ಧನಂಜಯ ಡಿ ಸಿಲ್ವಾ ಹೋರಾಟ – ಶ್ರೀಲಂಕಾಗೆ 4 ವಿಕೆಟ್‍ಗಳ ಜಯ

Public TV
2 Min Read

– ಸರಣಿ 1-1 ಸಮಬಲ

ಕೊಲಂಬೋ: ಧನಂಜಯ ಡಿ ಸಿಲ್ವಾ ಬ್ಯಾಟಿಂಗ್ ಹೋರಾಟ ಮತ್ತು ಬೌಲರ್‍ ಗಳ ಉತ್ತಮ ನಿರ್ವಹಣೆಯಿಂದಾಗಿ ಎರಡನೇ ಟಿ20 ಪಂದ್ಯದಲ್ಲಿ ಭಾರತ ವಿರುದ್ಧ ಶ್ರೀಲಂಕಾ 4 ವಿಕೆಟ್‍ಗಳ ಜಯ ಗಳಿಸಿದೆ. ಈ ಮೂಲಕ ಸರಣಿ 1-1 ಸಮಬಲವಾಗಿದೆ.

ಭಾರತ ನೀಡಿದ 133ರನ್‍ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕ ಆಟಗಾರ ಅವಿಷ್ಕಾ ಫರ್ನಾಂಡೊ ಕೇವಲ 11ರನ್(13 ಎಸೆತ, 2 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿ ಹೊರ ನಡೆದರು. ಆದರೆ ಇನ್ನೋರ್ವ ಆರಂಭಿಕ ಆಟಗಾರ ಮಿನೋಡ್ ಭನುಕಾ ಸಿಡಿಯುವ ಸೂಚನೆ ನೀಡಿದರು ಕೂಡ 36ರನ್(31 ಎಸೆತ, 4ಬೌಂಡರಿ) ಸಿಡಿಸಿ ಔಟ್ ಆದರು.

ಕೆಳಕ್ರಮಾಂಕದಲ್ಲಿ ಬಂದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್ ಕೂಡ ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ನಿಲ್ಲಲಿಲ್ಲ. ಆದರೆ ಮಧ್ಯಮಕ್ರಮಾಂಕದಲ್ಲಿ ಬಂದ ಧನಂಜಯ ಡಿ ಸಿಲ್ವಾ 40ರನ್(34 ಎಸೆತ, 1ಬೌಂಡರಿ, 1 ಸಿಕ್ಸ್) ಬಾರಿಸಿ ಅಜೇಯರಾಗಿ ಕಡೆಯವರೆಗೆ ಹೋರಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಶ್ರೀಲಂಕಾ ತಂಡ 19.4 ಓವರ್‍ ಗಳಲ್ಲಿ 6 ವಿಕೆಟ್ ಕಳೆದುಕೊಂಡು 133ರನ್ ಸಿಡಿಸುವ ಮೂಲಕ ಗೆಲುವಿನ ನಗೆ ಬೀರಿತು.

ಭಾರತ ಪರ ಕುಲ್‍ದೀಪ್ ಯಾದವ್ 2 ವಿಕೆಟ್ ಪಡೆದರೆ. ಚೇತನ್ ಸಕಾರಿಯಾ, ವರುಣ್ ಚಕ್ರವರ್ತಿ, ರಾಹುಲ್ ಚಹರ್ ತಲಾ 1 ವಿಕೆಟ್ ಕಿತ್ತರು.

ಸಾಧರಣ ಮೊತ್ತ ಕಳೆಹಾಕಿದ ಭಾರತ:
ಟಾಸ್ ಸೋತು ಬ್ಯಾಟಿಂಗ್‍ಗಿಳಿದ ಭಾರತ ತಂಡಕ್ಕೆ ಆರಂಭಿಕ ಆಟಗಾರರಾದ ಶಿಖರ್ ಧವನ್ ಮತ್ತು ಋತುರಾಜ್ ಗಾಯಕ್ವಾಡ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‍ಗೆ ಈ ಜೋಡಿ 49ರನ್(42 ಎಸೆತ) ಜೊತೆಯಾಟವಾಡಿತು. ಋತುರಾಜ್ ಗಾಯಕ್ವಾಡ್ 21ರನ್( 18 ಎಸೆತ, 1 ಬೌಂಡರಿ) ಸಿಡಿಸಿ ಪೆವಿಲಿಯನ್ ಸೇರಿದರೆ. ಧವನ್ ಆಟ 40ರನ್(42 ಎಸೆತ,5 ಬೌಂಡರಿ)ಗೆ ಸೀಮಿತವಾಯಿತು. ದೇವದತ್ ಪಡಿಕ್ಕಲ್ 29ರನ್(23 ಎಸೆತ, 1 ಬೌಂಡರಿ, 1 ಸಿಕ್ಸ್) ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಸಂಜು ಸ್ಯಾಮ್ಸನ್, ನಿತೇಶ್ ರಾಣಾ ಒಂದಕ್ಕಿ ಮೊತ್ತಕ್ಕೆ ಔಟ್ ಆಗಿ ನಿರಾಸೆ ಮೂಡಿಸಿದರು. ಕೊನೆಯಲ್ಲಿ ಭುವನೇಶ್ವರ್ ಕುಮಾರ್ 13ರನ್(11 ಎಸೆತ, ) ಬಾರಿಸಿ ಅಜೇಯರಾಗಿ ಉಳಿಯುವುದರೊಂದಿಗೆ ತಂಡದ ಮೊತ್ತವನ್ನು 130ರ ಗಡಿದಾಟಿಸಿದರು. ಅಂತಿಮವಾಗಿ ನಿಗದಿತ 20 ಓವರ್‍ ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿತು.

ಅಕಿಲಾ ದನಂಜಯ 2 ವಿಕೆಟ್ ಪಡೆದರೆ. ವಾನಿಂದು ಹಸರಂಗ , ದಾಸುನ್ ಶಾನಕಾ ಮತ್ತು ದುಷ್ಮಂತ್ ಚಮೀರ ತಲಾ 1 ವಿಕೆಟ್ ಕಿತ್ತರು.

Share This Article
Leave a Comment

Leave a Reply

Your email address will not be published. Required fields are marked *