ಸಹ ಇದೇ ಬ್ಯಾಚ್ ನವರು ಆಗಿದ್ದರು ಎನ್ನಲಾಗುತ್ತಿದೆ. ಅಲ್ಲದೆ ಡಿಕ್ಕಿ ರಭಸಕ್ಕೆ ಲಾರಿಯಲ್ಲಿದ್ದ ಕ್ಲೀನರ್ ಸಹ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಲಾರಿ ಚಾಲಕ ಪಾರಾಗಿದ್ದಾನೆ.

ಈ ಘಟನೆಯಲ್ಲಿ ದಾವಣಗೆರೆ ಮಾಜಿ ಶಾಸಕ ಗುರುಸಿದ್ದನಗೌಡ ಸೊಸೆ ಕೂಡ ಸಾವನ್ನಪ್ಪಿದ್ದಾಳೆ. ಸದ್ಯ ಘಟನೆಯಲ್ಲಿ ಸಾವನ್ನಪ್ಪಿದ ಕೆಲವರನ್ನು ಗುರುತಿಸಲಾಗಿದೆ. ಇನ್ನುಳಿದವರನ್ನು ಸಂಬಂಧಿಕರು ದಾವಣಗೆರೆಯಿಂದ ಬಂದು ಗುರುತಿಸುತ್ತಿದ್ದಾರೆ. ಘಟನೆ ಬಗ್ಗೆ ಪ್ರಧಾನಿ ಮೋದಿ ಟ್ವಿಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *