ದೇಹದ ಅಂಗಾಂಗ ಮಾರಿ ವಿದ್ಯುತ್ ಬಿಲ್ ಕಟ್ಕೊಳ್ಳಿ- ಮೋದಿಗೆ ಪತ್ರ ಬರೆದು ಯುವಕ ಆತ್ಮಹತ್ಯೆ

Public TV
1 Min Read

ಭೋಪಾಲ್: ಯುವಕನೊಬ್ಬ ತನ್ನ ಸಾವಿಗೆ ಕ್ಷುಲ್ಲಕ ಕಾರಣ ಕೊಟ್ಟು ಒಂದು ಪತ್ರದ ಮೂಲಕ ಸುದ್ದಿಯಾಗಿದ್ದಾನೆ. ಕಿರಾಣಿ ಅಂಗಡಿ ನಡೆಸುತ್ತಿದ್ದ ಈತ ವಿದ್ಯುತ್ ಬಿಲ್ ಕಟ್ಟಲಾಗದೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಧ್ಯಪ್ರದೇಶ ಛತರ್‍ಪುರದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಮುನೇಂದ್ರ ರಾಜ್‍ಪುತ್ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಕೊರೊನಾ ಸಂಕಷ್ಟದ ಸಮಯದಲ್ಲಿ ವ್ಯಾಪಾರದಲ್ಲಿ ಕಂಡು ಬಂದ ನಷ್ಟದಿಂದಾಗಿ ಕಳೆದ ಕೆಲ ದಿನಗಳಿಂದ ವಿದ್ಯುತ್ ಬಿಲ್ ಕಟ್ಟಿರಲಿಲ್ಲ. ಇದರಿಂದ ಕಟ್ಟದೆ ಇರುವ ವಿದ್ಯುತ್ ಬಿಲ್‍ನ ಮೊತ್ತ 80,000 ಸಾವಿರ ರೂಪಾಯಿಗೆ ಏರಿತ್ತು. ಹಾಗಾಗಿ ಅಧಿಕಾರಿಗಳು ಬಂದು ವಿದ್ಯುತ್ ನಿಲುಗಡೆಗೊಳಿಸಿದ್ದರು. ಇದರಿಂದ ಯುವಕನ ಅಂಗಡಿ ಮುಚ್ಚಲ್ಪಟ್ಟಿತ್ತು.

ತನ್ನ ಅಂಗಡಿ ಮುಚ್ಚಿದಿದ್ದರಿಂದ ಅವಮಾನವನ್ನು ಸಹಿಸಲಾಗದೆ ಯುವಕ ಮೋದಿಯವರಿಗೆ ಏಳು ಪುಟಗಳ ಡೇತ್ ನೋಟ್ ಬರೆದಿಟ್ಟು ಕಾರ್ಖಾನೆ ಪಕ್ಕದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈತ ಡೇತ್ ನೋಟ್‍ನಲ್ಲಿ ತಿಳಿಸಿರುವಂತೆ ಮೋದಿಯವರೇ ನಾನು ನಿಮ್ಮ ಮೇಲೆ ಅಪಾರವಾದ ಪ್ರೀತಿ ಹಾಗೂ ಗೌರವನ್ನು ಹೊಂದಿದ್ದೇನೆ. ಆದರೆ ಆಡಳಿತದಲ್ಲಿರುವ ಕೆಳಹಂತದ ಅಧಿಕಾರಿಗಳು ಬಡವರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ನಾನು ವಿದ್ಯುತ್ ನಿಗಮ ನೀಡುತ್ತಿದ್ದ ಹಿಂಸೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ದೇಹದ ಅಂಗಾಂಗಗಳನ್ನು ಮಾರಾಟ ಮಾಡಿ ಅವರ ಬಿಲ್ ಪೂರೈಸಿಕೊಳ್ಳುವಂತೆ ಪತ್ರದಲ್ಲಿ ಬರೆದುಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ಯುವಕನ ಸಹೋದರ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *